ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಯೋಗ ನನಗಾಗಿ ಹಾಗೂ ಎಲ್ಲರಿಗಾಗಿ, ಸಮಾಜಕ್ಕಾಗಿ ಎನ್ನುವ ಪರಿಕಲ್ಪನೆ ಇದೆ. ವರ್ಷಕ್ಕೊಂದು ಬಾರಿ ನೆನಪಿಸಿಕೊಳ್ಳುವ ಕಾರ್ಯಕ್ರಮ ಇದಲ್ಲ. ವರ್ಷಪೂರ್ತಿ ಆಚರಿಸುವ, ಅನುಷ್ಠಾನಿಸುವ ಪದ್ಧತಿ ಯೋಗ ಎಂದು ಕುಂದಾಪುರ ವಿಭಾಗ ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್. ಹೇಳಿದರು.
ಯೋಗಬಂಧು ಕುಂದಾಪುರ ಮತ್ತು ಹೋಟೆಲ್ ಪಾರಿಜಾತ ಆಡಳಿತ ವರ್ಗದ ಆಶ್ರಯದಲ್ಲಿ ಯೋಗಬಂಧು ದಿ.ಸಂಜೀವಣ್ಣ ಮತ್ತು ದಿ.ರಾಮಚಂದ್ರ ಭಟ್ ಸ್ಮರಣೆಯೊಂದಿಗೆ ಕುಂದಾಪುರದದಲ್ಲಿ ಜುಲೈ 14ರವರೆಗೆ ಆಯೋಜಿಸಿರುವ ಉಚಿತ ಯೋಗ ಶಿಕ್ಷಣ ತರಬೇತಿ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಕಾರ್ತಿಕ್ ಸ್ಕಾೃನಿಂಗ್ ಸೆಂಟರ್ನ ಡಾ.ಬಿ.ವಿ.ಉಡುಪ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ, ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ.ಜಗದೀಶ್, ಕುಂದಾಪುರ ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಆದರ್ಶ ಹೆಬ್ಬಾರ್, ಉಡುಪಿ ನಾಗಾರ್ಜುನ ಕ್ಲಿನಿಕ್ನ ಡಾ.ಮಹಮ್ಮದ್ ರಫೀಕ್, ಆಯುರ್ವೇದ ತಜ್ಞೆ ಡಾ.ಸೋನಿ ಡಿಕೋಸ್ಟ, ಉದ್ಯಮಿ ಗಣೇಶ್ ಭಟ್, ಪತ್ರಕರ್ತ ಲಕ್ಷ್ಮಿ ಮಚ್ಚಿನ ಉಪಸ್ಥಿತರಿದ್ದರು.
ಯೋಗಬಂಧು ಸಂಜೀವಣ್ಣ ಅವರ ಅಗಲುವಿಕೆಯಿಂದ ತೆರವಾದ ಸ್ಥಾನಕ್ಕೆ ನಾಗೇಶ್ ಅವರನ್ನು ಯೋಗಗುರುಗಳನ್ನಾಗಿ ಸ್ವೀಕರಿಸಿ ಗೌರವಿಸಲಾಯಿತು. ಶಿಬಿರದ ವಿವಿಧ ದಿನಗಳಲ್ಲಿ ಡಾ.ರಫೀಕ್, ಡಾ.ಶ್ರೀಧರ ಬಾಯಿರಿ, ಡಾ.ವಿಷ್ಣುಮೂರ್ತಿ ಐತಾಳ್, ಡಾ.ಸ್ನೇಹಾ ಐತಾಳ್, ಡಾ.ಸೋನಿ ಡಿಕೋಸ್ಟ ಆರೋಗ್ಯ ಮಾಹಿತಿ ನೀಡಲಿದ್ದಾರೆ. ಆದರ್ಶ ಹೆಬ್ಬಾರ್ ಸ್ವಾಗತಿಸಿ, ಉದ್ಯಮಿ ಅನಿಲ್ ಚಾತ್ರ ಕಾರ್ಯಕ್ರಮ ನಿರ್ವಹಿಸಿದರು. ಭಾಸ್ಕರ ಗಾಣಿಗ ವಂದಿಸಿದರು.