ಕೆ.ಆರ್.ಸಾಗರ (ಮಂಡ್ಯ): ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿರುವುದನ್ನು ವಿರೋಧಿಸಿ ಕೆ.ಆರ್.ಸಾಗರ, ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿ ಮಂಗಳವಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಅಣೆಕಟ್ಟೆ ಮುಖ್ಯದ್ವಾರದ ಮುಂಭಾಗದಲ್ಲಿ ಮಂಗಳವಾರ ಶ್ರೀರಂಗಪಟ್ಟಣದ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡರ ನೇತೃತ್ವದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ, ಮುಖ್ಯಮಂತ್ರಿ, ಉಪಮುಖಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲೆಯ ಶಾಸಕರ ವಿರುದ್ಧ ಘೊಷಣೆಗಳನ್ನು ಕೂಗಿದರು.
ಇದೇ ಸಂದರ್ಭದಲ್ಲಿ ರೈತರು ರಾಜ್ಯ ಸರ್ಕಾರ ರಾಜಕೀಯ ಓಲೈಕೆಗಾಗಿ ತಮಿಳುನಾಡಿಗೆ ನೀರು ಬಿಟ್ಟರಲ್ಲ ಎಂದು ಬಾಯಿ ಬಡಿದುಕೊಂಡು ಆಕ್ರೋಶವ್ಯಕ್ತಪಡಿಸಿದರು. ನಂತರ ಕಾವೇರಿ ನೀರು ನಿರ್ವಹಣಾ ಮಂಡಳಿ ನೀರು ಬಿಡಲು ಸೂಚನೆ ನೀಡಿರುವ ಮಾದರಿ ಪ್ರತಿಯನ್ನು ಸುಟ್ಟು ಹಾಕಿದರು.
ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ
ಶ್ರೀರಂಗಪಟ್ಟಣದಲ್ಲಿ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಪಟ್ಟಣದ ಕುವೆಂಪು ವೃತ್ತದಲ್ಲಿ ಮಂಗಳವಾರ ಜಮಾವಣೆಗೊಂಡ ರಾಜ್ಯ ರೈತ ಸಂಘದ ಕಾರ್ಯಕರ್ತರು, ದಲಿತ ಸಂಘಟನೆ, ಪ್ರಗತಿಪರ ಹಾಗೂ ಕನ್ನಡಪರ ಹೋರಾಟ ಸಂಘಟನೆಗಳ ಪದಾಧಿಕಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ವಿುಸಿ ತಮಿಳುನಾಡಿಗೆ ನೀರು ಹರಿಸದಂತೆ ಘೊಷಣೆ ಕೂಗಿದರು.
ವೈಜ್ಞಾನಿಕ ಸಂಕಷ್ಟ ಸೂತ್ರ ರಚನೆಯಾಗಲಿ
ಬೆಂಗಳೂರು: ನಮ್ಮ ಡ್ಯಾಂಗಳಲ್ಲಿಯೇ ನೀರಿಲ್ಲ. ನಮಗಿಂತ ಉತ್ತಮ ಸ್ಥಿತಿಯಲ್ಲಿ ತಮಿಳುನಾಡು ಇದೆ. ಹೀಗಾಗಿ 5 ಸಾವಿರ ಕ್ಯುಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಜಲಸಂಪನ್ಮೂಲ ಖಾತೆ ನಿರ್ವಹಿಸಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ನಿರ್ವಹಣಾ ಪ್ರಾಧಿಕಾರದಿಂದ ಅತಿ ಶೀಘ್ರದಲ್ಲಿ ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿರುವ ಸಂಕಷ್ಟ ಸೂತ್ರ ರಚನೆ ಆಗಬೇಕು. ಎರಡೂ ರಾಜ್ಯಗಳ ತಜ್ಞರನ್ನು ಭಾಗಿ ಮಾಡಿಕೊಂಡು ಹಿಂದಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸೂತ್ರ ಮಾಡಬೇಕು. ಈಗಿನ ಆದೇಶವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ನಾವು ಆದೇಶ ಪಾಲನೆ ಮಾಡದೇ ಹೋದರೆ ನಮ್ಮ ವಾದವನ್ನು ಕಾವೇರಿ ಅಥಾರಿಟಿ ಆಲಿಸುವುದೇ ಇಲ್ಲ. ನಮ್ಮಲ್ಲೇ ನೀರಿಲ್ಲ. ನೀರು ಕೊಡುವುದು ಕಷ್ಟ. ಸಂಕಷ್ಟ ಸೂತ್ರ ಇಲ್ಲ ಎಂಬ ಕಾರಣಕ್ಕೆ ಪದೇಪದೆ ಗೊಂದಲ ಆಗುತ್ತಿದೆ. ಸಂಕಷ್ಟ ಸೂತ್ರವೇ ಒಂದು ಗೊಂದಲ ಆಗಬಾರದು ಎಂದರು.
ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡಬಾರದು. ಒಂದು ವೇಳೆ ಬಿಟ್ಟರೆ ರಾಜ್ಯ ಸರ್ಕಾರದ ವಿರುದ್ಧ ಜನರ ಜತೆ ಬೀದಿಗಿಳಿದು ಹೋರಾಟ ಮಾಡಲಾಗುವುದು.
| ರವಿಕುಮಾರ್ ಗಣಿಗ, ಕಾಂಗ್ರೆಸ್ ಶಾಸಕ
ರಾಜ್ಯದಲ್ಲಿ ಮಳೆ ಆಗಿದ್ದರೆ ತಮಿಳುನಾಡಿಗೆ ನೀರು ಹರಿಸಲು ಯಾವುದೇ ಅಡ್ಡಿ ಆತಂಕ ಎದುರಾಗುತ್ತಿರಲಿಲ್ಲ. ನೀರು ತನ್ನಷ್ಟಕ್ಕೆ ತಾನೇ ಹರಿದು ಹೋಗುತ್ತಿತ್ತು. ಈಗ ಮಳೆ ಆಗಿಲ್ಲ. ಹೀಗಾಗಿ ನೀರು ಬಿಡಲು ಆಗಲ್ಲ ಎಂದು ನೀರು ನಿರ್ವಹಣಾ ಸಮಿತಿಗೆ ಹೇಳಬೇಕಾಗುತ್ತದೆ.
| ರಾಮಲಿಂಗಾರೆಡ್ಡಿ, ಸಚಿವ
ಸುಧಾಕರ್ ವಿರುದ್ಧ ವಾಕ್ಪ್ರಹಾರ: ತನಿಖಾ ಆಯೋಗಗಳ ಮೂಲಕ ಬಿಜೆಪಿ ನಾಯಕರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಜಿ ಸಚಿವ ಸುಧಾಕರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ, ನೀವು ತಪ್ಪು ಮಾಡಿಲ್ಲ ಅಂದರೆ ಏಕೆ ಹೆದರುತ್ತೀರಿ? ತಪ್ಪು ಮಾಡಿದವರು ಹೆದರಬೇಕಲ್ಲವೇ? ತಪ್ಪು ಮಾಡಿಲ್ಲ ಅಂದರೆ ಟಾರ್ಗೆಟ್ ಮಾಡಿದಂತೆ ಹೇಗಾಗುತ್ತದೆ? ಎಂದರು.
ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್ಫರ್’ ಅಸಾಧ್ಯ ಅನಿಸುತ್ತೆ!
ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!