More

    ಮುಂದಿನ ತಲೆಮಾರಿಗೆ ಪತ್ರಿಕೋದ್ಯಮ ಆಕರ್ಷಣೀಯವಾಗಲಿ

    ಉಡುಪಿ: ಪತ್ರಕರ್ತರು ಕೆಲಸದ ಜೊತೆಗೆ ಜನರ ಸಮಸ್ಯೆಗೆ ಸ್ಪಂದಿಸುವುದು ಅತೀ ಮುಖ್ಯ. ಸೇವೆಯ ಮೂಲಕವೇ ಸಮಾಜವನ್ನು ತಿದ್ದುವ ಕಾರ್ಯ ಮಾಡಬಹುದು. ಮುಂದಿನ ಜನಾಂಗಕ್ಕೆ ಪತ್ರಿಕೋದ್ಯಮ ಕ್ಷೇತ್ರ ಆಕರ್ಷಣೀಯವಾಗಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ನಡೆಸಬೇಕು ಎಂದು ಮಣಿಪಾಲ ಎಂಐಸಿ ಟೆವಿಷಜನ್​ ಮತ್ತು ಫಿಲ್ಮ್​ ಪ್ರೊಡಕ್ಷನ್​ ವಿಭಾಗದ ಪ್ರೊಫೆಸರ್​ ಆಫ್​ ಪ್ರಾಕ್ಟಿಸ್​ ಸತ್ಯಬೋಧ ಜೋಶಿ ಹೇಳಿದ್ದಾರೆ.

    ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಜನರು ಏನನ್ನು ಬಯಸುತ್ತಾರೆಯೇ ಅದನ್ನೇ ಟಿವಿ ಮಾಧ್ಯಮಗಳು ತೋರಿಸುತ್ತವೆ. ಸಾಹಿತ್ಯದ ಕಾರ್ಯಕ್ರಮಗಳನ್ನು ಟಿವಿ ಮಾಧ್ಯಮಗಳಲ್ಲಿ ತೋರಿಸಿದರೆ ಎಷ್ಟು ಜನ ನೋಡುತ್ತಾರೆ ಎಂಬುದು ಪ್ರಶ್ನೆ. ಆದ್ದರಿಂದ ಸಮಾಜದ ಉದ್ಧಾರಕ್ಕೆ ಜನರು ಕೂಡ ಬದಲಾಗಬೇಕಾಗಿದೆ ಎಂದರು. ಸಮಾಜವನ್ನು ಸುಧಾರಿಸಲು ಹೊರಟ ಪತ್ರಕರ್ತರು ವೈಯಕ್ತಕ ಬದುಕನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ. ಅದರ ಕಡೆ ನಾವು ಲಕ್ಷ ವಹಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಜಗತ್ತು ಶ್ರಮ ವಹಿಸಿ ಕೆಲಸ ಮಾಡುವುದರಿಂದ ನಡೆಯುತ್ತೆ ಹೊರತು ಸಿದ್ಧಾಂತದಿಂದ ಅಲ್ಲ. ಹಾಗಾಗಿ ಸಿದ್ಧಾಂತಕ್ಕಿಂತ ಕೆಲಸ ಮುಖ್ಯ ಎಂದರು.

    ಜಿಲ್ಲಾ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಎಸ್​.ಟಿ.ಸಿದ್ಧಲಿಂಗಪ್ಪ, ಪೊಲೀಸ್​ ತನಿಖೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾಧ್ಯಮಗಳು ಜನರ ಭಾವನೆಗಳ ಕಡೆ ಹೆಚ್ಚು ಗಮನ ಕೊಡದೇ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾಗಿದೆ. ಇಂದು ಜನರ ಮನಸ್ಥಿತಿ ಕೂಡ ಬದಲಾಗಿ, ನಕಾರಾತ್ಮಕ ಸುದ್ದಿಯ ಕಡೆ ಹೋಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆ ಬಗ್ಗೆ ನಾವೆಲ್ಲ ಆಲೋಚನೆ ಮಾಡಬೇಕಾಗಿರುವುದು ಅತೀ ಅಗತ್ಯ ಎಂದು ಹೇಳಿದರು. ಶಾಸಕಾಂಗ, ನ್ಯಾಯಾಂಗ, ಕಾಯಾಂರ್ಗಗಳು ಎಸಗುವ ಲೋಪಗಳನ್ನು ಜನರ ಮುಂದೆ ಇಡುವುದು ಮಾಧ್ಯಮದ ಜವಾಬ್ದಾರಿ. ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸ್ವಾಸ್ಥ ಸಮಾಜ ನಿಮಾರ್ಣ ಸಾಧ್ಯವಾಗುತ್ತದೆ ಎಂದರು.

    ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮೀ, ಬಡಗಬೆಟ್ಟು ಕ್ರೆಡಿಟ್​ ಕೋಆಪರೇಟಿವ್​ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಅಜಯ್​ ಪಿ.ಶೆಟ್ಟಿ ಮಾತನಾಡಿದರು.

    ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ನಿವೃತ್ತ ಉಪಸಂಪಾದಕ ಜಯಾನಂದ ಅವರನ್ನು ಸನ್ಮಾನಿಸಲಾಯಿತು.

    ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್​ ಕುಮಾರ್​ ಶಿರೂರು, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್​ ಅರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್​ ಮಾರ್ಪಳ್ಳಿ ವಂದಿಸಿದರು. ಅವಿನಾಶ್​ ಕಾಮತ್​ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts