ಗಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಆಂಗ್ಲರ ವಿರುದ್ಧ ಜಯಿಸುವ ಮೂಲಕ ಫೈನಲ್ಗೇರಿದ್ದು, 2022ರಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಇದರ ಜೊತೆಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅಜೇಯವಾಗಿ ಫೈನಲ್ಗೇರಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (57 ರನ್, 39 ಎಸೆತ, 6 ಬೌಂಡರಿ, 2 ಸಿಕ್ಸರ್), ಸೂರ್ಯಕುಮಾರ್ ಯಾದವ್ (47 ರನ್, 36 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟದ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ಗಳಿಸಿತ್ತು. ಕಠಿಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಎದುರಾಳಿಗಳನ್ನು 16.4 ಓವರ್ಗಳಲ್ಲಿ 103 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು, ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: ಮಕ್ಕಳು ಅಳುವುದನ್ನು ನೋಡಲಾರದೆ ನದಿಯಲ್ಲಿ ಮುಳುಗಿಸಿ ಸಾಯಿಸಿದ ತಾಯಿ; ಹೃದಯ ವಿದ್ರಾವಕ ವಿಡಿಯೋ ವೈರಲ್
ಇನ್ನೂ ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿರುವ ಕುರಿತು ಮಾತನಾಡಿದ ನಾಯಕ ರೋಹಿತ್ ಶರ್ಮ, ಒಂದು ತಂಡವಾಗಿ ನಾವು ಕೆಲಸ ಮಾಡಿದ್ದು, ಈ ಗೆಲುವು ನಮಗೆ ತೃಪ್ತಿ ತಂದಿದೆ. ನಾವು ಪರಿಸ್ಥಿತಿಗೆ ಹೊಂದಿಕೊಂಡಿದ್ದು, ಅದಕ್ಕೆ ಅನುಗುಣವಾಗಿ ಆಟವಾಡಿದ್ದೇವೆ. ಮುಖ್ಯವಾಗಿ ಬೌಲರ್ಗಳು ಹಾಗೂ ಬ್ಯಾಟ್ಸ್ಮನ್ಗಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಅದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಳೆ ಬಂದಿದ್ದರಿಂದ ಈ ಕ್ರೀಡಾಂಗಣದಲ್ಲಿ 140-150 ರನ್ ಗಳಿಸುವುದೇ ಹೆಚ್ಚು. ಆಡಲು ಕಷ್ಟಕರವಾಗಿರುತ್ತೆ ಎಂದು ಭಾವಿಸಿದ್ದೆವು. ಆದರೆ, ಪವರ್ಪ್ಲೇ ಬಳಿಕ ಹೆಚ್ಚು ರನ್ ಗಳಿಸಬಹುದು ಎಂದು ತಿಳಿಯಿತು. ಬೌಲರ್ಗಳು ಅದ್ಭುತವಾಗಿ ಆಡಿದರು. ಮುಖ್ಯವಾಗಿ ಕುಲದೀಪ್ ಹಾಗೂ ಅಕ್ಷರ್ ಆಡಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿತ್ತು. ಈ ಪಿಚ್ನಲ್ಲಿ 170 ರನ್ಗಳು ಉತ್ತಮ ಸ್ಕೋರ್ ಆಗಿದ್ದು, ಬೌಲರ್ಗಳು ಇದನ್ನು ರಕ್ಷಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.