ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಕಾಡಂಚಿನ ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ 1ನೇ ತರಗತಿಗೆ ದಾಖಲಾದ 13 ಮಕ್ಕಳಿಗೆ ಮಂಗಳವಾರ ಶಿಕ್ಷಕ ರಾಘವೇಂದ್ರ ಸ್ವಂತ ಹಣದಿಂದ ತಟ್ಟೆ ಹಾಗೂ ಲೋಟ ವಿತರಿಸಿದರು.
ಸರ್ಕಾರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ರಾಗಿ ಮಾಲ್ಟ್ ನೀಡುತ್ತಿದೆ. ಇದರ ಸದುಪಯೋಗವನ್ನು ಶಾಲೆಯ ಎಲ್ಲ ಮಕ್ಕಳು ಪಡೆಯುತ್ತಿದ್ದಾರೆ. ಇದೀಗ ಹೊಸದಾಗಿ 1ನೇ ತರಗತಿಗೆ ದಾಖಲಾದ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನೂ ವಿತರಿಸಲಾಗಿದೆ. ಈ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಟ್ಟೆ ಹಾಗೂ ಲೋಟವನ್ನು ನೀಡುವ ಮೂಲಕ ಕೈಲಾದ ಸಹಾಯ ಮಾಡಿದ್ದೇನೆ ಎಂದು ರಾಘವೇಂದ್ರ ವಿಜಯವಾಣಿಗೆ ತಿಳಿಸಿದರು.