ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯ | ‘ಸಾಹಿತ್ಯ ಸಹವಾಸ’ ಬಿಡುಗಡೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಡಾ.ಯು.ಆರ್. ಅನಂತಮೂರ್ತಿ ಅವರಿಗೆ ವಯಸ್ಸಾಗಿದ್ದರೂ ಸಹ ಉಪನ್ಯಾಸ ಮಾಡುತ್ತಿದ್ದರು. ಆದರೆ, ಅವರ ಮನಸ್ಸು ಕೆಲಸ ಮಾಡುವ ರೀತಿಗೆ ಯೌವನ ಇತ್ತು. ವಿಮರ್ಶಾತ್ಮಕ, ಸೃಷ್ಟೀಶಿಲವಾಗಿ ಎರಡನ್ನೂ ಬೆರೆಸಿ, ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಸಮರ್ಥವಾಗಿ ಮಾತನಾಡಲು ಅವರಿಂದ ಮಾತ್ರ ಸಾಧ್ಯವಿತ್ತು ಎಂದು ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ದಿ. ಪ್ರೊ.ಯು.ಆರ್. ಅನಂತಮೂರ್ತಿ ಅವರು ಡಾ. ಕಾರಂತ ಹಾಗೂ ಡಾ. ಅಡಿಗ ಅವರ ಕುರಿತು ಮಾತನಾಡಿದ ವಿಡಿಯೋ ಉಪನ್ಯಾಸ ಸರಣಿಯ ಸಾಹಿತ್ಯ ಸಹವಾಸ ಬಿಡುಗಡೆ ಹಾಗೂ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಸ ಜೀವಿಗಳು
ಡಾ. ಶಿವರಾಂ ಕಾರಂತ, ಡಾ. ಗೋಪಾಲಕೃಷ್ಣ ಅಡಿಗ ಹಾಗೂ ಡಾ.ಯು.ಆರ್. ಅನಂತಮೂರ್ತಿ ಈ ಮೂವರೂ ಸಹ ಸಾಹಸದ ಜೀವನ ಕಟ್ಟಿದವರು. ಮನಸ್ಸು ತಟ್ಟಬಹುದಾದ ಸೂಕ್ಷ್ಮಾತೀತ ಲಹರಿ ಮುಟ್ಟಿದವರು. Fresh ಆಗಿ ನೋಡುವುದು ಹೇಗೆಂದು ಕಲಿಸಿದವರು, ತಿಳಿಸಿದವರು, ಅನುಸರಿಸಿದವರು. ಕನ್ನಡ ಸಾಹಿತ್ಯದಲ್ಲಿ ಅನೇಕ ಬಾರಿ ನವ್ಯತೆ ಬಂದಿದೆ. ಆದರೆ, ಕಾರಂತ ಹಾಗೂ ಅಡಿಗರ ಅವಧಿಯಲ್ಲಿ 2ನೇ ಬಾರಿಗೆ ನವ್ಯತೆ ಬಂದಿತ್ತು ಎಂದರು.
ಮಾತು ಬಲು ಇಷ್ಟ
ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಕುವೆಂಪು ವಿವಿ ಯ ಉಪಕುಲಪತಿ ಶರತ್ ಅನಂತಮೂರ್ತಿ ಮಾತನಾಡಿ, ಕೆಲವರು ಯೋಚನೆ ಮಾಡಿ ಬರೆಯುತ್ತಾರೆ. ಆದರೆ, ನನ್ನ ತಂದೆ ಅನಂತಮೂರ್ತಿ ಅವರು ಮಾತನಾಡುತ್ತಲೇ ಹೊಸ ವಿಚಾರ ಹೇಳುತ್ತಿದ್ದರು. ಮಾತನಾಡುತ್ತಲೇ ಯೋಚನೆ ಮಾಡುವುದು ಅವರ ವಿಶೇಷತೆಯಾಗಿತ್ತು. ಹೀಗಾಗಿ ದಿನವೂ ಅವರಿಗೆ ಯಾರಾದರೂ ಮಾತನಾಡಲು ಬೇಕಾಗುತ್ತಿತ್ತು. ಸಾಹಿತ್ಯ ಸಹವಾಸ ಕಾರ್ಯಕ್ರಮದಿಂದಾಗಿ ನನ್ನ ತಂದೆಯೂ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದು ಮಾದರಿಯಾಗಿದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ನೃತ್ಯ ಕಲಾವಿದೆ ಕ್ಷಮಾ ರಾವ್, ಅನಂತಮೂರ್ತಿ ಅವರ ಪತ್ನಿ ಎಸ್ತಾರ್ ಅನಂತಮೂರ್ತಿ, ಬೆಂಗಳೂರಿನ ಡಾ.ಎಂ. ಗೋಪಾಲಕೃಷ್ಣ ಅಡಿಗ ಟ್ರಸ್ಟ್ನ ಸಂಚಾಲಕ ಎಂ.ಜಯರಾಮ್ ಅಡಿಗ ಉಪಸ್ಥಿತರಿದ್ದರು.
ಗೋಪಾಲಕೃಷ್ಣ ಅಡಿಗ ವಿರಚಿತ ಗೀತೆಯನ್ನು ಚಿನ್ಮಯಿ ಹಾಡಿದರು. ಅಜೀಂ ಪ್ರೇಮ್ಜಿ ಫೌಂಡೇಷನ್ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿ.ಎಸ್. ಮಹೇಶಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರಂತ ಹಾಗೂ ಅಡಿಗರ ಕಾವ್ಯ-ಜೀವನ ಕುರಿತು ವಿವಿಧ ಗೋಷ್ಠಿ, ಒಡನಾಟದ ಕುರಿತು ಒಡನಾಡಿಗಳಿಂದ ನೆನಪು ಕಾರ್ಯಕ್ರಮ ನಡೆದವು. ಯಕ್ಷಗಾನ ಪ್ರದರ್ಶನವೂ ಜರುಗಿತು.
ಒಬ್ಬರದು ವಿಳಂಬ, ಇನ್ನೊಬ್ಬರದು ಆತುರ
ನಾವೀನ್ಯತೆಯ ಅನುಕೂಲ, ಸಿದ್ಧಶೈಲಿಯ ಪ್ರತಿಕೂಲ ಸ್ಥಿತಿ ಅನುಸರಿಸಿ ಸಾಹಿತ್ಯ ರಚಿಸಿದವರು ಅಡಿಗರು. ಕವನದ ಒಂದು ಸಾಲು ಬರೆದು ಅದಕ್ಕೆ ಮುಂದಿನ ಶಬ್ದ ಸೂಕ್ತವಾಗಿ ಲಭಿಸದಿದ್ದಲ್ಲಿ ಅದಕ್ಕೆ ಒಂದೆರಡುದಿನ ಬಿಡುತ್ತಿದ್ದರು. ಆದರೆ, ಕಾರಂತರು ಹಾಗಲ್ಲ. ವಿಳಂಬ ಕಾಲದ ಸಂಗೀತ ಇಷ್ಟ ಪಡುತ್ತಿದ್ದ ಅವರು, ಸಾಹಿತ್ಯ ರಚನೆ ಕೂಡಲೇ ಮುಗಿಯಬೇಕಿತ್ತು. ಅಡಿಗರಿಗೆ ಕಾಯದೇ ಕವನ ರಚನೆ ಆಗುತ್ತಿರಲಿಲ್ಲ. ಕಾರಂತರಿಗೆ ಕಾಯುವುದೆಂದರೆ ವಿರೋಧ. ತತ್ಕ್ಷಣದಲ್ಲಿಯೇ ಸಾಹಿತ್ಯ ರಚಿಸುವುದರಲ್ಲಿ ಕಾರಂತರು ಪ್ರಚಂಡರಾಗಿದ್ದರು. ಅಲ್ಲದೆ, ಮಾನವೀಯತೆ ಇರುವ ಅನನ್ಯತೆಯ ವ್ಯಕ್ತಿ ಅವರಾಗಿದ್ದರು ಎಂದು ಲಕ್ಷ್ಮೀಶ ತೋಳ್ಪಾಡಿ ಒಂದೆರಡು ಘಟನೆಗಳ ಮೂಲಕ ಕಣ್ಣಿಗೆ ಕಟ್ಟುವ ಹಾಗೆ ಮನೋಜ್ಞವಾಗಿ ವಿವರಿಸಿದರು.