ಕಡಬ: ಕೊಂಬಾರು ಗ್ರಾಮದ ನಾರಡ್ಕ ಎಂಬಲ್ಲಿ ಹೊಳೆಯಲ್ಲಿ ವಿಪರೀತ ನೀರು ಹರಿಯುತ್ತಿದ್ದರೂ ಪ್ರವಾಹದಲ್ಲಿ ಕಾರೊಂದನ್ನು ದಾಟಿಸುವ ದುಸ್ಸಾಹಸ ಮಾಡಿದ ಘಟನೆ ಗುರುವಾರ ನಡೆದಿದೆ.
ಈ ಕಾರು ರೈಲ್ವೇ ಇಲಾಖೆಯವರಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗುತ್ತಿದೆ. ಕಳೆದೆರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಈ ನೀರಿನಲ್ಲಿ ಕಾರನ್ನು ದಾಟಿಸುವ ದುಸ್ಸಾಹಸ ಮಾಡಿರುವುದು ಮಾತ್ರ ಅಚ್ಚರಿ ತಂದಿದೆ.
ಶಾಶ್ವತ ಸೇತುವೆ ನಿರ್ಮಾಣಕ್ಕೆ ಆಗ್ರಹ
ಕೊಂಬಾರು ಗ್ರಾಮದ ಕೆಂಜಾಲದಿಂದ ಪ್ರಾರಂಭಗೊಂಡು, ಕೊಲ್ಕಜೆ, ಓಡೋಳಿ, ನಾರಡ್ಕ, ಸುಬ್ರಹ್ಮಣ ರೈಲ್ವೆ ಸ್ಟೇಷನ್ ಮೂಲಕ ಹಾದು ನೆಟ್ಟಣವನ್ನು ಸೇರುವ ಈ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯೂ ದ.ಕ.ಜಿಲ್ಲಾ ಪಂಚಾಯತಿನ ಅಧೀನದಲ್ಲಿ ಬರುವ ರಸ್ತೆಯಾಗಿರುತ್ತದೆ. ಸುಮಾರು ಹದಿನೈದು ವರ್ಷಗಳಿಂದ ಈ ರಸ್ತೆ ತುಂಬ ಹದಗೆಟ್ಟಿದ್ದು ಜನರಿಗೆ ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ಇದೆ.
ಇದೇ ರಸ್ತೆಯ ಮಧ್ಯ ಭಾಗದ ಓಡೋಳಿ ಎಂಬ ಸ್ಥಳದಲ್ಲಿ ರೈಲ್ವೆ ಇಲಾಖೆಯವರು ಹಿಂದಿನ ಕಾಲದ ಕಬ್ಬಿಣದ ತಗಡು ಶೀಟ್ ಹಾಸಿ ನಿರ್ಮಿಸಿದ ಒಂದು ಸೇತುವೆ ಇದ್ದು, ಈ ಸೇತುವೆಯಲ್ಲಿ ಸಂಚಾರಿಸುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಹೋಗುವಂತಹ ಪರಿಸ್ಥಿತಿ ಇದೆ.
ಜನರು ಕಳೆದ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ಬ್ಯಾನರ್ಗಳನ್ನು ಹಾಕಿ ಎಚ್ಚರಿಕೆ ನೀಡಿದ್ದರು. ಮಾತುಕತೆ ನಡೆಸಿ ಚುನಾವಣೆ ಕಳೆದ ತಕ್ಷಣವೇ ಈ ರಸ್ತೆ ಮತ್ತು ಅಪಾಯದಂಚಿನಲ್ಲಿರುವ ಮೋರಿ ಮತ್ತು ಸೇತುವೆಯನ್ನು ಸಂಪೂರ್ಣ ದುರಸ್ತಿ ಮಾಡಿ ಜನರ ಬೇಡಿಕೆ ಈಡೇರಿಸುವುದಾಗಿ ಅಧಿಕಾರಿಗಳು ಹಾಗೂ ಪ್ರಮುಖರು ಭರವಸೆ ನೀಡಿದ್ದು ಮತದಾನ ಬಹಿಷ್ಕಾರ ಹಿಂಪಡೆಯಲಾಗಿತ್ತು.
ಊರಿನವರು ಸೇರಿಕೊಂಡು ಶ್ರಮದಾನ ಎಂಬ ಒಂದು ವಾಟ್ಸಾಪ್ ಗ್ರೂಪ್ ರಚನೆ ಮಾಡಿ ಸಹಕಾರದ ಮೂಲಕ ಕಳೆದ ಬೇಸಿಗೆಯಲ್ಲಿ ಜನರು ಓಡಾಡುವಂತೆ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಮಾಡಿಕೊಂಡಿದ್ದಾರೆ. ಈಗ ಮುಳುಗಡೆಯಾಗಿರುವ ಕಾರು ಇರುವ ಸ್ಥಳದಲ್ಲಿ ಊರಿನವರು ಸೇರಿ ಮರದ ದಿಮ್ಮಿಗಳನ್ನು ಜೋಡಿಸಿ ತಾತ್ಕಾಲಿಕವಾದ ಪಾಲವೊಂದನ್ನು ನಿರ್ಮಿಸಿದ್ದು ಈ ಸಂಕದಲ್ಲಿ ಕಾರು ಚಲಾಯಿಸಲು ಭಯಗೊಂಡು ಕಾರಿನ ಚಾಲಕ ಹೊಳೆ ದಾಟಿಸಲು ಮುಂದಾದ ಸಂದರ್ಭದಲ್ಲಿ ಕಾರು ನೀರಲ್ಲಿ ಮುಳುಗಿ ಅಪಾಯದಿಂದ ಪಾರಾಗಿದ್ದಾರೆ.