ಬೆಂಗಳೂರು: ಭಾರತ ತಂಡ 2007ರಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಟಿ20 ವಿಶ್ವಕಪ್ ಗೆದ್ದಾಗ ಚುಟುಕು ಕ್ರಿಕೆಟ್ ಇನ್ನೂ ಹೊಸ ಕ್ರಿಕೆಟ್ ಪ್ರಕಾರವಾಗಿತ್ತು. ಆದರೂ ಆಗಿನ ಯುವ ತಂಡ ಎಲ್ಲರ ನಿರೀಕ್ಷೆ ಮೀರಿಸಿ ವಿಶ್ವ ಚಾಂಪಿಯನ್ ಪಟ್ಟವೇರಿತ್ತು. ನಂತರ 2ನೇ ವಿಶ್ವಕಪ್ ಕಿರೀಟಕ್ಕಾಗಿ ಭಾರತ ಬರೋಬ್ಬರಿ 17 ವರ್ಷಗಳ ಕಾಲ ಕಾಯಬೇಕಾಯಿತು. 2007ರ ಸೆಪ್ಟೆಂಬರ್ 24ರಂದು ಜೊಹಾನ್ಸ್ರ್ಬಗ್ನಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ನಲ್ಲಿ 5 ರನ್ಗಳಿಂದ ಗೆದ್ದು ವಿಶ್ವ ಕಿರೀಟಕ್ಕೆ ಮುತ್ತಿಟ್ಟ ತಂಡದ ಆಟಗಾರರು ಈಗ ಎಲ್ಲೆಲ್ಲಿದ್ದಾರೆ ಗೊತ್ತೇ?
2007ರ ವಿಶ್ವಕಪ್ ವಿಜೇತ ತಂಡದ ನಾಯಕ ಎಂಎಸ್ ಧೋನಿ ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದು, ಮುಂದಿನ ಐಪಿಎಲ್ನಲ್ಲಿ ಮತ್ತೆ ಕಣಕ್ಕಿಳಿಯುವ ಬಗ್ಗೆ ಅವರೀಗ ರಾಂಚಿಯ ಮನೆಯಲ್ಲಿ ಚಿಂತನೆ ನಡೆಸುತ್ತಿದ್ದಾರೆ. 2007ರ ವಿಶ್ವಕಪ್ನಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಆಗಿನ ಯುವ ಆಟಗಾರ ರೋಹಿತ್ ಶರ್ಮ 17 ವರ್ಷಗಳ ಬಳಿಕ ಭಾರತ ಮತ್ತೆ ವಿಶ್ವಕಪ್ ಗೆದ್ದಾಗ ನಾಯಕರಾಗಿರುವುದು ವಿಶೇಷ. ಆಗಿನ ಪ್ರಮುಖ ಆಟಗಾರ ಯುವರಾಜ್ ಸಿಂಗ್ ಈ ಸಲದ ವಿಶ್ವಕಪ್ನಲ್ಲಿ ಪ್ರಚಾರ ರಾಯಭಾರಿಯಾಗಿದ್ದರು. ಆಗಿನ ಫೈನಲ್ ಗರಿಷ್ಠ ರನ್ ಸಾಧಕ ಗೌತಮ್ ಗಂಭೀರ್ ಇದೀಗ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗುವ ಸಿದ್ಧತೆಯಲ್ಲಿದ್ದಾರೆ. ಆಗಿನ ವೇಗಿ ಅಜಿತ್ ಅಗರ್ಕರ್ ಈಗ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಾರೆ.
ಫೈನಲ್ನಲ್ಲೇ ಭಾರತ ಪರ ಪದಾರ್ಪಣೆ ಮಾಡಿದ್ದ ಯೂಸುಫ್ ಪಠಾಣ್ ಇತ್ತೀಚೆಗೆ ಲೋಕಸಭಾ ಚುಣಾವಣೆ ಗೆದ್ದು ಸಂಸದರಾಗಿದ್ದರೆ, ಹರ್ಭಜನ್ ಸಿಂಗ್ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇನ್ನು ದಿನೇಶ್ ಕಾರ್ತಿಕ್, ಇರ್ಫಾನ್ ಪಠಾಣ್, ವೀರೇಂದ್ರ ಸೆಹ್ವಾಗ್, ರಾಬಿನ್ ಉತ್ತಪ್ಪ, ಆರ್ಪಿ ಸಿಂಗ್, ಎಸ್. ಶ್ರೀಶಾಂತ್ ಸದ್ಯ ವೀಕ್ಷಕವಿವರಣೆಯಲ್ಲಿ ತೊಡಗಿಸಿಕೊಂಡಿದ್ದರೆ, ಪೀಯುಷ್ ಚಾವ್ಲಾ ಈಗಲೂ ಐಪಿಎಲ್ ಆಟಗಾರರಾಗಿದ್ದಾರೆ. ಆಗಿನ ಫೈನಲ್ನಲ್ಲಿ ಕೊನೇ ಓವರ್ ಎಸೆದಿದ್ದ ಜೋಗಿಂದರ್ ಶರ್ಮ ಈಗ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಂಪರ್ ಬಹುಮಾನ ಘೋಷಿಸಿದ ಬಿಸಿಸಿಐ!