ಬಾರ್ಬಡೋಸ್: 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2011ರ ಬಳಿಕ ಐಸಿಸಿ ಟ್ರೋಫಿ ಜಯಿಸಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಟೀಮ್ ಇಂಡಿಯಾ ಯಶಸ್ಸಿನಲ್ಲಿ ಬೌಲರ್ಗಳೊಂದಿಗೆ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ನಲ್ಲಿ ಹಿಡಿದ ಆ ಕ್ಯಾಚ್ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್ ನೀಡಿದ ಭಾರತದ ಬೌಲರ್ಗಳು ದಿಟ್ಟ ಪ್ರತಿರೋಧ ತೋರಿದರು.
ಈ ವೇಳೆ ಅಪಾಯಕಾರಿಯಾಗಿದ್ದ ಹೆನ್ರಿಚ್ ಕ್ಲಾಸೆನ್ಗೆ (52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಹಾರ್ದಿಕ್ ಪಾಂಡ್ಯ ಡಗೌಟ್ ದಾರಿ ತೋರಿಸಿದರು. ವಾಸ್ತವವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ತಪ್ಪು ಮಾಡಿದ್ದರೆ ವಿಶ್ವಕಪ್ ಕನಸು ಭಗ್ನವಾಗುತ್ತಿತ್ತು. ಸೂರ್ಯ ಅವರ ಈ ಅದ್ಬುತ ಫೀಲ್ಡಿಂಗ್ಗೆ ದೇಶದ ಕ್ರಿಕೆಟ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಮೊಸಳೆಯೊಂದಿಗೆ ಕಾದಾಡಿ ಕೈ ಕಳೆದುಕೊಂಡ ಬಾಲಕನೊಂದಿಗೆ ವೈದ್ಯರ ಅಮಾನವೀಯ ವರ್ತನೆ; ವಿಡಿಯೋ ವೈರಲ್
ಇದೀಗ ಈ ಕ್ಯಾಚ್ನ ಸುತ್ತ ವಿವಾದದ ಹುತ್ತವೇ ನಿರ್ಮಾಣವಾಗಿದ್ದು, ಪಂದ್ಯ ಮುಗಿದು ಕೆಲ ಗಂಟೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಯಾಚ್ನ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸೂರ್ಯ ಕುಮಾರ್ ಅವರು ಕ್ಯಾಚ್ ಹಿಡಿದು ಗಾಳಿಗೆ ಚೆಂಡನ್ನು ಎಸೆದಾಗ ಅವರ ಶೂ ಬೌಂಡರಿಯ ಕುಷನ್ ಅನ್ನು ಸ್ಪರ್ಶಿಸಿದೆ ಎನ್ನಲಾದ ವಿಡಿಯೊ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಬೌಂಡರಿಯ ರೋಪ್ ಅಲುಗಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ -ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಐಸಿಸಿ ಹಾಗೂ ಸಂಬಂಧಪಟ್ಟವರು ಈ ವಿವಾದಕ್ಕೆ ಸಂಬಂಧಿಸಿದಂತೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.