ಬೆಂಗಳೂರು: ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದಕ್ಕೆ ಆಲೋಚನೆ ಮಾಡುವುದಕ್ಕಿಂತ ಉದ್ಯೋಗದಾತರಾಗಲು ಚಿಂತನೆ ನಡೆಸಬೇಕಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಕೆ. ಶಿವನ್ ತಿಳಿಸಿದರು.
ಶನಿವಾರ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನ, ನವೋದ್ಯಮ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಹಿಂದಿಗಿಂತ ಈಗ ಹೆಚ್ಚಿನ ಅವಕಾಶಗಳಿವೆ. ಇವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉದ್ಯೋಗ ನೀಡುವತ್ತ ಗಮನ ಹರಿಸಬೇಕು. ಪ್ಲೇಸ್ಮೆಂಟ್ ಪಡೆಯುವುದು 2ನೇ ಆಯ್ಕೆಯಾಗಲಿ ಎಂದು ಸಲಹೆ ನೀಡಿದರು.
ಇಸ್ರೋ ವತಿಯಿಂದ ಗಗನಯಾನ, 400 ಕಿಮೀ ಎತ್ತರಕ್ಕೆ ಗಗನಯಾತ್ರಿಗಳನ್ನು ಕೊಂಡೊಯ್ಯುವ ಆಂತರಿಕ್ಷಯಾನ ನಡೆಸುಲಾಗುತ್ತಿದೆ. 2035ಕ್ಕೆ ಇಸ್ರೋದಿಂದ ಸ್ಪೇಸ್ ಸ್ಟೇಷನ್, 2040ಕ್ಕೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿಯೇ ಇಳಿದು ಸಂಶೋಧನೆ ಮಾಡುವಂತಹ ಯೋಜನೆಗಳನ್ನು ಇಸ್ರೋ ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ. ಇಷ್ಟೆಲ್ಲಾ ಸಾಧನೆ ಮಾಡಲು ಯುವಕರ ಸಹಕಾರ ಬೇಕಾಗುತ್ತದೆ. ವಿದ್ಯಾರ್ಥಿಗಳು ನವೋದ್ಯಮದಲ್ಲಿ ತೊಡಗಿಸಿಕೊಂಡು ರಾಷ್ಟ್ರಕ್ಕಾಗಿ ಕೆಲಸ ಮಾಡುವಂತೆ ತಿಳಿಸಿದರು.
ಸೋಲಿಗೆ ಎದೆಗುಂದಬೇಡಿ:
ವಿದ್ಯಾರ್ಥಿಗಳು ನಾವಿತ್ಯತೆ, ಕ್ರಿಯಾಶೀಲ ಮತ್ತು ಹೊಸತನದಿಂದ ಕೆಲಸ ಮಾಡುವತ್ತ ಗಮನ ಹರಿಸಿ. ಯಾವತ್ತೂ ಸೋಲಿಗೆ ಎದೆಗುಂದಬೇಡಿ. ಇಸ್ರೋ ಕೂಡ ಚಂದ್ರಯಾನ-2ರಲ್ಲಿ ಕೊನೇ ಕ್ಷಣದಲ್ಲಿ ಸೋಲಾಗಿತ್ತು. ಮತ್ತೆ ಚಂದ್ರಯಾನ-3 ಕೈಗೊಳ್ಳುವ ಮೂಲಕ ಯಶಸ್ವಿಯಾಯಿತು. ಅದೇ ರೀತಿ ಪ್ರಯತ್ನ ಮುಂದುವರಿಸಿದರೆ, ಯಶಸ್ಸು ಸಿಗಲಿದೆ. ತಮ್ಮ ಗುರಿ ಮಾತ್ರ ಬದಲಾಗದಿರಲಿ ಎಂದು ಹುರಿದುಂಬಿಸಿದರು.
ಯುವಕರು ತಮ್ಮದೇ ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಒಂದು ಬಾರಿ ತೊಡಸಿಗಿಕೊಂಡ ಬಳಿಕ ಕಠಿಣ ಪರಿಶ್ರಮದಿಂದ ದುಡಿಯುವತ್ತ ಗಮನಹರಿಸಿ. ನವೀನ ವಿನ್ಯಾಸಗಳು ಹಾಗೂ ಕ್ರೇಜಿ ಐಡಿಯಾಗಳನ್ನು ಹುಡುಕಲು ಚಿಂತನೆ ಮಾಡಿ. ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಇಸ್ರೋ ಮುಖ್ಯ ಪ್ರಾಧ್ಯಾಪಕ ಡಾ.ಪಿ.ಜಿ. ದಿವಾಕರ್ ಮಾತನಾಡಿ, ಪ್ರಸ್ತುತ ಇಸ್ರೋ ಮಾಡುತ್ತಿರುವ ಕೆಲಸವನ್ನೇ ನವೋದ್ಯಮ, ಎಂಎಸ್ಎಂಇ ಮತ್ತು ಇನ್ಕ್ವಿಬೇಷನ್ ಕೇಂದ್ರಗಳು ಮಾಡುತ್ತಿರುವುದರಂದ ಅವಕಾಶಗಳು ಜಾಸ್ತಿಯಾಗಿವೆ. ಆದ್ದರಿಂದ ಪದವಿ ಬಳಿಕ ಎಲ್ಲರೂ ಇಸ್ರೋದಲ್ಲಿ ಕೆಲಸ ಸಿಕ್ಕಿಲ್ಲವೆಂದು ಬೇಸರ ಮಾಡಿಕೊಳ್ಳುವುದು ಬೇಡ. ಇಸ್ರೋದಂತಹ ಕಂನಿಗಳಲ್ಲಿ ಕೆಲಸ ಪಡೆಯುವ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾಕೋತ್ತರ ಸೇರಿ 800 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ವಿಜ್ಞಾನ, ತಂತ್ರಜ್ಞಾನ, ರಕ್ಷಣಾ ವಿಭಾಗ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುತ್ತಿದೆ. 2027ಕ್ಕೆ ಆರ್ಥಿಕತೆಯಲ್ಲಿ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲು ಯುವಕರು ಕೈಜೋಡಿಸಿ ದೇಶಕ್ಕಾಗಿ ಕೆಲಸ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕಿದೆ. ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ಅಭಿನಂದನೆಗಳು.
– ಕೆ.ಆರ್. ಪರಮಹಂಸ, ಎಎಂಸಿ ಶಿಕ್ಷಣಸಂಸ್ಥೆಗಳ ಅಧ್ಯಕ್ಷ