More

    ಪ್ರವಾಸಿತಾಣ ಸಮುದ್ರಪಾಲು : ಮನವಿಗೆ ಸ್ಪಂದಿಸದ ಇಲಾಖೆ ; ಅಪಾಯದಲ್ಲಿ ಬ್ರೇಕ್ ವಾಟರ್ ತಡೆಗೋಡೆ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಳಿವೆಯಲ್ಲಿ ನಿರ್ಮಿಸಲಾಗಿರುವ ಬ್ರೇಕ್ ವಾಟರ್ ತಡೆಗೋಡೆ ಅಪಾಯದಲ್ಲಿದ್ದು, ಕಡಲಿನ ಅಲೆಯ ಅಬ್ಬರಕ್ಕೆ ಬ್ರೇಕ್ ವಾಟರ್ ತಡೆಗೋಡೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಬ್ರೇಕ್ ವಾಟರ್ ತಡೆಗೋಡೆ ಬುಡದಲ್ಲಿದ್ದ ಕಲ್ಲುಗಳು, ವಿಶಿಷ್ಟ ವಿನ್ಯಾಸದ ಕಾಂಕ್ರೀಟ್ ಸ್ಲಾಬ್‌ಗಳು ಜಾರುತ್ತಿದೆ.

    ತಡೆಗೋಡೆ ನಡುವೆ ಕಂದಕ

    ಪ್ರತಿವರ್ಷ ಮಳೆಗಾಲದಲ್ಲಿ ಅಲೆಗಳ ಅಬ್ಬರಕ್ಕೆ ನಲುಗಿ ಬ್ರೇಕ್ ವಾಟರ್ ತಡೆಗೋಡೆ ಕುಸಿಯಲಾರಂಭಿಸಿದೆ. ದಿನೇ ದಿನೆ ಹೆಚ್ಚುತ್ತಿರುವ ಅಲೆಗಳ ಅಬ್ಬರಕ್ಕೆ ಕಲ್ಲುಗಳು ಕಡಲಿಗೆ ಜಾರುತ್ತಿದ್ದು, ತಡೆಗೋಡೆಯಲ್ಲಿ ಬಿರುಕು ಮೂಡಿದೆ. ತಡೆಗೋಡೆ ಕಲ್ಲುಗಳು ಜಾರುತ್ತಿರುವುದರಿಂದ ತಡೆಗೋಡೆ ಮೇಲೆ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ ಮತ್ತು ತಡೆಗೋಡೆ ನಡುವೆ ಕಂದಕ ನಿರ್ಮಾಣವಾಗಿದೆ. ಸಂಭವನೀಯ ಅಪಾಯ ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂಬ ಸ್ಥಳೀಯರು ಆಗ್ರಹಿಸಿದ್ದಾರೆ.

    ಬೇಡಿಕೆಗಿಲ್ಲ ಮನ್ನಣೆ

    2016ರಲ್ಲಿ ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ಆರಂಭಗೊಂಡು ಗಂಗೊಳ್ಳಿ ಭಾಗದಿಂದ 750 ಮೀ. ಪಶ್ಚಿಮಕ್ಕೆ ಸಮುದ್ರದಲ್ಲಿ ಬ್ರೇಕ್‌ವಾಟರ್ ಕಾಮಗಾರಿ ನಡೆದಿತ್ತು. ಬ್ರೇಕ್ ವಾಟರ್ ತಡೆಗೋಡೆಯನ್ನೇ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸೀವಾಕ್ ಆಗಿ ಪರಿವರ್ತಿಸಬೇಕೆಂಬ ಬೇಡಿಕೆ ಇದ್ದರೂ, ಈವರೆಗೆ ಸೀವಾಕ್ ನಿರ್ಮಾಣ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಬ್ರೇಕ್ ವಾಟರ್ ತಡೆಗೋಡೆ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ವಾರಾಂತ್ಯದಲ್ಲಿ ಮಕ್ಕಳು, ಮಹಿಳೆಯರು ಎಂದು ಸಾವಿರಾರು ಪ್ರವಾಸಿಗರು ಆಗಮಿಸಿ ನದಿ ಮತ್ತು ಸಮುದ್ರದ ಸಂಗಮ ಸ್ಥಳದ ಆಸ್ವಾದ ಸವಿಯುತ್ತಿದ್ದಾರೆ. ಅಂದಾಜು 1 ಕಿ.ಮೀ. ಉದ್ದದ ಬ್ರೇಕ್ ವಾಟರ್ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು.

    ಮೀನುಗಾರ ಆಗ್ರಹ

    ಕೆಲ ವರ್ಷಗಳ ಹಿಂದೆ ಕಡಲಿನ ಅಲೆಯ ಅಬ್ಬರಕ್ಕೆ ತಡೆಗೋಡೆ ಅಪಾಯಕ್ಕೆ ಸಿಲುಕಿತ್ತು. ಗೋಡೆ ರಕ್ಷಣೆಗೆಂದು ಹಾಕಿರುವ ಟೆಟ್ರಾಪೋಡ್, ಶಿಲೆಯ ಕಲ್ಲುಗಳು ಜಾರಿದ್ದವು. ಸ್ಥಳೀಯರು ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ತಡೆಗೋಡೆ ದುರಸ್ತಿಪಡಿಸುವಂತೆ ಮನವಿ ಮಾಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸ್ಥಳೀಯ ಮೀನುಗಾರರಿಂದ ಕೇಳಿ ಬಂದಿದೆ.

    ಗಂಗೊಳ್ಳಿ ಬಂದರಿನ ಬ್ರೇಕ್ ವಾಟರ್ ತಡೆಗೋಡೆ ಅಪಾಯ ಎದುರಿಸುತ್ತಿದೆ. ಸಮುದ್ರದ ಅಲೆಯ ಹೊಡೆತಕ್ಕೆ ಕಾಂಕ್ರೀಟ್ ಸ್ಲಾಬ್, ಕಲ್ಲುಗಳು ಜಾರುತ್ತಿವೆ. ತಡೆಗೋಡೆಯಲ್ಲಿ ಬಿರುಕು ಮೂಡಿದೆ. ಸಂಭವನೀಯ ಅಪಾಯ ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು.
    -ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

    ಗಂಗೊಳ್ಳಿ ಬ್ರೇಕ್ ವಾಟರ್ ತಡೆಗೋಡೆ ಕುಸಿತ ಹಾಗೂ ಬಿರುಕು ಬಿಟ್ಟಿರುವ ಬಗ್ಗೆ ಸಿಡಬ್ಲುೃಪಿಆರ್‌ಎಸ್ ಅವರೊಂದಿಗೆ ಮಾತುಕತೆ ನಡೆಸಿ ವರದಿ ಪಡೆದು ತಡೆಗೋಡೆ ದುರಸ್ತಿ ಬಗ್ಗೆ ಕ್ರಮಕೈಗೊಳ್ಳುವ ಸಂಬಂಧ ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆದರೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಇದರ ಮೀನುಗಾರಿಕೆ ಇಲಾಖೆ ಅನುದಾನ ಒದಗಿಸಬೇಕಿದೆ.
    -ಶೋಭಾ ಕೆ., ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts