ಉಪ್ಪಿನಬೆಟಗೇರಿ: ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಹೇಳಿದರು.
ಧಾರವಾಡ ತಾಲೂಕಿನ ಹಂಗರಕಿ ಗ್ರಾಪಂ ವ್ಯಾಪ್ತಿಯಲ್ಲಿ 2023-24 ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ತಾಲೂಕು, ಕೆರೆ ಅಭಿವೃದ್ಧಿ ಸಮಿತಿ ದುಬ್ಬನಮರಡಿ ಹಾಗೂ ಹಂಗರಕಿ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾದ ದುಬ್ಬನಮರಡಿ ಕೆರೆಯ ಅಂಗಳದಲ್ಲಿ ಸಸಿ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಗ್ರಾ ಯೋಜನೆಯಿಂದ ರಾಜ್ಯದಾದ್ಯಂತ ಸುಮಾರು 730ಕ್ಕೂ ಅಧಿಕ ಕೆರೆಗಳ ಪುನರುಜ್ಜೀವನಗೊಳಿಸಿ ಸಾಕು ಪ್ರಾಣಿಗಳು ಮತ್ತು ಪಕ್ಷಿ ಸಂಕುಲಕ್ಕೆ ಅನುಕೂಲ ಮಾಡಿದ್ದು, ಈಗ ಕೆರೆಯ ಅಂಗಳದಲ್ಲಿ ಮಹಾಗಣಿ, ತಭೂಬಿಯ, ನಾಗಸಂಪಿಗೆ, ಹೊಳೆ ದಾಸವಾಳ, ಸಿಲ್ವರ್, ಪೇರಳೆ, ನೇರಳೆ, ಕಾಡು ಬದಾಮಿ, ಹೊಂಗೆ ಸೇರಿದಂತೆ ವಿವಿಧ ತಳಿಯ 100 ಸಸಿಗಳನ್ನು ನಾಟಿ ಮಾಡಿದ್ದು, ಅವು ಹಾಳಾಗದಂತೆ ಎಲ್ಲರೂ ಕಾಳಜಿ ಮಾಡಿದರೆ, ಒಳ್ಳೆಯ ಗಾಳಿ, ನೆರಳು, ಪಕ್ಷಿಗಳ ಕಲರವದ ಜತೆಗೆ ಸುಂದರ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಯೋಜನೆಯ ಕೃಷಿ ಅಧಿಕಾರಿ ಶಂಕ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಕ್ಷೇತ್ರದಿಂದ ಹಳ್ಳಿಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರು ಸಹಕಾರ ನೀಡುವುದರ ಜತೆಗೆ ತನು, ಮನ, ಧನದಿಂದ ಸಹಾಯ ಮಾಡಿದರೆ ಮತ್ತಷ್ಟು ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷ ವಿಠ್ಠಲ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಅಶೋಕ ಕೆ, ಧಾರವಾಡ ಪ್ರಾದೇಶಿಕ ಕಚೇರಿಯ ಇಂಜಿನಿಯರ್ ಲಿಂಗರಾಜ, ಯೋಜನೆಯ ವಲಯ ಮೇಲ್ವಿಚಾರಕ ಈಶ್ವರ ಪಾಟೀಲ, ಗರಗ ಆರಕ್ಷಕ ಠಾಣೆಯ ಹವಾಲ್ದಾರ್ ಜಿ.ಡಿ. ಕಿಲ್ಲೇದಾರ, ಶಿಕ್ಷಕ ಪವಾರ, ಗ್ರಾಪಂ ಸದಸ್ಯೆ ಲಕ್ಷ್ಮೀ ಪಟ್ಟಿಹಾಳ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ತುಕಾರಾಮ ಪಟ್ಟಿಹಾಳ, ಸುಭಾಸ ಪಟ್ಟಿಹಾಳ, ಸೇವಾ ಪ್ರತಿನಿಧಿಗಳಾದ ವಿಜಯಲಕ್ಷ್ಮೀ, ಲಕ್ಷ್ಮೀ ಶಂಕರ ಹೂಗಾರ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು, ವಿದ್ಯಾರ್ಥಿಗಳು, ರೈತರು, ಗ್ರಾಮಸ್ಥರು ಇದ್ದರು.