More

    ನೈರುತ್ಯ ಮುಂಗಾರಿನ ಅಬ್ಬರ!,ಎಡೆಬಿದರೆ ಗಾಳಿ ಸಹಿತ ಮಳೆಯಾಗಿದ್ದರಿಂದ ಜನಜೀವನ ತುಸು ಅಸ್ತವ್ಯಸ್ತ, ಇಂದು ರೆಡ್ ಅಲರ್ಟ್ ಘೋಷಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಉತ್ತಮ ಮಳೆಯಾಗಿದೆ. ಬುಧವಾರ ಬೆಳಗ್ಗಿನಿಂದಲೇ ಜಿಲ್ಲೆಯೆಲ್ಲೆಡೆ ಉತ್ತಮ ಮಳೆಯಾಗುತ್ತಿತ್ತು. ಹಲವೆಡೆ ಎಡೆಬಿದರೆ ಗಾಳಿ ಸಹಿತ ಮಳೆಯಾಗಿದ್ದರಿಂದ ಜನಜೀವನ ತುಸು ಅಸ್ತವ್ಯಸ್ತಗೊಂಡಿತ್ತು.

    ದಕ್ಷಿಣ ಕನ್ನಡದಲ್ಲಿ ಮುಂಗಾರು ಆರಂಭವಾಗಿ ಹಲವು ದಿನಗಳೇ ಕಳೆದಿದ್ದರೂ, ಇದೀಗ ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾಗಿದೆ. ಬುಧವಾರ ಜಿಲ್ಲಾದ್ಯಂತ ಬಿಟ್ಟೂ ಬಿಟ್ಟು ದಿನವಿಡಿ ಮಳೆ ಸುರಿದಿದೆ. ಭಾರೀ ಗಾಳಿ- ಮಳೆಯಿಂದ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಮರಗಳು ಬಿದ್ದು ಕೆಲವೆಡೆ ಸಂಚಾರಕ್ಕೆ ಸಮಸ್ಯೆಯಾಗಿದೆ. ರಸ್ತೆಗಳಲ್ಲೇ ನೀರು ಹರಿದು ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 26 ಮೀಟರ್ ಹಾಗೂ ಬಂಟ್ವಾಳ ನೇತ್ರಾವತಿ ನದಿ ಮಟ್ಟ 5ಮೀಟರ್‌ಗಳಲ್ಲಿ ಹರಿಯುತ್ತಿತ್ತು. ನೇತ್ರಾವತಿ ನದಿಯಲ್ಲಿ ಮಳೆ ನೀರಿನ ಒತ್ತಡ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ತುಂಬೆ ಡ್ಯಾಂನ 11 ಗೇಟ್‌ಗಳನ್ನೂ ತೆರವು ಮಾಡಲಾಗಿದೆ.

    *ರೆಡ್ ಅಲರ್ಟ್ ಘೋಷಣೆ

    ಜೂ.27ರ ವರೆಗೆ ಕರಾವಳಿ ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜತೆಗೆ ಉತ್ತಮ ಮಳೆಯಾಗುವ ಸಾಧ್ಯತೆಯಿರುವುದರಿಂದ ಕರಾವಳಿಯಲ್ಲಿ ಮುಂದಿನ 48 ಗಂಟೆ ಂದರೆ ಜೂ.28, 29ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 29ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಪ್ರಸ್ತುತ ಮುಂಗಾರು ಚುರುಕುಗೊಂಡರೂ ಜುಲೈ 30ರ ನಂತರ ಪುನಃ ದುರ್ಬಲಗೊಳ್ಳವ ಲಕ್ಷಣಗಳಿವೆ. ರಾಜ್ಯದ ಕರಾವಳಿ ಒಳನಾಡು ಭಾಗಗಳಲ್ಲಿ ಹೆಚ್ಚು ದಿನಗಳ ಕಾಲ ಮಳೆ ಮುಂದುವರಿಯುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ————–

    ಮಳೆಯಿಂದ ಅಲ್ಲಲ್ಲಿ ಹಾನಿ

    ಉಳ್ಳಾಲದ ಮದನಿ ನಗರದಲ್ಲಿ ಮನೆ ಮೇಲೆ ಬೃಹತ್ ತಡೆಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದ್ದರೆ, ಉಳ್ಳಾಲದಲ್ಲೇ ಇತರ 2-3 ಮನೆಗಳಿಗೆ ಹಾನಿ ಸಂಭವಿಸಿದೆ. ಉಳಿದಂತೆ ದೊಡ್ಡ ಮಟ್ಟದಲ್ಲಿ ಅನಾಹುತ ನಡೆದಿಲ್ಲ ಎಂದು ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ತಿಳಿಸಿದ್ದಾರೆ. ಉಳ್ಳಾಲ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ಮಳೆಯಿಂದ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ. ಉರ್ವ ಮಾರ್ಕೆಟ್ ಬಳಿ ಮಠದಕಣಿ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಅರಣ್ಯ ಇಲಾಖೆ ವತಿಯಿಂದ ಮರಗಳನ್ನು ತೆರವುಗೊಳಿಸಲಾಯಿತು. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಅತ್ತಾವರದ ಕಪ್ರಿಗುಡ್ಡದಲ್ಲಿ, ಪಚ್ಚನಾಡಿಯಲ್ಲಿ ಮರ ಬಿದ್ದಿದೆ. ಕಣ್ಣೂರಿನಲ್ಲಿ ಮನೆಯೊಂದರ ಗೋಡೆಗೆ ಹಾನಿಯಾಗಿದ್ದು, ಕುಟುಂಬವನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ.

    ——————–

    ಅಗ್ನಿಶಾಮಕ ತಂಡದಿಂದ ಪ್ರವಾಹಕ್ಕೆ ಸಿಲುಕಿದ ಕಾರು ರಕ್ಷಣೆ

    ಭಾರೀ ಮಳೆಯಿಂದಾಗಿ ಬಜಾಲ್‌ನ ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡು ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೀವ್ರ ಅನನುಕೂಲವಾಯಿತು. ಪ್ರತಿ ಮಳೆಗಾಲದಲ್ಲಿ ಈ ಕೆಳಸೇತುವೆ ಮುಳುಗಡೆಯಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಆಡಳಿತ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುವುದು ಸ್ಥಳೀಯರ ಆರೋಪ. ಇದೇ ಕೆಳಸೇತುವೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

    ———————–

    ಮಂಗಳೂರಿನ ಹಲವಡೆ ಕೃತಕ ನೆರೆ

    ಮಂಗಳೂರು ಮಹಾ ನಗರದಲ್ಲಿ ಬಹುತೇಕ ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು. ಪ್ರತಿ ವರ್ಷವೂ ನಗರದಲ್ಲಿ ಕೃತಕ ಪ್ರವಾಹ ಸಾಮಾನ್ಯವಾಗಿದೆ. ಸೂಕ್ತ ಸಮಯದಲ್ಲಿ ಚರಂಡಿಗಳ ಹೂಳೆತ್ತದೆ ಇರುವುದು, ಚರಂಡಿಗಳೇ ಇಲ್ಲದಿರುವುದರಿಂದ ಕೃತಕ ಪ್ರವಾಹ ಉಂಟಾಗಿದೆ. ಬಡಗಎಡಪದವು ಎಂಬಲ್ಲಿ ಮಳೆ ನೀರು ಚರಂಡಿ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ನೀರು ತುಂಬಿಕೊಂಡಿತ್ತು. ಜೆಪ್ಪಿನಮೊಗರು ದೊಂಪದಬಳಿ ಗದ್ದೆಯಲ್ಲಿ ನೀರು ನಿಂತು ನಿವಾಸಿಗಳಿಗೆ ತೊಂದರೆಯಾಗಿದೆ. ನಗರದ ಅಲ್ಲಲ್ಲಿ ಮಳೆಯಿಂದಾಗಿ ರಸ್ತೆ ಹೊಂಡಗಳು ಸೃಷ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟರ್ ಸವಾರರೊಬ್ಬರು ಹೆದ್ದಾರಿ ಗುಂಡಿಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ರಸ್ತೆಯ ದುರವಸ್ಥೆಗೆ ಮನನೊಂದ ಅವರು ಸ್ಕೂಟರ್‌ನ್ನು ಗುಂಡಿಯ ಮೇಲೆ ನಿಲ್ಲಿಸಿ ಪಕ್ಕದಲ್ಲಿಯೇ ನಿಂತು ಕೆಲಕಾಲ ಪ್ರತಿಭಟನೆ ನಡೆಸಿ ಇತರ ವಾಹನ ಸವಾರರಿಗೆ ರಸ್ತೆ ಗುಂಡಿ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು.

    ——————–

    ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    ನಗರದೆಲ್ಲೆಡೆ ತೋಡು ಹಾಗೂ ಚರಂಡಿ ಅವ್ಯವಸ್ಥೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ಹರಿಯದೆ ತೊಂದರೆಯಾಗಿದೆ. ಪಡೀಲ್ ಅಂಡರ್‌ಪಾಸ್‌ನಲ್ಲೂ ದ್ವಿಚಕ್ರ, ಲಘು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಕಂಡುಬಂತು. ಕೊಟ್ಟಾರಚೌಕಿ ತಗ್ಗು ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಉಕ್ಕೇರಿತ್ತು. ನಾಗುರಿಯಲ್ಲೂ ಕಾಮಗಾರಿ ಕಾರಣದಿಂದ ಕೃತಕ ಪ್ರವಾಹ ಉಂಟಾಗಿದ್ದರೆ, ಜಪ್ಪಿನಮೊಗರಿನಲ್ಲಿ ಕೆಲವು ಅಂಗಡಿ, ಮನೆಗಳಿಗೆ ನೀರು ನುಗ್ಗಿತ್ತು. ಅಳಪೆಯಲ್ಲಿ ಕೂಡ ಕೆಲವು ಅಂಗಡಿಗಳಿಗೆ ನೀರು ನುಗ್ಗಿದೆ. ಪಡೀಲ್ ಮೇಘ ನಗರದ ಮನೆಯೊಂದಕ್ಕೆ ನೀರು ನುಗ್ಗಿದ್ದರೆ, ಜಪ್ಪುವಿನಲ್ಲೂ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

    —————

    ಪಿಲಿಕುಳ ಕೆರೆಯಿಂದ ಹೊರಬಂದ ಮೀನು

    ಬುಧವಾರ ಸುರಿದ ಮಳೆಗೆ ಪಿಲಿಕುಳ ಕೆರೆ ತುಂಬಿದ್ದು, ಇಲ್ಲಿ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ ಸಂರಕ್ಷಿಸಿ ಸಾಕಿರು ಮೀನುಗಳ ಕೆರೆದಾಟಿ ಹೊರಬಂದಿದೆ. ಮಧ್ಯಾಹ್ನ ನಂತರ ಈ ಭಾಗದ ಸ್ಥಳೀಯರು ತೋಡುಗಳಲ್ಲಿ ಮೀನು ಹಿಡಿಯಲು ಉತ್ಸುಕತೆಯಿಂದ ಆಗಮಿಸಿರುವುದು ಕಂಡುಬಂತು.

    ————–

    ಗ್ರಾಮಾಂತರದಲ್ಲೂ ಉತ್ತಮ ಮಳೆ ದಾಖಲು

    ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಗ್ರಾಮಾಂತರದಲ್ಲಿ ಉತ್ತಮ ಮಳೆ ದಾಖಲೆಯಾಗಿದೆ. ಕಟೀಲಿನಲ್ಲಿ ನಂದಿನಿ ನದಿ ತುಂಬಿ ಹರಿದಿದೆ. ಬಂಟ್ವಾಳದ ಮಂಚಿಯಲ್ಲಿ 188 ಮಿ.ಮೀ ಮಳೆಯಾದರೆ ಇರಾದಲ್ಲಿ 154.5 ಮಿ,.ಮೀ, ಬಾಳ್ತಿಲದಲ್ಲಿ 143.5 ಮಿ.ಮೀ, ಬಾಳೆಪುಣಿಯಲ್ಲಿ 141.5 ಮಿ.ಮೀ, ಮಳವೂರಿನಲ್ಲಿ 129.5 ಮಿ.ಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು, ಸಿಡಿಲಿನ ಜತೆಗೆ ಸಾಧಾರಣದಿಂದ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಕರಾವಳಿಯಲ್ಲಿ ಸರಾಸರಿ 29.6 ಡಿಗ್ರಿ ಗರಿಷ್ಠ, 22.5 ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಮಳೆಕಾಡು ಹಾಗೂ ಮಶ್ಚಿಮಘಟ್ಟಪ್ರದೇಶದ ತಪ್ಪಲಲ್ಲಿ ಕಳೆದ 24 ಗಂಟೆಯಲ್ಲಿ 150 ಮಿಮಿ ಸರಾಸರಿ ಮಳೆಯಾಗಿದ್ದು, ಮುಂದಿನ 72 ಗಂಟೆಗಳಲ್ಲಿ ಈ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts