ನಾಲೆಗಳ ಬಳಿ ಮೂರು ದಿನಗಳಿಂದ ಬಿಡಾರ ಹೂಡಿದ ಸಿಬ್ಬಂದಿ
ಅಶೋಕ ಬೆನ್ನೂರು
ಸಿಂಧನೂರು: ನಗರ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶಗಳಿಗಾಗಿ ಎಡದಂಡೆ ನಾಲೆಗೆ ಹರಿಬಿಟ್ಟ ನೀರನ್ನು ಆಯಾ ಕೆರೆಗಳಿಗೆ ತುಂಬಿಸಲು ತಾಲೂಕು ಆಡಳಿತದ ನೇತೃತ್ವದಲ್ಲಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ವಿಫಲವಾದರೆ ಅಧಿಕಾರಿಗಳೇ ನೇರ ಹೊಣೆ ಎಂದು ಶಾಸಕ ಎಚ್ಚರಿಕೆ ನೀಡಿದ್ದಾರೆ.
ನಗರಕ್ಕೆ ಕುಡಿವ ನೀರು ಪೂರೈಕೆ ಮಾಡುವ ತುರ್ವಿಹಾಳ ಹತ್ತಿರದ ನಿರಂತರ ಕುಡಿವ ನೀರಿನ ಯೋಜನೆಯ 119 ಎಕರೆ ಕೆರೆ ತುಂಬಿಸುವುದೆ ತಲೆನೋವಾಗಿ ಪರಿಣಮಿಸಿದೆ. ಜನವರಿಯಲ್ಲಿ ಅರ್ಧ ಕೆರೆ ತುಂಬಿದ್ದರಿಂದ ಜನವರಿ ಎರಡನೆಯ ವಾರದವರೆಗೆ ಸಮಸ್ಯೆಯಾಗಲಿಲ್ಲ. ಕೊನೆಯ ವಾರ ನೀರಿನ ಸಮಸ್ಯೆ ಆಗುವ ಮೊದಲೇ ಶಾಸಕ ಹಂಪನಗೌಡ ಬಾದರ್ಲಿ ಕಾಳಜಿಯಿಂದ ತುಂಗಭದ್ರಾ ಎಡದಂಡೆ ನಾಲೆಗೆ ಜೂ.19ರಿಂದ ನೀರು ಹರಿದು ಬರುತ್ತಿದೆ. ಅದೇ ನೀರನ್ನು ಮುಖ್ಯ ಕಾಲುವೆಯಿಂದ ಕೆರೆಗೆ ತುಂಬಿಸಿಕೊಳ್ಳಲು ಹೈ-ಎಚ್ಪಿಯುಳ್ಳ ಹತ್ತಾರು ಮೋಟಾರ್ಗಳನ್ನು ಅಳವಡಿಸಿ, ಸ್ಥಳದಲ್ಲಿಯೇ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ನೇತೃತ್ವದ ತಂಡ ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದೆ. ನಿರ್ಲಕ್ಷ್ಯ ವಹಿಸಿದರೆ ನೀರಿನ ಸಮಸ್ಯೆಗೆ ಹೊಣೆಗಾರ ಆಗಬೇಕಾಗುತ್ತದೆಂಬ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಜೂ.19 ರಂದೇ ಮುಖ್ಯ ನಾಲೆಗೆ ಮೋಟಾರ್ ಅಳವಡಿಸಿ, ಬೃಹತ್ ಪೈಪ್ಗಳ ಮೂಲಕ ತುರ್ವಿಹಾಳ ಕೆರೆಗೆ ನೀರು ತುಂಬಿಸಿಕೊಳ್ಳುವುದು ಒಂದು ಭಾಗವಾದರೆ, 40ನೇ ಉಪಕಾಲುವೆ ಮೂಲಕ ನಗರದ ಸಣ್ಣ-ದೊಡ್ಡ ಕೆರೆ ತುಂಬಿಸುವ ಕೆಲಸವೂ ನಡೆದಿದೆ. ಜಲಾಶಯಕ್ಕೂ ಇನ್ನೂ ಹೇಳಿಕೊಳ್ಳುವಂಥ ಒಳಹರಿವಿಲ್ಲ. ಜಲಾಯನ ಪ್ರದೇಶದಲ್ಲು ಸಾಕಷ್ಟು ಮಳೆಯಾಗಿಲ್ಲ. ಮೂರು ತಿಂಗಳಾಗುವಷ್ಟು ಕೆರೆಗಳಿಗೆ ನೀರು ತುಂಬಿಕೊಂಡರೆ ಸಮಸ್ಯೆ ತಕ್ಕ ಮಟ್ಟಿಗೆ ತಗ್ಗಲಿದೆ.
ತಾಲೂಕಿನ 155 ಗ್ರಾಮೀಣ ಕೆರೆಗಳಿಗೆ ಜೂ.19ರಿಂದಲೇ ತಹಸೀಲ್ದಾರ್ ಅರುಣ್ ದೇಸಾಯಿ ಮಾರ್ಗದರ್ಶನದಲ್ಲಿ ತಾಪಂ ಇಒ ಚಂದ್ರಶೇಖರ ಸೂಚನೆಯನ್ವಯ ಗ್ರಾಪಂ ಪಿಡಿಒ, ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಕೆರೆಗಳನ್ನು ಸ್ವಚ್ಛ ಮಾಡಿಕೊಂಡು ನೀರು ತುಂಬಿಸಲು ಮುಂದಾಗಿದ್ದಾರೆ. ಕೆಲ ಕೆರೆಗಳನ್ನು ಸ್ವಚ್ಛಗೊಳಿಸಿಲ್ಲ ಎನ್ನುವ ದೂರುಗಳು ಕೇಳಿಬಂದಿದೆ. ಸಣ್ಣ ಪ್ರಮಾಣದ ಕೆರೆಗಳನ್ನು ಭರ್ತಿಗೊಳಿಸಿದ್ದು, ದೊಡ್ಡ ಕೆರೆಗಳು ಪ್ರಗತಿಯಲ್ಲಿವೆ. ತಾಲೂಕಿನ ಉಪ್ಪಳ ಕೆರೆ ಟೇಲೆಂಡ್ ಭಾಗದಲ್ಲಿದ್ದು ಹೊಸ ಕೆರೆ ಆಗಿರುವುದರಿಂದ ನೀರು ತುಂಬಿಸಿಲ್ಲ. ಎರಡೇ ದಿನಗಳಲ್ಲಿ ಕೆರೆಗಳನ್ನು ತುಂಬಿಸಿದರಷ್ಟೇ ನೀರು ಲಭ್ಯವಾಗಲಿವೆ. ಇಲ್ಲವಾದರೆ ನೀರಿನ ಸಮಸ್ಯೆ ಹೊಣೆಯನ್ನು ಅಧಿಕಾರಿಗಳೇ ಹೊರಬೇಕೆಂದು ಈಗಾಗಲೇ ಶಾಸಕ ಹಂಪನಗೌಡ ಬಾದರ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಪಿಡಿಒಗಳು ಹಾಗೂ ಸಿಬ್ಬಂದಿ ಕೆರೆ ತುಂಬಿಸಲು ಮುನ್ನಚ್ಚರಿಕೆ ವಹಿಸಿದ್ದಾರೆ.
ತುರ್ವಿಹಾಳ ಹತ್ತಿರದ 119 ಎಕರೆ, ನಗರದ ದೊಡ್ಡ ಮತ್ತು ಸಣ್ಣ ಕೆರೆ ಹಾಗೂ ತಾಲೂಕಿನ 155 ಕೆರೆಗಳನ್ನು ತುಂಬಿಸುವ ಸವಾಲನ್ನು ಅಧಿಕಾರಿಗಳು ಸ್ವೀಕರಿಸುವ ಅನಿವಾರ್ಯತೆಯಿದೆ. ಎರಡು ದಿನದಲ್ಲಿ ಕೆರೆಗಳನ್ನು ತುಂಬಿಸಲು ಯಾವ ಕ್ರಮಕೈಗೊಳ್ಳವರೋ ಕಾದು ನೋಡಬೇಕಿದೆ.
ಸಿಂಧನೂರು ತಾಲೂಕಿನ ತುರ್ವಿಹಾಳ ಬಳಿಯ 119 ಎಕರೆ ಪ್ರದೇಶದ ಕೆರೆ ತುಂಬಿಸಲು ಸನ್ನದ್ಧರಾಗಿದ್ದೇವೆ. ಜತೆಗೆ ಸಿಂಧನೂರಿನ ದೊಡ್ಡ ಮತ್ತು ಸಣ್ಣ ಕೆರೆ ತುಂಬಿಸಲು 40ನೇ ಉಪಕಾಲುವೆ ಮೂಲಕ ನೀರು ಹರಿಸಿಕೊಳ್ಳಲಾಗುತ್ತಿದೆ. ಪ್ರಾಮಾಣಿಕ ಪ್ರಯತ್ನ ಮಾಡಿ ಕೆರೆ ತುಂಬಿಸುವೆವು.
ಮಂಜುನಾಥ ಗುಂಡೂರು
ಪೌರಾಯುಕ್ತ, ಸಿಂಧನೂರು.
ತಾಲೂಕಿನ 155 ಕೆರೆಗಳನ್ನು ತುಂಬಿಸಲು ಈಗಾಗಲೇ ತಾಪಂ ಇಒ ಚಂದ್ರಶೇಖರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಬಹುತೇಕ ಕೆರೆಗಳು ತುಂಬುವ ಹಂತದಲ್ಲಿವೆ. ಕೆರೆ ತುಂಬಿಸುವ ವಿಚಾರದಲ್ಲಿ ನಿರ್ಲಕ್ಷ್ಯವಹಿಸುವಂತಿಲ್ಲ. ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.
ಅರುಣ್ ದೇಸಾಯಿ ತಹಸೀಲ್ದಾರ್, ಸಿಂಧನೂರು.
![ಕೆರೆಗೆ ನೀರು ತುಂಬಿಸಲು ಹರಸಾಹಸ](https://cdn.vvimgs.com/wp-content/uploads/2024/06/Sindhanur-water1.jpg)