ಆಲ್ದೂರು: ತಂಬಾಕು ಸೇವನೆ ಜೀವಕ್ಕೆ ಮಾರಕ. ಕೆಲವರು ಮೋಜಿಗಾಗಿ ಮೊದಮೊದಲು ತಂಬಾಕು ಸೇವಿಸುತ್ತಾರೆ. ನಂತರ ಅದಕ್ಕೆ ದಾಸರಾಗುತ್ತಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಶಿವಾನಂದ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಣಕಲ್ ವಲಯದ ತ್ರಿಪುರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ತಂಬಾಕು ವಿರೋಧಿ ದಿನಾಚರಣೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಸಾವಿರಾರು ಜನ ತಂಬಾಕು ಸೇವನೆಯಿಂದ ಗಂಟಲು ಮತ್ತು ಬಾಯಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ. ಮೋಜಿಗಾಗಿ ಆರಂಭಿಸಿ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಆದಕಾರಣ ತಂಬಾಕು ಸೇವನೆಯಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಸಮೃದ್ಧಿ ವ್ಯವಸಾಯ ಬ್ಯಾಂಕ್ ನಿರ್ದೇಶಕ ಸುರೇಶ್ ಶೆಟ್ಟಿ ಮಾತನಾಡಿ, ಮನೆಯ ಗಂಡಸರು, ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಮನೆಯ ಮಹಿಳೆಯ ಆದ್ಯ ಕರ್ತವ್ಯ. ನೆಮ್ಮದಿಯ ಬದುಕು ಬೇಕೆಂದರೆ ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು.
ವಲಯ ಮೇಲ್ವಿಚಾರಕ ಸಂದೀಪ್, ಜ್ಞಾನ ವಿಕಾಸ ಸಮನ್ವಯ ಆಧಿಕಾರಿ ಭಾರತಿ, ಒಕ್ಕೂಟದ ಪದಾಧಿಕಾರಿ ಗೋಪಿ, ಸೇವಾ ಪ್ರತಿನಿಧಿ ಉಷಾ, ಪದ್ಮಾವತಿ ಇತರರಿದ್ದರು.