ಬೆಂಗಳೂರು: ಕಾವೇರಿ ನೀರಿನ ಸ್ಥಿತಿ-ಗತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ನಿಯೋಗವೊಂದನ್ನು ಕಳುಹಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗ್ರಹಿಸಿದರು.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
ಎಲ್ಲೆಲ್ಲಿ ನೀರು ಇದೆ? ಎಲ್ಲಿ ಇಲ್ಲ? ಎಲ್ಲಿ ಬೆಳೆ ಒಣಗಿದೆ ಎಂಬುದನ್ನು ಸ್ಥಳ ಪರಿಶೀಲನೆ ಮಾಡಲಿ. ತಮಿಳರೂ ಬೇಡ ಕರ್ನಾಟಕದವರೂ ಬೇಡ ಬೇರೆ ರಾಜ್ಯದವರನ್ಮು ಕಳುಹಿಸಿಕೊಟ್ಟು ಸ್ಥಳ ಪರಿಶೀಲನೆ ಮಾಡಿಸಲಿ.
ರಾಜ್ಯದ ಜಲಾಶಯಗಳ ನೀರಿನ ಸ್ಥಿತಿ-ಗತಿಯನ್ನು ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಲಿ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಇಲ್ಲ. ಕಳೆದ 60 ವರ್ಷದಿಂದ ಎರಡೂ ರಾಷ್ಟ್ರೀಯ ಪಕ್ಷಗಳ ನಿಲುವನ್ನು ನಾನು ಎತ್ತಿ ಹೇಳಿದ್ದೇನೆ. ಕಾಂಗ್ರೆಸ್ ಇದ್ದಾಗಲೂ ಹೋರಾಟ ಮಾಡಿದ್ದೇನೆ. ಬಿಜೆಪಿ ಇದ್ದಾಗಲೂ ಹೋರಾಟ ಮಾಡಿದ್ದೇನೆ ಎಂದರು. ತಮಿಳುನಾಡಿನ ರಾಜಕೀಯ ಶಕ್ತಿ ಬಳಸಿಕೊಳ್ಳುವ ರಾಜಕಾರಣ ನಡೆದಿದ್ದೂ ಗೊತ್ತಿದೆ.
ನಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪಕ್ಷ ಇರುವುದು ಬರೀ ಅಧಿಕಾರಕ್ಕೋಸ್ಕರ ಅಲ್ಲ. ನಾನು ಅಹಂಕಾರದಿಂದ ಹೇಳುವುದಿಲ್ಲ. ಸ್ವಾಭಿಮಾನದಿಂದ ಹೇಳುತ್ತೇನೆ. ಈ ರಾಜ್ಯದ ಜನರ ಹಿತ ನನಗೆ ಮುಖ್ಯ ಎಂದು ಹೇಳಿದರು.
ಒಂದು ಕಡೆ ಗೋವಾ, ಇನ್ನೊಂದು ಕಡೆ ಮಹಾರಾಷ್ಟ್ರ, ಮತ್ತೊಂದು ಕಡೆ ತಮಿಳುನಾಡು. ಎಲ್ಲ ಕಡೆಯಿಂದಲೂ ನಮಗೆ ಅನ್ಯಾಯವಾಗಿದೆ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಕಾವೇರಿ ಕೊಳ್ಳದ ಜಲಾಶಯಗಳು ಬತ್ತಿರುವ ಫೋಟೋ ಪ್ರದರ್ಶಿಸಿದರು.