ಲಖನೌ: ಯುಜಿಸಿ ನೆಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಈಗಾಗಲೇ ದೇಶದಲ್ಲಿ ಸಾಕಷ್ಟು ಕೋಲಾಹಲ ಎದ್ದಿದೆ. ಈ ಹಿಂದೆ ಉತ್ತರ ಪ್ರದೇಶದಲ್ಲಿ ಕಾನ್ಸ್ಟೇಬಲ್ ನೇಮಕಾತಿ ಮತ್ತು ಆರ್ಒ, ಎಆರ್ಒ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ತಿಳಿದ ತಕ್ಷಣ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಸರ್ಕಾರಿ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ನಿಲ್ಲಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.
ಇದನ್ನು ಓದಿ: ಜುಲೈನಲ್ಲಿ ರಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ?; ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸುಗ್ರೀವಾಜ್ಞೆಗೆ ಪ್ರಸ್ತಾವನೆಯನ್ನು ತಂದಿದೆ. ಈ ಸುಗ್ರೀವಾಜ್ಞೆಯ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. ಈ ಸುಗ್ರೀವಾಜ್ಞೆಯು ಎಲ್ಲಾ ಸಾರ್ವಜನಿಕ ಸೇವಾ ನೇಮಕಾತಿ ಪರೀಕ್ಷೆಗಳು, ಕ್ರಮಬದ್ಧಗೊಳಿಸುವಿಕೆ ಅಥವಾ ಬಡ್ತಿ ಪರೀಕ್ಷೆಗಳು, ಪದವಿ ಡಿಪ್ಲೋಮಾಗಳಿಗೆ ಪ್ರವೇಶ ಪರೀಕ್ಷೆಗಳು, ಪ್ರಮಾಣಪತ್ರಗಳು ಅಥವಾ ಶೈಕ್ಷಣಿಕ ಪ್ರಮಾಣಪತ್ರಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ.
ನಕಲಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವುದು ಮತ್ತು ನಕಲಿ ಉದ್ಯೋಗ ವೆಬ್ಸೈಟ್ಗಳನ್ನು ನಡೆಸುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ. ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ 2 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಹಾಗೂ ಪೇಪರ್ ಸೋರಿಕೆ ಅಥವಾ ಇತರ ಕಾರಣಗಳು ಪರೀಕ್ಷೆ ಮೇಲೆ ಪರಿಣಾಮ ಬೀರಿದರೆ, ಕಾರಣರಾದವರಿಂದಲೇ ಅದಕ್ಕೆ ತಗಲುವ ವೆಚ್ಚವನ್ನು ವಸೂಲಿ ಮಾಡುವ ಮೂಲಕ ಸರಿದೂಗಿಸಲಾಗುತ್ತದೆ. ಅಲ್ಲದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವ ಕಂಪನಿಗಳು ಮತ್ತು ಸೇವಾ ಪೂರೈಕೆದಾರರನ್ನು ಶಾಶ್ವತವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಯುಪಿ ಸರ್ಕಾರ ಹೇಳಿದೆ.
ಲೋಕಸಭೆ ಚುನಾವಣೆ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರು ನಕಲು ಮಾಫಿಯಾಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ತರುವುದಾಗಿ ಹೇಳಿದ್ದರು. ಇದೀಗ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. (ಏಜೆನ್ಸೀಸ್)
ಪಕ್ಷದ ಇಮೇಜ್ಗೆ ಧಕ್ಕೆ ತರುವವರನ್ನು ಸೇರಿಸುವುದಿಲ್ಲ; ಶರದ್ ಪವಾರ್