ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿಯಲ್ಲಿ ಕಂದಾಯ ಸರ್ಕಲ್, ಸಬ್ ರಿಜಿಸ್ಟಾರ್ ಕಚೇರಿ ಆರಂಭಿಸಬೇಕು. ಕಾರ್ಕಳದಲ್ಲಿರುವ ಸಿವಿಲ್ ನ್ಯಾಯಾಲಯದ ಒಂದು ವಿಭಾಗವನ್ನು ಹೆಬ್ರಿಯಲ್ಲಿ ತೆರೆಯಬೇಕು. ಡೀಮ್ಡ್ ಫಾರೆಸ್ಟ್ನಿಂದ ವಿರಹಿತಗೊಳಿಸಿದ ಜಮೀನಿನ ವಿವರಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ತಾಲೂಕು ಆಡಳಿತಕ್ಕೆ ನೀಡಬೇಕು ಎಂಬ ಆಗ್ರಹ ಹೆಬ್ರಿ ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾಧಿಕಾರಿ ಜನಸ್ಪಂದನ ಸಭೆಯಲ್ಲಿ ವ್ಯಕ್ತವಾಯಿತು.
ಹೆಬ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾೃನಿಂಗ್, ಎಕ್ಸ್ರೇ ವ್ಯವಸ್ಥೆ ಸಹಿತ ಪ್ರಮುಖ ಚಿಕಿತ್ಸೆ ಲಭ್ಯವಿಲ್ಲ. ರಾತ್ರಿ ಹೊತ್ತು ಶವ ಮಹಜರು ಮಾಡಲು ಸಮಸ್ಯೆಯಾಗುತ್ತದೆ. ರಾತ್ರಿ ಪಾಳಿ ತಜ್ಞವೈದ್ಯರನ್ನು ನೇಮಿಸಬೇಕು. ಜನರಿಗೆ ಬೇಕಾದ ಅಗತ್ಯ ಚಿಕಿತ್ಸೆ ಸೂಕ್ತ ಕಾಲದಲ್ಲಿ ಸಿಗುತ್ತಿಲ್ಲ. ಮೂಲಸೌಕರ್ಯ ಕೊರತೆ ಇರುವುದರಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂಬ ಆಗ್ರಹ ಕೇಳಿ ಬಂತು.
ಹಲವು ಸಮಸ್ಯೆ
ಹೆಬ್ರಿ ವಿಶ್ವಕರ್ಮ ಸಮುದಾಯ ಸಂಘಕ್ಕೆ ಜಮೀನು ಮಂಜೂರು, ಹೆಬ್ರಿ ಸಾರ್ವಜನಿಕ ಗಣೇಶೋತ್ಸವದ ವಾಹನ ನಿಲುಗಡೆಗೆ ರಾಮ ಮಂದಿರದ ಎದುರು ಜಾಗದ ವ್ಯವಸ್ಥೆ, ಹೆಬ್ರಿ ಕನ್ಯಾನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ ಟರ್ನ್ ಅವಕಾಶ, 94ಸಿ, 94ಸಿಸಿ, ಅಕ್ರಮ-ಸಕ್ರಮ ಹಕ್ಕುಪತ್ರ, ಮನೆ ನಿವೇಶನ ನೀಡುವುದು… ಹೀಗೆ ಹಲವು ಮನವಿಗಳನ್ನು ಸಾರ್ವಜನಿಕರು ಸಲ್ಲಿಸಿದರು.
ಹೆಬ್ರಿಯಲ್ಲಿ ರೈತ ಸಂಪರ್ಕ ಕೇಂದ್ರ, ಅಪಾಯಕಾರಿ ಮರಗಳ ತೆರವು, ಹೆಬ್ರಿ ಪೇಟೆಯಲ್ಲಿ ಪೊಲೀಸ್ ಹೊರಠಾಣೆ, ನಾಡ್ಪಾಲಿನಲ್ಲಿ ಕಾಡಾನೆ ದಾಳಿಯಿಂದ ಕೃಷಿಕರ ರಕ್ಷಣೆ, ಮುಚ್ಚಿದ ಖಾಸಗಿ ರಸ್ತೆ ತೆರವುಗೊಳಿಸುವುದು, ಸರ್ಕಾರಿ ಜಮೀನು ಅತಿಕ್ರಮಣ ತೆರವು, ಹೆಬ್ರಿ ಮಾದರಿ ಶಾಲೆಗೆ ಹೆಚ್ಚುವರಿ ಕಟ್ಟಡ, ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ ಸೇವೆ ಸೇರಿದಂತೆ ಹಲವು ಮನವಿಗಳನ್ನು ಸಾರ್ವಜನಿಕರು ಜನಸ್ಪಂದನದಲ್ಲಿ ಗಮನಕ್ಕೆ ತಂದರು.
ಹೆಬ್ರಿಗೆ ಸರ್ಕಾರಿ ಬಸ್ ಬೇಡಿಕೆಯಿದೆ. ಗಂಭಿರವಾಗಿ ಪರಿಗಣಿಸಿ ಬಸ್ ಸೌಲಭ್ಯ ಒದಗಿಸಲು ಸರ್ಕಾರ ಮತ್ತು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು. ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ, ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್, ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆಜಿ, ಕಾರ್ಕಳ ಡಿವೈಎಸ್ಪಿ ಅರವಿಂದ ಕಜಗುಜ್ಜಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಶರತ್ ಕುಮಾರ್ ಶೆಟ್ಟಿ ನಿರೂಪಿಸಿ, ತಹಸೀಲ್ದಾರ್ ಪ್ರಸಾದ್ ಸ್ವಾಗತಿಸಿದರು. ಸಾಮಾಜಿಕ ಮುಖಂಡ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಪ್ರಗತಿಪರ ನಾಗರಿಕರ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ, ಹುತ್ತುರ್ಕೆ ಸದಾಶಿವ ಪ್ರಭು, ಹೆಬ್ರಿ ಸತೀಶ ಪೈ ಮತ್ತಿತರರು ಮನವಿ ಸಲ್ಲಿಸಿದರು.
ಆದ್ಯತೆಯಲ್ಲಿ ಅರ್ಜಿ ವಿಲೇ
ಹೆಬ್ರಿಯಲ್ಲಿ ನಡೆದ ಜನಸ್ಪಂದನದಲ್ಲಿ 44 ಅರ್ಜಿ ಬಂದಿದೆ. ಎಲ್ಲ ಅರ್ಜಿಗಳನ್ನು ಕಾನೂನು ಪ್ರಕಾರ ಆದ್ಯತೆಯಲ್ಲಿ ಬಗೆಹರಿಸುತ್ತೇವೆ. ಉಳಿದ ಅರ್ಜಿಗಳನ್ನು ಇಲಾಖೆ ಉನ್ನತಾಧಿಕಾರಿಗಳ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಕೆಲವು ರಸ್ತೆ ಸಮಸ್ಯೆಗೆ ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸಲು ಸೂಚಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.