ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಹಿಳೆಯರು ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವುದರ ಜತೆಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಮಹಿಳೆಯರಿಗೆ ಗರಿಷ್ಠ ಜವಾಬ್ದಾರಿಗಳಿದ್ದು, ಜತೆಗೆ ತಮ್ಮ ಕನಸು ಮತ್ತು ಆಸೆಗಳನ್ನು ಪೂರೈಸಿಕೊಳ್ಳಲೂ ಪ್ರಯತ್ನಿಸಬೇಕು ಎಂದು ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಹೇಳಿದರು.
ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯ ಈ ರುಡ್ಸೆಟ್ ಸಂಸ್ಥೆಯು 42 ವರ್ಷಗಳಿಂದ ದೇಶದ ಅನೇಕ ಮಹಿಳೆಯರ ಸ್ವ ಉದ್ಯೋಗದ ಕನಸುಗಳನ್ನು ಪೂರ್ಣಗೊಳಿಸಿದೆ. ಉಜಿರೆಯಲ್ಲಿ ಪ್ರಾರಂಭಗೊಂಡ ಈ ರುಡ್ಸೆಟ್ ಸಂಸ್ಥೆ ದೇಶದ ಪ್ರತಿ ಜಿಲ್ಲೆಯಲ್ಲೂ ಮಾದರಿ ಸಂಸ್ಥೆಗಳಾಗಿ ಮುನ್ನಡೆಯುತ್ತಿರುವುದು ನಮಗೆ ಹೆಮ್ಮೆ ಎಂದರು.
ಒಂದು ತಿಂಗಳು ನಡೆದ ಶಿಬಿರದಲ್ಲಿ 32 ಮಹಿಳೆಯರು ಭಾಗವಹಿಸಿದ್ದರು. ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ್ ಬಿ.ಪಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎಂ.ಸುರೇಶ್ ಸ್ವಾಗತಿಸಿ ತರಬೇತಿಯ ಹಿನ್ನೋಟ ವಿವರಿಸಿದರು. ಅಬ್ರಹಾಂ ಜೇಮ್ಸ್ ವಂದಿಸಿದರು. ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.