ಹೊಳೆನರಸೀಪುರ: ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಏಳಿಗೆಯಲ್ಲಿ ದೇವಾಂಗ ಸಮುದಾಯದ ಕೊಡುಗೆ ಅಪಾರವಾಗಿದ್ದು, ನಿಮ್ಮ ಸಹಾಕಾರವನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ದೇವಾಂಗ ಬಡಾವಣೆಯ ಶ್ರೀರಾಮಲಿಂಗಚೌಡೇಶ್ವರಿ, ಶ್ರೀರಾಮಲಿಂಗೇಶ್ವರ ಹಾಗೂ ಗಣಪತಿ ದೇವರ ನೂತನ ವಿಗ್ರಹ, ದೇವಾಲಯದ ಪ್ರತಿಷ್ಠಾಪನಾ ಪೂಜಾ ಮಹೋತ್ಸವದಲ್ಲಿ ನಂತರ ಹಂಪಿ ಶ್ರೀಗಾಯತ್ರಿ ಪೀಠಾಧಿಪತಿ ಶ್ರೀದಯಾನಂದಪುರಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸೋಮವಾರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಾಲಯ ನಿರ್ಮಾಣಕ್ಕೆ ಶಾಸಕರ ನಿಧಿಯ ಜತೆಗೆ ಜನಾಂಗದ ದಾನಿಗಳಿಂದ ಹಣ ಸಂಗ್ರಹಿಸಿ, ವಿಶೇಷ ಆಕರ್ಷಣೆಯಿಂದ ಕೂಡಿರುವ ಶ್ರೀರಾಮಲಿಂಗ ಚೌಡೇಶ್ವರಿದೇವಿ ದೇವಾಲಯವನ್ನು ಸುಂದರವಾಗಿ ನಿರ್ಮಿಸಿದ್ದೀರಿ ಎಂದು ಶಾಸಕ ಎಚ್.ಡಿ.ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜನಾಂಗದ ಏಳಿಗೆಗೆ ಜತೆಗೆ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರಿಗೂ ಸ್ಥಾನಮಾನದ ವಿಷಯದಲ್ಲಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ನಂತರ ಸಾವು ನಿಶ್ಚಿತ, ಇದರ ನಡುವೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಮಾಜದ ಏಳಿಗೆಗೆ ಮತ್ತು ಅಗತ್ಯವಿದ್ದವರಿಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರು ಮೈಸೂರಿನ ದಿ.ಎಚ್.ಎನ್.ನಾಗರಾಜ್ ಅವರ ಪುತ್ರ ಎನ್.ಸುನಿಲ್ಕುಮಾರ್ ಹಾಗೂ ತಾ.ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್ ಅವರು ದೇವಾಲಯ ನಿರ್ಮಾಣಕ್ಕೆ 10 ಲಕ್ಷ ರೂ.ದೇಣಿಗೆ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ದೇವಾಲಯ ನಿರ್ಮಾಣಕ್ಕೆ ದೇಣಿಗೆ ಹಾಗೂ ವಿವಿಧ ರೀತಿಯ ಸೇವೆಗೈದ ದಾನಿಗಳನ್ನು ಶ್ರೀದಯಾನಂದಪುರಿ ಸ್ವಾಮೀಜಿ ಗೌರವಿಸಿದರು.
ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ದೇವಾಂಗ ಸಂಘದ ಮಾಜಿ ಅಧ್ಯಕ್ಷರಾದ ಎಚ್.ಎನ್.ವೆಂಕಟರಮಣಯ್ಯ ಹಾಗೂ ಎಚ್.ಬಿ.ತಮ್ಮಣ್ಣಶೆಟ್ಟಿ, ಪುರಸಭೆ ಸದಸ್ಯ ಸಿ.ಜಿ.ವೀಣಾ, ಎ.ಜಗನ್ನಾಥ್, ದೇವಾಂಗ ಸಂಘದ ಅಧ್ಯಕ್ಷ ಡಾ.ಎಚ್.ಎನ್.ರಾಜೇಶ್, ದೇವಾಂಗ ಯುವಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರ್ ಹಾಗೂ ಸದಸ್ಯರು ಹಾಜರಿದ್ದರು.