ಪುತ್ತೂರು: ನೆಹರು ನಗರ-ವಿವೇಕಾನಂದ ಕಾಲೇಜು-ಹಾರಾಡಿ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ನಿರ್ಮಾಣ 5.34 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿದ್ದು, ಪುಟ್ಪಾತ್ ಗೆ ಧಾರಾಕಾರವಾಗಿ ಸುರಿಯುವ ಮಳೆಯ ನಡುವೆ ಛತ್ರಿ ಹಿಡಿದುಕೊಂಡು ಸಿಮೆಂಟು ಹಾಕುವ ಕಾರ್ಯ ಸೋಮವಾರ ನಡೆದಿದೆ.
![ಕೊಡೆ ಹಿಡಿದು -ಪುಟ್ಪಾತ್ ಕಾಮಗಾರಿ! - ಮಳೆಗೆ ಸಿಮೆಂಟ್ ಕರಗಿ ಹೋದರೂ ಗೊಡವೆ ಇಲ್ಲ](https://cdn.vvimgs.com/wp-content/uploads/2024/07/PTR_1-JUL_4-1280x960.jpg)
ಬಂಟ್ವಾಳ-ಕಬಕ ಪುತ್ತೂರು ರೈಲ್ವೆ ನಿಲ್ದಾಣದ ನಡುವೆ ಬರುವ ಸೇತುವೆ ನಂಬರ್ 520ರಲ್ಲಿ ನಿತ್ಯ 10 ಸಾವಿರಕ್ಕೂ ಅಽಕ ವಿದ್ಯಾರ್ಥಿಗಳು ಸಂಚರಿಸುವ ಜತೆಗೆ ವಾಹನಗಳಿಗೆ ಪುತ್ತೂರು ಪೇಟೆಗೆ ಹೋಗದೆ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಾಗಿತ್ತು. ಸೇತುವೆ ಕಿರಿದಾಗಿದೆ ಎಂಬ ಕಾರಣಕ್ಕೆ 10 ವರ್ಷಗಳಿಂದ ಅಭಿವೃದ್ಧಿ ಬೇಡಿಕೆ ಸಲ್ಲಿಸಿ ಚುನಾವಣೆಯ ಸಂದರ್ಭದಲ್ಲಿ ಸೇತುವೆ ಕಾಮಗಾರಿ ನಡೆದು ಸಂಚಾರಕ್ಕೆ ಮುಕ್ತವಾಗಿದೆ.
ಸೇತುವೆಯ ಇಕ್ಕೆಲಗಳಲ್ಲಿ ವಿದ್ಯಾರ್ಥಿಗಳಿಗೆ ತೆರಳಲೆಂದೆ ಪುಟ್ – ಪಾತ್ ನಿರ್ಮಿಸಲಾಗಿದ್ದು, ಅದರ ಕಾಮಗಾರಿ ಪೂರ್ಣವಾಗಿಲ್ಲ. ರೈಲ್ವೆ ಕಾಮಗಾರಿಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಕಾಮಗಾರಿಯನ್ನು ನಡೆಸುವಾಗ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಬೇಕಾಗಿದೆ. ಆದರೆ ನೆಹರು ನಗರದಲ್ಲಿ ನಡೆಯುತ್ತಿರುವ ಪುಟ್ಪಾತ್ ಕಾಮಗಾರಿ ಗಮನಿಸಿದರೆ ಇದರ ಮೇಲೆ ನಡೆದಾಡುವುದು ಎಷ್ಟು ಸುರಕ್ಷಿತ ಎಂಬ ಅನುಮಾನ ಮೂಡುತ್ತಿದೆ.
![ಕೊಡೆ ಹಿಡಿದು -ಪುಟ್ಪಾತ್ ಕಾಮಗಾರಿ! - ಮಳೆಗೆ ಸಿಮೆಂಟ್ ಕರಗಿ ಹೋದರೂ ಗೊಡವೆ ಇಲ್ಲ](https://cdn.vvimgs.com/wp-content/uploads/2024/07/PTR_1-JUL_5-1280x960.jpg)
ಸೇತುವೆ ನಂಬರ್ 520ರ ಒಂದು ಭಾಗದ ಪುಟ್ಪಾತ್ನಲ್ಲಿ ಸೋಮವಾರ ಬೆಳಗ್ಗಿನಿಂದ ಸುರಿಯುತ್ತಿರುವ ಮಳೆಯ ನಡುವೆಯೂ ಸಿಮೆಂಟ್ ಹಾಕುವ ಕಾರ್ಯ ನಡೆದಿದೆ. ಇನ್ನೊಂದು ಭಾಗಕ್ಕೆ ತಲುಪುವ ಹೊತ್ತಿಗೆ ಮೊದಲು ಹಾಕಿದಲ್ಲಿ ಸಿಮೆಂಟ್ ಮಳೆಗೆ ತೊಳೆದು ಹೋಗಿ ಎಂ. ಸ್ಯಾಂಡ್ ಮಾತ್ರ ಉಳಿದಿದೆ. ಕಾಮಗಾರಿಯನ್ನು ನೋಡಿಕೊಳ್ಳಲು ಅಧಿಕಾರಿ ವರ್ಗವೂ ಸ್ಥಳದಲ್ಲಿ ಇಲ್ಲ.