ವಕೀಲ ಎಂ.ಶಾಂತಾರಾಮ ಶೆಟ್ಟಿ ಅಭಿಪ್ರಾಯ | ಉಡುಪಿಯಲ್ಲಿ ವಿಚಾರ ಸಂಕಿರಣ
ವಿಜಯವಾಣಿ ಸುದ್ದಿಜಾಲ ಉಡುಪಿ
ಸಮರ್ಪಕ ಚರ್ಚೆ ನಡೆಸದೆ, ಪಕ್ಷದ ಪ್ರಣಾಳಿಕೆಯಲ್ಲೂ ಉಲ್ಲೇಖಿಸದೆ, ಸಂವಿಧಾನದತ್ತ ಮಾನವ ಹಕ್ಕು ಉಲ್ಲಂಘಿಸುವ ಹೊಸ ಮೂರು ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಕಾನೂನಿನಿಂದ ದೇಶದಲ್ಲಿ ಅಸುರಕ್ಷತೆ ಹಾಗೂ ಅರಾಜಕತೆ ಸೃಷ್ಟಿಯಾಗುವ ಎಲ್ಲ ಸಾಧ್ಯತೆ ಇದೆ ಎಂದು ಹಿರಿಯ ವಕೀಲ ಎಂ.ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘ ಶುಕ್ರವಾರ ಆಯೋಜಿಸಿದ್ದ ಹೊಸ ಮೂರು ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ- -2023ರ ಸಾಧಕ-ಬಾಧಕ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೂರದೃಷ್ಟಿತ್ವ ಇಲ್ಲದ ಮಸೂದೆ
ಹೊಸ ಕಾನೂನು ಜಾರಿಗೊಳಿಸುವ ಬದಲು ಇಂದಿನ ಕಾಲಮಾನಕ್ಕೆ ತಕ್ಕಂತೆ ಒಂದಿಷ್ಟು ಬದಲಾವಣೆ ಮಾಡಬಹುದಿತ್ತು. ಆದರೆ, ಸುರಕ್ಷತೆಯ ಹೆಸರಲ್ಲಿ ಹೊಸ ಮಸೂದೆಗಳನ್ನು ದೇಶಕ್ಕೆ ನೀಡಲಾಗುತ್ತಿದೆ. ಬ್ರಿಟಿಷರು ಈ ಹಿಂದೆ ಜಾರಿಗೊಳಿಸಿದ್ದ ಐಪಿಸಿಯಲ್ಲಿ ಹಾಗೂ ಇನ್ನಿತರ ಕಾನೂನಿನಲ್ಲಿ ದೂರದೃಷ್ಟಿತ್ವ ಇತ್ತು. ಮಾನವ ಹಕ್ಕುಗಳನ್ನು ರಸುವ ಎಲ್ಲ ಅಂಶಗಳೂ ಅಡಕವಾಗಿದ್ದವು. ಆದರೆ, ಈ ಮೂರು ಹೊಸ ಕಾನೂನುಗಳು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಖಂಡಿತ ಹಾಳು ಮಾಡಲಿದೆ ಎಂದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಡಾ. ನಿರ್ಮಲಾಕುಮಾರಿ ವಿಚಾರ ಸಂಕಿರಣ ಉದ್ಘಾಟಿಸಿದರು. ವಕೀಲೆ ರೂಪಶ್ರೀ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣಕುಮಾರ್ ಸ್ವಾಗತಿಸಿದರು. ವಕೀಲರ ಸಂಘದ ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ವಕೀಲೆ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.
ಮೂವರು ‘ಪಿ’ಗಳಿಗೆ ಪ್ರಾಧಾನ್ಯತೆ
ಪೊಲೀಸ್, ಪೊಲಿಟೀಷಿಯನ್ ಹಾಗೂ ಪವರ್ ಫುಲ್ ಕಮ್ಯುನಿಟಿಗಳೆಂಬ ಮೂರು ‘ಪಿ’ಗಳಿಗೆ ಈ ಹೊಸ ಕಾನೂನು ಮಾಡಿದಂತಿದೆ. ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ದೂರು ದಾಖಲಿಸುವ, ಸೆಕ್ಷನ್ ಅಳವಡಿಸುವ ಹಕ್ಕನ್ನು ಜಿಲ್ಲಾ ಪೊಲೀಸ್ ವರಿಷ್ಠರಿಗೆ ನೀಡಲಾಗಿದೆ. ಇದರಿಂದ ಸಮಾಜದಲ್ಲಿರುವ ಬಲಾಢ್ಯರು, ರಾಜಕಾರಣಿಗಳು ಹಣಬಲದಿಂದ ಅಪರಾಧ ಮಾಡಿಯೂ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಲಿದೆ. ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವ ಅವಕಾಶವೂ ಸಾಮಾನ್ಯ ಜನರಿಗೆ ಇನ್ನು ಸುಲಭವಿಲ್ಲ. ಹೊಸ ಕಾನೂನುಗಳಿಂದ ವಕೀಲರಿಗೆ ಯಾವುದೇ ತೊಂದರೆಯಾಗದು. ಯಾವುದೇ ಸೆಕ್ಷನ್ ಬದಲಿಸಿದರೂ ವಕಾಲತು ಮಾಡುತ್ತೇವೆ. ಆದರೆ, ನ್ಯಾಯಕ್ಕಾಗಿ ಸಾಮಾನ್ಯ ಜನರು ಎಲ್ಲಿಗೆ ಹೋಗಬೇಕು? ಅವರು ಆತ್ಮಹತ್ಯೆಯ ಮಾರ್ಗವನ್ನೇ ಹಿಡಿಯಯಬೇಕಾದೀತು ಎಂದು ಎಂ.ಶಾಂತಾರಾಮ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.