ಗಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಂಗ್ಲರ ಸವಾಲನ್ನು ಎದುರಿಸಲಿದ್ದು, 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಟೀಮ್ ಇಂಡಿಯಾ ತಯಾರಿ ನಡೆಸುತ್ತಿದೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲೂ ಟಾಪ್ ರನ್ ಸ್ಕೋರರ್ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುಟುಕು ವಿಶ್ವಸಮರದಲ್ಲಿ ವಿರಾಟ್ ಯಾಕೋ ಮಂಕಾದಂತೆ ಕಾಣುತ್ತಿದ್ದು, ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ.
ವಿರಾಟ್ ಕೊಹ್ಲಿ ಫಾರ್ಮ್ ಟೀಮ್ ಇಂಡಿಯಾವನ್ನು ಚಿಂತೆಗೆ ದೂಡಿದ್ದು, ಮುಂದಿನ ಪಂದ್ಯದಲ್ಲಿ ಕೊಹ್ಲಿಗೆ ಕೊಕ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ರೋಹಿತ್ ಶರ್ಮಾ ಉತ್ತರ ನೀಡಿದ್ದು, ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಇದಲ್ಲದೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಶಿವಕುಮಾರ್ರನ್ನು ಸಿಎಂ ಮಾಡುವುದು ಸಿದ್ದರಾಮಯ್ಯರಿಂದ ಮಾತ್ರ ಸಾಧ್ಯ: ಚಂದ್ರಶೇಖರನಾಥ ಸ್ವಾಮೀಜಿ
ಈ ಕುರಿತು ಮಾತನಾಡಿದ ರೋಹಿತ್, ಇವೆಲ್ಲವೂ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಮಗೆ ಈ ರೀತಿಯ ಮಾತುಗಳನ್ನು ಕೇಳುವಾಗ ಬೋರಿಂಗ್ ಅನಿಸಬಹುದು. ಆದರೆ ನ್ಯೂಯಾರ್ಕ್ನಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಅಲ್ಲಿ ಕ್ರೀಸಿಗೆ ಇಳಿದ ತಕ್ಷಣ ಹೊಡೆಬಡಿಯ ಆಟವಾಡುವುದು ಸೂಕ್ತವೆನಿಸಿರಲಿಲ್ಲ. ಪ್ರತಿಯೊಬ್ಬ ಆಟಗಾರನೂ ತನಗೆ ವಹಿಸಿರುವ ಜವಾಬ್ದಾರಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಪಂದ್ಯದಲ್ಲಿ ಪರಿಣಾಮ ಬೀರಲು ಯತ್ನಿಸುತ್ತಾರೆ.
ಪ್ರತಿಯೊಬ್ಬರೂ ನಿರ್ಭೀತಿಯ ಶೈಲಿಯ ಕ್ರಿಕೆಟ್ ಆಡುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ತಂಡದಲ್ಲಿ ಇಂತಹ ವಾತಾವರಣ ಸೃಷ್ಟಿ ಮಾಡಿದ್ದೇವೆ. ವೈಯಕ್ತಿಕ ಸಾಧನೆ ಹೆಚ್ಚಿನ ಮಹತ್ವ ಗಿಟ್ಟಿಸಿಕೊಳ್ಳುವುದಿಲ್ಲ. ಸೆಮಿಫೈನಲ್ ಪಂದ್ಯದ ಕುರಿತು ಹೆಚ್ಚು ಚಿಂತೆ ಮಾಡುವುದಿಲ್ಲ. ನಮಗಿದು ಪಂದ್ಯ ಮಾತ್ರವಾಗಿದೆ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಕ್ರಿಕೆಟ್ ಆಡಿದ್ದಲ್ಲಿ ಖಂಡಿತವಾಗಿಯೂ ಗೆಲ್ಲಲಿದ್ದೇವೆ. ಫೈನಲ್ ಕುರಿತು ಈಗಲೇ ಯೋಚಿಸುವುದಿಲ್ಲ. ಸಾವು ಜಾರಿ ಮಾಡಬೇಕಾಗಿರುವ ಯೋಜನೆ ಬಗ್ಗೆ ಸ್ಪಷ್ಟತೆ ಹೊಂದಿದ್ದರೆ ಸಾಕು ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.