ಬೆಂಗಳೂರು: ಆಹಾರ ತಯಾರಿಕೆಗೆ ಬಳಸಲಾಗುವ ಷಾವರ್ಮ ಪದಾರ್ಥವನ್ನು ಎಫ್ಎಸ್ಎಸ್ಐ ನೋಂದಾಯಿತ ಹಾಗೂ ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಿ ಬಳಸಬೇಕು. ಈ ಸೂಚನೆ ಪಾಲಿಸದ ಆಹಾರ ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಿಸಿದೆ.
ಇತ್ತೀಚಿಗೆ ಷಾವರ್ಮ ಆಹಾರ ಪದಾರ್ಥವನ್ನು ಸೇವಿಸಿ ಫುಡ್ ಪಾಯ್ಸನಿಂಗ್ ಆಗಿರುವ ಪ್ರಕರಣಗಳು ವರದಿಯಾಗಿದ್ದವು. ಈ ಸಂಬಂಧ ಬೆಂಗಳೂರು, ಮೈಸೂರು, ತುಮಕೂರು, ಧಾರವಾಡ, ಮಂಗಳೂರು, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳ ಪಾಲಿಕೆ ವ್ಯಾಪ್ತಿಯಲ್ಲಿ ಆಹಾರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟು 17 ಮಾದರಿಗಳ ಪೈಕಿ 9ರಲ್ಲಿ ಸುರಕ್ಷಿತವೆಂದು ಉಳಿದವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಈಸ್ಟ್ ಕಂಡುಬಂದು ಅಸುರಕ್ಷಿತ ಎಂಬ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಅಸುರಕ್ಷಿತವೆಂದು ವರದಿ ಬಂದಿರುವ ಮಾದರಿಗಳಿಗೆ ಸಂಬಂಧಿಸಿದ ತಯಾರಕರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುತ್ತಿದೆ. ಆಹಾರ ತಯಾರಿಕೆ ವೇಳೆ ನೈರ್ಮಲ್ಯದ ಕೊರತೆ, ದೀರ್ಘಕಾಲದ ಸಂಗ್ರಹಣೆ ಹಾಗೂ ವಿತರಣೆ ಸಂದರ್ಭದಲ್ಲಿ ಸ್ವಚ್ಚತೆಯ ಕೊರತೆ ಕಂಡುಬರುತ್ತಿದೆ. ಹೀಗಾಗಿ ಷಾವರ್ಮವನ್ನು ಪ್ರತೀ ದಿನವೂ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲೇ ಮಾರಾಟ ಮಾಡಬೇಕು ಎಂದು ಇಲಾಖೆ ಕಟ್ಟಪ್ಪಣೆ ಮಾಡಿದೆ.