ಬೆಂಗಳೂರು: ಬರ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಏರುಗತಿಯಲ್ಲಿದ್ದ ತರಕಾರಿ ಬೆಲೆ, ಇದೀಗ ಇಂಧನ ದರ ಏರಿಕೆಯೂ ಸೇರಿಕೊಂಡು ಮತ್ತೆ ಗಗನಮುಖಿಯಾಗುತ್ತಿದೆ. 2-3 ವಾರಗಳ ಹಿಂದಷ್ಟೇ ತಗ್ಗಿದ್ದ ತರಕಾರಿ ಬೆಲೆ ಮತ್ತೆ ಏರಿಕೆ ಕಂಡಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಬೇಸಿಗೆ ಇರಲಿ, ಮಳೆ ಬರಲಿ ನಾನಾ ಕಾರಣಗಳಿಂದಾಗಿ ವರ್ಷಪೂರ್ತಿ ಹಣ್ಣು-ತರಕಾರಿ ಬೆಲೆ ಹೆಚ್ಚೇ ಇರುತ್ತದೆ. ನಿತ್ಯದ ಬಳಕೆಗೆ ಅಗತ್ಯವಾದ ಆಹಾರ ಪದಾರ್ಥಗಳು ಕೈಗೆಟುಕದಂತಾದರೆ, ಬಡ ಹಾಗೂ ಮಧ್ಯಮ ವರ್ಗದವರು ಬದುಕುವುದಾದರೂ ಹೇಗೆ? ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳಿನಿಂದ ಹುರುಳಿಕಾಯಿ ದರ 200 ರೂ. ಅಸುಪಾಸಿನಲ್ಲಿದ್ದರೆ, ಬಟಾಣಿ ಬೆಲೆ 300 ರೂ.ವರೆಗೆ ಇದೆ. ಅದರಲ್ಲೂ ನಾಟಿ ಬಟಾಣಿ ದರ ಕೆ.ಜಿ. ಗೆ 800 ರೂ., ಕ್ಯಾಪ್ಸಿಕಂ 120 ರೂ., ಹಸಿ ಮೆಣಸಿನಕಾಯಿ 80-100 ರೂ., ಬದನೆಕಾಯಿ, ಸೀಮೆಬದನೆ, ಮೂಲಂಗಿ, ಬೆಂಡೆಕಾಯಿ 60-80 ರೂ. ಇದೆ. ಪ್ರತಿದಿನ ಅಡುಗೆಗೆ ಅಗತ್ಯವಾಗಿ ಬಳಕೆ ಮಾಡುವ ಟೊಮ್ಯಾಟೊ ಬೆಲೆಯೂ 100ರ ಗಡಿ ದಾಟಿದೆ. ಸೊಪ್ಪುಗಳ ದರ ಕೂಡ ಒಂದು ಕಟ್ಟಿಗೆ 60 ರೂ. ಆಗಿದೆ.
ಮಾರ್ಚ್, ಏಪ್ರಿಲ್ನಲ್ಲಿ ಅಧಿಕ ತಾಪಮಾನ ಒಂದೆಡೆಯಾದರೆ, ಮತ್ತೊಂದೆಡೆ ಬರದ ಬೇಗೆಯಿಂದ ನೀರಿನ ಸಮಸ್ಯೆ ಎದುರಾಗಿ ತರಕಾರಿ ಬೆಲೆ ಹೆಚ್ಚಾಗಿತ್ತು. ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮೇ ಆರಂಭದಿಂದ ಸುರಿದ ಮಳೆಯಿಂದಾಗಿ ಕೆಲ ಬೆಳೆಗಳಿಗೆ ಹಾನಿ ಉಂಟಾಯಿತು. ಇದರಿಂದ ಬೀನ್ಸ್, ಹಸಿ ಮೆಣಸಿನಕಾಯಿ, ಹೀರೇಕಾಯಿ, ಚಪ್ಪರದವರೆ, ಸೊಪ್ಪಿನ ದರ ಮತ್ತೆ ಹೆಚ್ಚಳವಾಯಿತು.
ದಿಢೀರ್ ಏರಿದ ಬಾಳೆ: ಬೇಸಿಗೆಯಲ್ಲಿ ಬಾಳೆಹಣ್ಣುಗಳನ್ನು ಕೇಳುವವರೇ ಇರಲಿಲ್ಲ. ಕೆ.ಜಿ.ಗೆ 40-50 ರೂ. ಇತ್ತು. ಈಗ ಏಕಾಏಕಿ ಏಲಕ್ಕಿ ಬಾಳೆ 80 ರೂ.ಗೆ ಏರಿಕೆಯಾಗಿದೆ. ಮಳೆಯಿಂದಾಗಿ ಹಲವು ಕಡೆ ಬಾಳೆ ಬೆಳೆ ಹಾಳಾಗಿದೆ. ಜತೆಗೆ ಮದುವೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳು ಹೆಚ್ಚಾಗಿರುವುದರಿಂದ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಬೆಲೆಯೂ ಏರಿಕೆಯಾಗಿದೆ.
ನಾಟಿ ಕೊತ್ತಂಬರಿ ಸೊಪ್ಪು ಏರಿಕೆ: ಮಳೆಯಿಂದ ಸೊಪ್ಪಿನ ಬೆಳೆಗಳು ಹಾಳಾಗಿದ್ದು, ದರ ಏರಿಕೆಯಾಗಿದೆ. ನಾಟಿ ಕೊತ್ತಂಬರಿ ಸೊಪ್ಪು ಒಂದು ಕಂತೆಗೆ 80-100 ರೂ. ದರವಿದೆ. ಸಬ್ಬಕ್ಕಿ, ಮೆಂತ್ಯ ಸೊಪ್ಪಿನ ದರವೂ ಗಗನಕ್ಕೇರಿದ್ದು, ಒಂದು ಕಂತೆ 50-60 ರೂ.ನಂತೆ ಮಾರಾಟವಾಗುತ್ತಿದೆ.
ಆಷಾಢದಲ್ಲಿ ಇಳಿಕೆ ಸಾಧ್ಯತೆ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಆನೇಕಲ್, ತುಮಕೂರು, ನೆಲಮಂಗಲ ಮತ್ತಿತರ ಭಾಗಗಳಿಂದ ಬೆಂಗಳೂರಿಗೆ ತರಕಾರಿಗಳು ಬರುತ್ತವೆ. ಸದ್ಯ ಆಲೂಗಡ್ಡೆ ಹೊರತುಪಡಿಸಿ ಯಾವ ತರಕಾರಿಯೂ 70 ರೂ.ಗಿಂತ ಕಡಿಮೆಯಿಲ್ಲ. ಕೆಲವು 150-180 ರೂ.ವರೆಗೆ ಏರಿಕೆಯಾಗಿವೆ. ಸೀಸನ್ ಅಲ್ಲದ ಕಾರಣ ಬಟಾಣಿ ದರ 200ರ ಗಡಿ ದಾಟಿದೆ. ಆಷಾಢದಲ್ಲಿ ಬೆಲೆಗಳು ಸ್ವಲ್ಪ ಇಳಿಕೆಯಾಗುವ ಸಾಧ್ಯತೆಯಿದೆ. ಅಲ್ಲಿಯವರೆಗೂ ಇದೇ ರೀತಿಯಲ್ಲಿ ಬೆಲೆ ಏರಿಕೆ ಮುಂದುವರಿಯತ್ತದೆ ಎನ್ನುತ್ತಾರೆ ದಾಸನಪುರ ಎಪಿಎಂಸಿ ಮಾರುಕಟ್ಟೆಯ ಸಗಟು ವ್ಯಾಪಾರಿ ಶಿವಶಂಕರ್.
ಹಾಪ್ ಕಾಮ್ಸ್ನಲ್ಲಿ ತರಕಾರಿ ದರ (ಕೆ.ಜಿ.ಗೆ)
ಬೀನ್ಸ್ 220 ರೂ.
ನುಗ್ಗೆಕಾಯಿ 184 ರೂ.
ಬಜ್ಜಿ ಮೆಣಸಿನಕಾಯಿ 114 ರೂ.
ಕ್ಯಾಪ್ಸಿಕಾಂ 114ರೂ.
ಹೀರೇಕಾಯಿ 108 ರೂ.
ಬಿಳಿ ಬದನೆ 100 ರೂ.
ಟೊಮ್ಯಾಟೊ 99 ರೂ.
ನವಿಲುಕೋಸು 98 ರೂ.
ಹಾಗಲಕಾಯಿ 94ರೂ.
ಹಸಿಮೆಣಸಿನಕಾಯಿ 92 ರೂ.
ಕ್ಯಾರಟ್ ಊಟಿ 92 ರೂ.
ಗೋರಿಕಾಯಿ 80 ರೂ.
ಮೂಲಂಗಿ 70 ರೂ.
ಬೆಂಡೆಕಾಯಿ 65 ರೂ.
ಕೋಟ್:
* 25 ವರ್ಷಕ್ಕೂ ಹೆಚ್ಚು ಕಾಲ ತರಕಾರಿ ವ್ಯಾಪಾರದಿಂದಲೇ ಕುಟುಂಬ ನಡೆಸುತ್ತಿದ್ದೇವೆ. ಕಳೆದ 5-6 ತಿಂಗಳಿಂದ ಹಾಕಿದ ಬಂಡವಾಳ ಸಿಕ್ಕರೆ ಸಾಕು ಎನ್ನುವಂತಾಗಿದೆ. ದರ ಹೆಚ್ಚಳದಿಂದಾಗಿ ಗ್ರಾಹಕರು ತರಕಾರಿ ಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ.
– ವಿಜಯಮ್ಮ, ತರಕಾರಿ ವ್ಯಾಪಾರಿ
* ತರಕಾರಿ ಪೂರೈಕೆಯಲ್ಲಿ ಸಮಸ್ಯೆ ಇಲ್ಲ. ಆದರೆ ಬೆಲೆ ಏರಿಕೆಯಿಂದ ಜನರು ಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ. ಅಲ್ಲದೆ ಗಾಂಧಿ ಬಜಾರ್ನಲ್ಲಿ ತರಕಾರಿ ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದರು. ಈಗ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ. ಇಲ್ಲಿಗೆ ಗ್ರಾಹಕರು ಬರುವುದು ಕಡಿಮೆಯಾಗಿದೆ.
– ಸುಶೀಲ, ತರಕಾರಿ ವ್ಯಾಪಾರಿ
* ಇಂದೆರಡು ವರ್ಷಗಳಿಂದ ಎಲ್ಲ ದಿನವೂ ತರಕಾರಿ ದರ ಹೆಚ್ಚೇ ಇರುತ್ತದೆ. ಒಮ್ಮೆ ಮಳೆ, ಮತ್ತೊಮ್ಮೆ ಬರ, ಇದೀಗ ಇಂದನ ಏರಿಕೆ ಹೀಗೆ ಬೆಲೆ ಏರಿಕೆಗೆ ಸದಾ ಒಂದಿಲ್ಲೊಂದು ಕಾರಣ ಇದ್ದೇ ಇರುತ್ತದೆ. ಹಾಗಾಗಿ ಸರ್ಕಾರ ಕನಿಷ್ಠ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಕಡಿಮೆ ಬೆಲೆಗೆ ಹಣ್ಣು ತರಕಾರಿ ದೊರೆಯುವಂತೆ ಕ್ರಮ ವಹಿಸಬೇಕು. ಇದಕ್ಕಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.
– ಸುರೇಶ್, ಗ್ರಾಹಕ