ಮಹಾಲಿಂಗಪುರ: ಚಿಕ್ಕ ಸಮಾಜವಿದ್ದರೂ ಪಟ್ಟಣದ ಕಲ್ಪಡ ಗಲ್ಲಿಯ ಶ್ರೀ ಸಾರಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿದ ಬೈಲ ಪತ್ತಾರ ಸಮಾಜದ ಕಾರ್ಯ ಶ್ಲಾಘನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಕಲ್ಪಡ ಗಲ್ಲಿಯಲ್ಲಿ ಭಾನುವಾರ ಶ್ರೀ ಸಾರಿ ದುರ್ಗಾದೇವಿ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.
ಈ ಶಕ್ತಿದೇವಿ ಪ್ರತಿಷ್ಠಾಪಿಸಿ ಪೂಜೆ, ಆರಾಧನೆ ಮಾಡಿದರೆ ಸಕಲ ಸುಖ, ಸಂಪತ್ತು ಪ್ರಾಪ್ತಿಯಾಗುವುದು ಎಂದರು.
ಇದಕ್ಕೂ ಮುನ್ನ ಶುಕ್ರವಾರ ಸೈದಾಪುರ ಶಾಂತಾ ದುರ್ಗಾದೇವಿ ಅರ್ಚಕರ ನೇತೃತ್ವದಲ್ಲಿ ರನ್ನಬೆಳಗಲಿ ಅಗಸಿಯಿಂದ ಭವ್ಯ ಮೆರವಣಿಗೆಯಲ್ಲಿ ದುರ್ಗಾ ಮಾತೆ ಮೂರ್ತಿ ತರಲಾಯಿತು. ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಬೈಲ ಪತ್ತಾರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾಜಿ ಅಂಕೋಶಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಅಧ್ಯಕ್ಷ ರಾಜೇಂದ್ರ ಪಂಚಮಹಲ, ಗೌರವಾಧ್ಯಕ್ಷ ಸುಭಾಷ ದೇವರಹಿಪ್ಪರಗಿ, ದುರ್ಗಾದೇವಿ ಮೂರ್ತಿ ದಾನಿ ಹನುಮಸಾಗರದ ಭೋಜರಾಜ ಅಂಕೋಶಿ, ಮುಖಂಡರಾದ ಯಲ್ಲನಗೌಡ ಪಾಟೀಲ, ಶೇಖರ ಅಂಗಡಿ, ರಾಜು ಚಮಕೇರಿ, ಸುನೀಲಗೌಡ ಪಾಟೀಲ, ವಿಜುಗೌಡ ಪಾಟೀಲ, ಅಶೋಕ ಅಂಕೋಶಿ, ಶಿವಾಜಿ ಪತ್ತಾರ ಇತರರಿದ್ದರು.
ಸಮಾಜದ ಮುಖಂಡರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕ ಆನಂದ ತಮದಡ್ಡಿ ನಿರೂಪಿಸಿದರು.