ಹೈದರಾಬಾದ್: ತೆಲಂಗಾಣದ ಕೊತಗುಡೆಂ ಜಿಲ್ಲೆಯ ಇಲ್ಲೇಂದುಲಪಾಡು ಗ್ರಾಮದಲ್ಲಿ ಶಾಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಗುರುವಾರ ಕುಡಿದು ಬಂದಿದ್ದು, ಪಾಲಕರು ಮತ್ತು ವಿದ್ಯಾರ್ಥಿಗಳು ಕೊಠಡಿಯಲ್ಲಿ ಕೂಡಿಹಾಕಿದ್ದಲ್ಲದೆ, ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ವೈದ್ಯನ ಎಡವಟ್ಟು..ಬಾಲಕನ ಗಾಯಗೊಂಡ ಜಾಗಕ್ಕೆ ಬದಲಾಗಿ ಕೈಗೆ ಶಸ್ತ್ರಚಿಕಿತ್ಸೆ!
ಘಟನೆ ನಡೆದ ಬಳಿಕ ಶಿಕ್ಷಕ ಕಲ್ವ ಸುಧಾಕರ್ ಅವರನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಅಮಾನತುಗೊಳಿಸಿದ್ದಾರೆ.
ನಡೆದಿದ್ದೇನು?: ಸುಧಾಕರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಈತನ ವರ್ತನೆಯಿಂದ ಮನನೊಂದ ವಿದ್ಯಾರ್ಥಿಗಳು ತರಗತಿಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಪಾಲಕರಿಗೆ ಕರೆ ಮಾಡಿದ್ದಾರೆ. ಪ್ರತಿಯಾಗಿ ಪಾಲಕರು ಶಾಲೆಯ ಗೇಟ್ಗೆ ಬೀಗ ಹಾಕಿದರು. ಶಿಕ್ಷಕರನ್ನು ಕ್ಯಾಂಪಸ್ನಿಂದ ಹೊರಬರಲು ಬಿಡಲಿಲ್ಲ. ಸುಧಾಕರ ಜೊತೆ ಗುಂಡು ಹಾಕಿದ ಗೆಳೆಯರು ಅಷ್ಟೊತ್ತಿಗಾಗಲೇ ಕ್ಯಾಂಪಸ್ ತೊರೆದಿದ್ದರು.
ಆ ವೇಳೆಗಾಗಲೇ ಸುಧಾಕರ್ ದುರ್ನಡತೆಯ ಬಗ್ಗೆ ಪಾಲಕರಿಂದ ಮಾಹಿತಿ ಪಡೆದ ಮಂಡಲ ಶಿಕ್ಷಣಾಧಿಕಾರಿ ಹಾಗೂ ಪೊಲೀಸರು ಕೂಡ ಶಾಲೆಗೆ ಆಗಮಿಸಿದ್ದಾರೆ. ನಾಲ್ಕು ಗಂಟೆ ನಂತರವೇ ಸುಧಾಕರ್ ಶಾಲೆಯಿಂದ ಹೊರಗೆ ಬರಲು ಸಾಧ್ಯವಾಗಿದೆ.
ಜೂನ್ 21 ರಂದು ತೆಲಂಗಾಣದ ಕೋತಗುಡೆಂನ ತಿಮ್ಮಪೇಟೆ ಗ್ರಾಮ ಪಂಚಾಯಿತಿಯ ಮಂಡಲ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಇನ್ನೂ ಒಬ್ಬ ಶಿಕ್ಷಕ ಪತ್ತಿಪತಿ ವೀರಯ್ಯ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಧಿಕಾರಿಗಳು ಬರುವವರೆಗೂ ಸ್ಥಳೀಯರು ವೀರಯ್ಯನನ್ನು ದನದ ಕೊಟ್ಟಿಗೆಯಲ್ಲಿ ಬಂಧಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.