ನವದೆಹಲಿ: 09ನೇ ಆವೃತ್ತೊಉ ಚುಟುಕು ವಿಶ್ವ ಸಮರದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಸುದೀರ್ಘ ಕಾಯುವಿಕೆಯನ್ನು ರೋಹಿತ್ ಶರ್ಮಾ ಪಡೆ ಅಂತ್ಯಗೊಳಿಸಿದೆ. 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ ಆ ಬಳಿಕ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದು, ಇದೀಗ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರೋಹಿತ್ ಪಡೆಗೆ ಶುಭಾಶಯ ಕೋರಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಇದು ಸೂಕ್ತ ಸಮಯ; ವಿರಾಟ್ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಘೋಷಿಸಿದ ರೋಹಿತ್ ಶರ್ಮಾ
ನನ್ನ ಎದೆ ಬಡಿತ ಹೆಚ್ಚಾಗಿತ್ತು. ಆದರೆ ದೃಢ ನಂಬಿಕೆಯೊಂದಿಗೆ ನೀವೆಲ್ಲರೂ ಉತ್ತಮವಾಗಿ ಆಡಿದ್ದೀರಿ. ತವರಿನ ಮತ್ತು ಪ್ರಪಂಚದ ಎಲ್ಲೆಡೆ ಇರುವ ಭಾರತೀಯರಿಂದ, ವಿಶ್ವಕಪ್ಅನ್ನು ಮರಳಿ ಮನೆಗೆ ತಂದಿದ್ದಕ್ಕಾಗಿ ದೊಡ್ಡ ಧನ್ಯವಾದಗಳು. ಅಭಿನಂದನೆಗಳು. ಅಮೂಲ್ಯ ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು ಎಂದು ಮಹೇಂದ್ರ ಸಿಂಗ್ ಧೋನಿ ಬರೆದುಕೊಂಡಿದ್ದಾರೆ.
ಇಲ್ಲಿ ಮಹೇಂದ್ರ ಸಿಂಗ್ ಧೋನಿ ಮುಖ್ಯವಾಗಿ ಧನ್ಯವಾದ ತಿಳಿಸಲು ಕಾರಣವೇನೆಂದರೆ ಜುಲೈ 07ರಂದು ಕ್ಯಾಪ್ಟನ್ ಕೂಲ್ 43ನೇ ವಸಂತಕ್ಕೆ ಕಾಲಿಡುತ್ತಿದ್ದು, ಇದಕ್ಕೂ ಮುನ್ನ ಧೋನಿಗೆ ಬರ್ತ್ಡೇ ಗಿಫ್ಟ್ ಆಗಿ ಟಿ20 ವಿಶ್ವಕಪ್ ಗೆಲುವನ್ನು ಸಮರ್ಪಿಸುವುದಾಗಿ ಆಟಗಾರರು ಹೇಳಿರುವ ಸಾಧ್ಯತೆಯಿದೆ. ಹೀಗಾಗಿ ಟೀಮ್ ಇಂಡಿಯಾ ವಿಶ್ವ ಕಪ್ ಗೆಲ್ಲುತ್ತಿದ್ದಂತೆ ಧೋನಿ ಅಭಿನಂದನೆಯ ಜೊತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.