ಕಿಂಗ್ಸ್ಟೌನ್: ಅಮೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ ಸೂಪರ್ 08 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಅಲ್ರೌಂಡ್ ಪ್ರದರ್ಶನದ ಫಲವಾಗಿ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದು, ಜೂನ್ 27ರಂದು ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಹಾಲಿ ಟೂರ್ನಿಯಲ್ಲಿ ಗಾಯದ ಸಮಸ್ಯೆಯ ನಡುವೆಯೂ ಅಲ್ರೌಂಡ್ ಪ್ರದರ್ಶನ ಮೂಲಕ ಅಫ್ಘಾನಿಸ್ತಾನ ತಂಡವು ಸೆಮಿಫಯನಲ್ ಪ್ರವೇಶಿಸಿರುವುದನ್ನು ಕಂಡು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಅಫ್ಘಾನಿಸ್ತಾನ ತಂಡವು ಮೋಸದಾಟವಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಟಿ20 ವಿಶ್ವಕಪ್ನ 52ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ಆರಂಭಿಕ ರೆಹಮಾನುಲ್ಲಾ ಗುರ್ಬಾಜ್ (43 ರನ್, 55 ಎಸೆತ, 3 ಬೌಂಡರಿ, 1 ಸಿಕ್ಸರ್) ಫಲವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 115 ರನ್ಗಳಿಸಿತ್ತು. ಸುಲಭ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡಕ್ಕೆ ಆರಂಭದಲ್ಲಿ ಮಳೆ ಕಾಡಿತ್ತು. ಪಂದ್ಯವನ್ನು 19 ಓವರ್ಗಳಿಗೆ ಇಳಿಸಿದ ಅಂಪೈರ್ಗಳು ಬಾಂಗ್ಲಾದೇಶಕ್ಕೆ 114 ರನ್ಗಳ ಗುರಿ ನೀಡಿದರು. ಬಾಂಗ್ಲಾಕ್ಕೆ ಆರಂಭಿಕ ಲಿಟನ್ ದಾಸ್ (54 ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಅರ್ಧಶತಕದ ಫಲವಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು, ಈ ವೇಳೆ ಬಾಂಗ್ಲಾದೇಶವನ್ನು ಇನ್ನಿಲ್ಲದಂತೆ ಕಾಡಿದ ಅಫ್ಘಾನಿಸ್ತಾನ ವೇಗಿಗಳಾದ ನವೀನ್ ಉಲ್ ಹಕ್ (3.5-0-26-4), ರಶೀದ್ ಖಾನ್ (4-0-23-0), ಫಜಲಕ್ ಫಾರೂಕಿ (2-0-15-1), ಗುಲ್ಬದ್ದಿನ್ ನೈಯಬ್ (2-0-5-1) ತಂಡವನ್ನು ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: ಈ ಒಂದು ಕಾರಣಕ್ಕೆ ನಾವು ಸೋತೆವು; ಟೀಮ್ ಇಂಡಿಯಾ ವಿರುದ್ಧ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ಕೊಟ್ಟ ಶಕೀಬ್
ಇತ್ತ ಅಫ್ಘಾನಿಸ್ತಾನ ತಂಡದ ಆಟಗಾರ ಗುಲ್ಬದ್ದಿನ್ ನೈಯಬ್ ಅವರು ಮೋಸವಾಟ ಆಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾಯಕ ರಶೀದ್ ಖಾನ್ ಕೂಡ ಅಸಮಾಧಾಗೊಂಡಿದ್ದು, ಈ ಬಗ್ಗೆ ಟೀಮ್ ಇಂಡಿಯಾ ಆಟಗಾರ ಆರ್. ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವ ವೇಳೆ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡು ಗುಲ್ಬದ್ದಿನ್ ವೈದ್ಯರ ಸೂಚನೆ ಮೇರೆಗೆ ಮೈದಾನದಿಂದ ಹೊರನಡೆದರು. ಈ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಅಫ್ಘಾನಿಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್ ಅವರು ಡಗ್ಔಟ್ನಿಂದ ಗುಲ್ಬದ್ದಿನ್ಗೆ ಸೂಚನೆ ನೀಡುತ್ತಾರೆ. ಅದರಂತೆ ಗುಲ್ಬದ್ದಿನ್ ಕಾಲಿನ ನೋವೆಂದು ಹೇಳುತ್ತಾ ಕೆಳಗೆ ಬೀಳುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಕುರಿತು ಟೀಮ್ ಇಂಡಿಯಾ ಆಟಗಾರ ಅಶ್ವಿನ್ ಪ್ರತಿಕ್ರಿಯಿಸಿದ್ದು, ಅಫ್ಘಾನಿಸ್ತಾನ ಆಟಗಾರನ ನಡೆಯನ್ನು ಟೀಕಿಸುತ್ತಿದ್ದಾರೆ. ಈ ಬಗ್ಗೆ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದು, ಕಠಿಣ ಕ್ರಮ ಜರುಗಿಸುವಂತೆ ಐಸಿಸಿಗೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.