ಬಾರ್ಬಡೋಸ್: 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಗೆದ್ದು ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ದಕ್ಷಿಣ ಆಫ್ರಿಕಾದ ಕನಸು ಭಗ್ನಗೊಂಡಿದ್ದು, ಟೀಮ್ ಇಂಡಿಯಾ ವಿರುದ್ಧ 7 ರನ್ಗಳ ಸೋಲುಂಡಿದೆ. ಗೆಲ್ಲಬಹುದಾಗಿತ್ತಾ ಪಂದ್ಯವನ್ನು ಸೋಲುಂಡ ಕುರಿತು ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಮ್ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿದ ಮಾರ್ಕ್ರಮ್, ಸದ್ಯಕ್ಕೆ ನಮಗೆ ಧೈರ್ಯ ತುಂಬಿದೆ ಎಂದು ಹೇಳುತ್ತೇನೆ. ಸೋತಿರುವುದು ನಮಗೆ ನೋವುಂಟು ಮಾಡುತ್ತದೆ. ಆದರೆ, ನಮ್ಮ ಆಟಗಾರರು ಅಡಿದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಚೆನ್ನಾಗಿ ಬ್ಯಾಟ್ ಮಾಡಿದ್ದೆವು. ಆದರೆ, ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.
ಅಭಿಯಾನದಲ್ಲಿ ನಾವು ಬಹಳಷ್ಟು ಆಟವನ್ನು ನೋಡಿದ್ದು, ಟಿ20 ಕ್ರಿಕೆಟ್ನಲ್ಲಿ ಕೊನೆಯ ಎಸೆತ ಮುಗಿಯುವವರೆಗೂ ಪಂದ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಾವು ಆಡಿದ ರೀತಿ ನಮಗೆ ಖುಷಿ ನೀಡಿದ್ದು, ನಾವು ಫೈನಲ್ಗೆ ಅರ್ಹರಾಗಿದ್ದೆವು. ಪಂದ್ಯವನ್ನು ಗೆಲ್ಲಬಹುದಿತ್ತು. ಎದುರಾಳಿ ನೀಡಿದ್ದ ಟಾರ್ಗೆಟ್ಅನ್ನು ಸುಲಭವಾಗಿ ಚೇಸ್ ಮಾಡಬಹುದು ಎಂದುಕೊಂಡೆವು. ಅಂತಿಮವಾಗಿ ಅವರು ಬೌಲ್ ಮಾಡಿ ಕಂಟ್ರೋಲ್ ಮಾಡಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಕಮ್ಬ್ಯಾಕ್ ಮಾಡುತ್ತೇವೆ. ನಮ್ಮ ತಂಡದ ಪ್ರದರ್ಶನ ಹೆಮ್ಮೆ ಹಾಗೂ ಖುಷಿ ನೀಡಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಏಡೆನ್ ಮಾರ್ಕ್ರಮ್ ಹೇಳಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಕೇಳಿ ಬಂತು ಮೋಸದಾಟದ ಆರೋಪ; ಸೂರ್ಯಕುಮಾರ್ ಹಿಡಿದ ಕ್ಯಾಚ್ನ ಸುತ್ತ ವಿವಾದದ ಹುತ್ತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್ ನೀಡಿದ ಭಾರತದ ಬೌಲರ್ಗಳು ದಿಟ್ಟ ಪ್ರತಿರೋಧದ ನಡುವೆಯೂ ಎದುರಾಳಿ ತಂಡವನ್ನು 20 ಓವರ್ಗಳಲ್ಲಿ 169 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ (3-0-20-3), ಅರ್ಷ್ದೀಪ್ ಸಿಂಗ್ (4-0-20-2), ಜಸ್ಪ್ರೀತ್ ಬುಮ್ರಾ (4-0-18-2), ಅಕ್ಷರ್ ಪಟೇಲ್ (4-0-49-1), ಕುಲ್ದೀಪ್ ಯಾದವ್ (4-0-45-0), ರವೀಂದ್ರ ಜಡೇಜಾ (1-0-12-0) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಗೆ ಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.