ಬೆಂಗಳೂರು: ವಿಶ್ವಕಪ್ ಗೆಲುವೆಂದರೆ ಬರೀ ಸಾಮರ್ಥ್ಯ, ಪ್ರತಿಭೆಗೆ ಒಲಿಯುವಂಥದ್ದಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ, ಸೂಕ್ತ ಆಟಗಾರರನ್ನು ಕಣಕ್ಕಿಳಿಸುವುದರ ಜತೆಗೆ ಅದೃಷ್ಟದ ಬಲವೂ ಬೇಕಾಗಿರುತ್ತದೆ. 2014ರ ಟಿ20 ವಿಶ್ವಕಪ್, 2021 ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಮತ್ತು 2023ರ ಏಕದಿನ ವಿಶ್ವಕಪ್ನಲ್ಲಿ ಭಾರತಕ್ಕೆ ಸಾಮರ್ಥ್ಯ, ಪ್ರತಿಭೆಯ ಬಲವಿದ್ದರೂ, ಫೈನಲ್ನಲ್ಲಿ ಅದೃಷ್ಟ ಕೈಕೊಟ್ಟಿತ್ತು. ಆದರೆ ಈ ಬಾರಿ ಎಲ್ಲವೂ ಕೂಡಿಬರುವುದರೊಂದಿಗೆ ಭಾರತ ಟಿ20 ಕ್ರಿಕೆಟ್ನಲ್ಲಿ ಮತ್ತೆ ವಿಶ್ವ ಚಾಂಪಿಯನ್ ಪಟ್ಟವೇರಿದೆ. ಅದಕ್ಕೆ ಕಾರಣವಾದ ಪ್ರಮುಖಾಂಶಗಳು ಇಲ್ಲಿವೆ…
ಬಲಿಷ್ಠ ತಂಡದ ಲಭ್ಯತೆ
ಕಳೆದ ಆವೃತ್ತಿಯ ಸೆಮೀಸ್ ಸೋಲಿನ ಬಳಿಕ ಭಾರತ ಟಿ20 ಕ್ರಿಕೆಟ್ನಲ್ಲಿ ಹಲವು ಯುವ ಆಟಗಾರರನ್ನು ಆಡಿಸಿ ಪ್ರಯೋಗಗಳನ್ನು ನಡೆಸಿದರೂ, ವಿಶ್ವಕಪ್ ತಂಡದ ಆಯ್ಕೆ ಸಮಯ ಬಂದಾಗ ಬಲಿಷ್ಠ ತಂಡದ ಆದ್ಯತೆ ನೀಡಿತು. ಹೀಗಾಗಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಂಥ ಆಟಗಾರರ ಅನುಭವಕ್ಕೆ ಹೆಚ್ಚಿನ ಆದ್ಯತೆ ದೊರೆಯಿತು. ಚುಟುಕು ಮಾದರಿ ಯುವಕರ ಆಟವೆಂದು ಹಿರಿಯ ಆಟಗಾರರನ್ನು ಕಡೆಗಣಿಸಲಿಲ್ಲ. ಟೂರ್ನಿಯುದ್ದಕ್ಕೂ ವೈಫಲ್ಯ ಕಂಡರೂ ವಿರಾಟ್ ಕೊಹ್ಲಿ ನಿರ್ಣಾಯಕ ಫೈನಲ್ನಲ್ಲಿ ದಿಟ್ಟ ಆಟವಾಡುವ ಮೂಲಕ ನಂಬಿಕೆ ಉಳಿಸಿಕೊಂಡರು. ಇನ್ನು ವೇಗಿ ಮೊಹಮದ್ ಶಮಿ ಹೊರತಾಗಿ ಭಾರತಕ್ಕೆ ಎಲ್ಲ ಪ್ರಮುಖ ಆಟಗಾರರು ಆಯ್ಕೆಗೆ ಲಭ್ಯರಾಗಿದ್ದರು. ಇದರಿಂದ ಯುವ-ಅನುಭವ ಮಿಶ್ರಿತ ತಂಡ ರಚನೆಯಾಯಿತು.
ಸ್ಪಿನ್ ಕಾರ್ಯತಂತ್ರ
ಕೆರಿಬಿಯನ್ ನೆಲ ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ಗೆ ಮಾರಕ ವೇಗಿಗಳನ್ನು ನೀಡಿತ್ತು. ಅದೇ ನೆಲ ಈಗ ಸ್ಪಿನ್ ಬೌಲಿಂಗ್ ಸ್ನೇಹಿಯೂ ಆಗಿದೆ. ಇದನ್ನು ಅರಿತೇ ಭಾರತ ತಂಡ ನಾಲ್ವರು ಸ್ಪಿನ್ನರ್ಗಳನ್ನು ಆರಿಸಿತು. ಮೂರೇ ತಜ್ಞ ವೇಗಿಗಳನ್ನು ಆರಿಸಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು. ಆದರೆ ವಿಶ್ವಕಪ್ನಲ್ಲಿ ಭಾರತ ತನ್ನ ಪಂದ್ಯಗಳನ್ನು ಬೆಳಗ್ಗಿನ ಸಮಯದಲ್ಲಿ ಆಡಲಿರುವುದರಿಂದ ಸ್ಪಿನ್ನರ್ಗಳೇ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ತಂಡದ ಕಾರ್ಯತಂತ್ರ ಲಿಸಿದೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಎದುರಾಳಿಗಳಿಗೆ ಕಂಟಕ ಎನಿಸಿದರು.
ಸಮತೋಲನ ತಂದ ಹಾರ್ದಿಕ್
ಕಳೆದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ ಹಾರ್ದಿಕ್ ಪಾಂಡ್ಯ ಭಾರಿ ಟೀಕೆಗಳನ್ನು ಎದುರಿಸಿದರು. ನಾಯಕ ಮಾತ್ರವಲ್ಲದೆ ಬ್ಯಾಟಿಂಗ್&ಬೌಲಿಂಗ್ನಲ್ಲೂ ವೈಫಲ್ಯ ಕಂಡರು. ಇದರ ನಡುವೆ ವಿಶ್ವಕಪ್ ತಂಡದಿಂದ ಅವರನ್ನು ಕೈಬಿಡಬೇಕೆಂಬ ವಾದಗಳೂ ಇದ್ದವು. ಆದರೆ ಟೀಮ್ ಮ್ಯಾನೇಜ್ಮೆಂಟ್ ಹಾರ್ದಿಕ್ಗೆ ಆದ್ಯತೆ ನೀಡಿತು. ಈ ನಂಬಿಕೆಯನ್ನು ಹಾರ್ದಿಕ್ ಉಳಿಸಿಕೊಂಡಿದ್ದು ವಿಶ್ವಕಪ್ನಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡಲ್ಲೂ ಉಪಯುಕ್ತ ಕೊಡುಗೆ ನೀಡುವ ಮೂಲಕ ತಂಡಕ್ಕೆ ಹೆಚ್ಚಿನ ಸಮತೋಲನವನ್ನೂ ತಂದುಕೊಟ್ಟರು. ಫೈನಲ್ನಲ್ಲಿ ನಿರ್ಣಾಯಕ ಪಾತ್ರವನ್ನೂ ನಿರ್ವಹಿಸಿದರು.
ರೋಹಿತ್ ಶರ್ಮ ನಾಯಕನಾಟ
ರೋಹಿತ್ ಶರ್ಮ ನಾಯಕನಾಗಿ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 119 ರನ್ ರಸಿಕೊಳ್ಳುವಲ್ಲಿ ರೋಹಿತ್ ಮಾಡಿದ ಬೌಲಿಂಗ್ ಬದಲಾವಣೆಗಳು ಗಮನಸೆಳೆದವು. ಇನ್ನು ಬ್ಯಾಟರ್ ಆಗಿಯೂ ಅವರ ಕೊಡುಗೆ ಮಹತ್ವದ್ದು. ತಂಡದ ಟಾಪ್ ಸ್ಕೋರರ್ ಎನಿಸಿದ ರೋಹಿತ್, ಸೂಪರ್-8ನಲ್ಲಿ ಆಸ್ಟ್ರೆಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆಕ್ರಮಣಕಾರಿ ಆಡುವ ಮೂಲಕ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೆಮೀಸ್ನಲ್ಲಿ ಇಂಗ್ಲೆಂಡ್ ವಿರುದ್ಧವೂ ಅವರ ಆಟ ನಿರ್ಣಾಯಕವೆನಿಸಿತು.
ಮರಳಿದ ರಿಷಭ್ ಪಂತ್
2022ರ ಕೊನೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿ ಒಂದು ವರ್ಷ ಕಾಲ ಕ್ರಿಕೆಟ್ ಮೈದಾನದಿಂದ ದೂರವಿದ್ದ ರಿಷಭ್ ಪಂತ್ ಯಶಸ್ವಿ ಪುನರಾಗಮನವನ್ನೇ ಕಂಡರು. ವಿಕೆಟ್ ಕೀಪರ್ ಪಾತ್ರದೊಂದಿಗೆ ವನ್ಡೌನ್ ಕ್ರಮಾಂಕದ ಹೊಸ ಜವಾಬ್ದಾರಿಯನ್ನೂ ಅವರು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರ 42 ರನ್ ಕೊಡುಗೆ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೇ ನಿರ್ವಹಿಸಿತು.
ಬುಮ್ರಾಗೆ ಅರ್ಷದೀಪ್ ಸಾಥ್
ಜಸ್ಪ್ರೀತ್ ಬುಮ್ರಾ ಎಂದಿನಂತೆ ಮಾರಕ ಎಸೆತಗಳಿಂದ ಎದುರಾಳಿಯನ್ನು ಕಾಡಿದರು. ಮೊಹಮದ್ ಶಮಿ ಗೈರಿನಲ್ಲಿ ಅವರಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಮರ್ಥ ಬೆಂಬಲವನ್ನೇ ಒದಗಿಸಿದರು. ಇವರಿಬ್ಬರು ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಎದುರಾಳಿ ಪಾಲಿಗೆ ದುಃಸ್ವಪ್ನ ಎನಿಸಿದರು. ಈ ಮೂಲಕ ಭಾರತದ ಯಶಸ್ಸಿಗೆ ಬಲ ತುಂಬಿದರು. ಫೈನಲ್ನಲ್ಲಿ ಕೊನೇ 5 ಓವರ್ಗಳಲ್ಲಿ 30 ರನ್ ಮಾತ್ರ ಬೇಕಿದ್ದಾಗ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕುವಲ್ಲಿ ಇವರಿಬ್ಬರ ಪಾತ್ರವೂ ಮಹತ್ವದ್ದಾಗಿದೆ.
ಚುರುಕಿನ ಫೀಲ್ಡಿಂಗ್
ಪ್ರತಿ ಪಂದ್ಯ ಶ್ರೇಷ್ಠ ಫೀಲ್ಡಿಂಗ್ ನಿರ್ವಹಣೆಗೆ ಪದಕ ನೀಡುವ ಸಂಪ್ರದಾಯವನ್ನು ಏಕದಿನ ವಿಶ್ವಕಪ್ನಲ್ಲಿ ಆರಂಭಿಸಿದ್ದ ಭಾರತ ಅದನ್ನು ಟಿ20 ವಿಶ್ವಕಪ್ನಲ್ಲೂ ಮುಂದುವರಿಸಿತು. ಇದು ಮೈದಾನದಲ್ಲಿ ಆಟಗಾರರ ಫೀಲ್ಡಿಂಗ್ ನಿರ್ವಹಣೆ ಸುಧಾರಿಸಿತು. ಸೂಪರ್-8ನಲ್ಲಿ ಆಸೀಸ್ ಎದುರು ಅಕ್ಷರ್ ಪಟೇಲ್ ಬೌಂಡರಿ ಬಳಿ ಹಿಡಿದ ಮಿಚೆಲ್ ಮಾರ್ಷ್ರ ಅದ್ಭುತ ಕ್ಯಾಚ್ ಪಂದ್ಯಕ್ಕೆ ತಿರುವು ನೀಡಿದರೆ, ಫೈನಲ್ನ ಕೊನೇ ಓವರ್ನಲ್ಲಿ ಸೂರ್ಯಕುಮಾರ್ ಬೌಂಡರಿ ಬಳಿ ಹಿಡಿದ ಡೇವಿಡ್ ಮಿಲ್ಲರ್ರ ಕ್ಯಾಚ್ “ವಿಶ್ವಕಪ್’ನಷ್ಟೇ ಅಮೂಲ್ಯವಾದುದು.
ಕೋಚ್ ದ್ರಾವಿಡ್ ಮಾರ್ಗದರ್ಶನ
ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಕೊಡುಗೆಯೂ ಮಹತ್ವದ್ದಾಗಿದೆ. 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್, ಏಕದಿನ ವಿಶ್ವಕಪ್ ಫೈನಲ್ ಸೋತರೂ ತಂಡದ ಮನೋಬಲ ಕುಗ್ಗದಂತೆ ಇನ್ನೊಂದು ಅವಧಿಗೆ ಮುಂದುವರಿದ ದ್ರಾವಿಡ್, ತಾನು ಸಾಧಿಸಬೇಕಾದ್ದನ್ನು (ಐಸಿಸಿ ಟ್ರೋಫಿ ಗೆಲುವು) ಕೊನೆಗೂ ಸಾಧಿಸಿ ತೋರಿಸಿದರು. ನಾಯಕ ರೋಹಿತ್ ಶರ್ಮ ಜತೆಗಿನ ಅವರ ಜುಗಲ್ಬಂದಿಯಲ್ಲಿ ಕೊನೆಗೂ ಐಸಿಸಿ ಟ್ರೋಫಿ ಗೆಲುವಿನ ಬರವೂ ನೀಗಿದೆ.
ವಿಶ್ವಕಪ್ ಗೆಲುವಿನ ಹಾದಿ…
ಲೀಗ್
*ಐರ್ಲೆಂಡ್ ಎದುರು 8 ವಿಕೆಟ್ ಜಯ
*ಪಾಕಿಸ್ತಾನ ವಿರುದ್ಧ 6 ರನ್ ಜಯ
*ಅಮೆರಿಕ ಎದುರು 7 ವಿಕೆಟ್ ಜಯ
*ಕೆನಡಾ ವಿರುದ್ಧ ಪಂದ್ಯ ರದ್ದು
ಸೂಪರ್-8
*ಅಫ್ಘಾನಿಸ್ತಾನ ಎದುರು 47 ರನ್ ಜಯ
*ಬಾಂಗ್ಲಾದೇಶ ವಿರುದ್ಧ 50 ರನ್ ಜಯ
*ಆಸ್ಟ್ರೆಲಿಯಾ ಎದುರು 24 ರನ್ ಜಯ
ಸೆಮಿಫೈನಲ್
*ಇಂಗ್ಲೆಂಡ್ ಎದುರು 68 ರನ್ ಗೆಲುವು
ಫೈನಲ್
*ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಜಯ
ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಂಪರ್ ಬಹುಮಾನ ಘೋಷಿಸಿದ ಬಿಸಿಸಿಐ!