ಕಂಪ್ಲಿ: ಯಾರ ಮನಸ್ಸನ್ನು ನೋಯಿಸದೆ, ಕೇಡುಂಟು ಮಾಡದವರ ಜೀವನವೇ ಅತ್ಯಂತ ಶ್ರೇಷ್ಠ ಎಂದು ಎಮ್ಮಿಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ರಾಮಪ್ಪ ಹೇಳಿದರು.
ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ 167ನೇ ಮಹಾಮನೆ ಕಾರ್ಯಕ್ರಮದಲ್ಲಿ ಶಿವಶರಣ ಸುರಗಿ ಚೌಡಯ್ಯನವರ ವಿಚಾರಧಾರೆ ಕುರಿತು ಮಾತನಾಡಿದರು.
ಸುರಗಿ ಚೌಡಯ್ಯನವರ ತತ್ವಾದರ್ಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ. ತನ್ನನ್ನೇ ತಾನು ಶಿವನಿಗೆ ಸಮರ್ಪಣೆ ಮಾಡಿಕೊಳ್ಳುವ ಮೂಲಕ ಸುರಗಿ ಚೌಡಯ್ಯ ಶಿವಶರಣರಲ್ಲಿ ವಿಶೇಷ ಎನಿಸುತ್ತಾರೆ ಎಂದರು.
ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ಶಿವಶರಣರು ಭಕ್ತಿ, ಜ್ಞಾನ ಮತ್ತು ಕ್ರಿಯೆ ಜೊತೆ ಕಾಯಕ, ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದ್ದರು. ಶರಣ ಚಿಂತನೆಯಿಂದ ಮಾತ್ರ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಬಡಿಗೇರ ಜಿಲಾನ್ಸಾಬ್, ಮಡಿವಾಳರ ಹುಲುಗಪ್ಪ, ಅಶೋಕ ಕುಕನೂರು, ಎಚ್.ಲಿಂಗೇಶ್, ಎಸ್.ಡಿ.ಬಸವರಾಜ, ಎಸ್.ಶಾಮಸುಂದರರಾವ್ ಇತರರಿದ್ದರು.
![](https://cdn.vvimgs.com/wp-content/uploads/2024/07/Shweta-Dental-Hospital-Digital-Ad.jpg)