ಲಖನೌ: ಅಯೋಧ್ಯೆಯಲ್ಲಿ ಹಲವಾರು ಕುಟುಂಬಗಳಿಂದ ಬಿಜೆಪಿ ಅನ್ಯಾಯವಾಗಿ ಭೂಮಿಯನ್ನು ಕಿತ್ತುಕೊಂಡಿದೆ. ಅದರಿಂದ ನಿರಾಶ್ರಿತರಾದವರಿಗೆ ಪರಿಹಾರ ನೀಡುತ್ತಿಲ್ಲ ಎಂದು ಲೋಕಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನು ನಿರಾಕರಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ಮತ್ತು ಅಯೋಧ್ಯೆ ಮಾನಹಾನಿ ಮಾಡಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ರಾಹುಲ್ಗಾಂಧಿ ಪತ್ರ; ಉಲ್ಲೇಖಿಸಿರುವ ಅಂಶಗಳೇನು ಗೊತ್ತಾ?
ಸಂಸತ್ತಿನಂತಹ ಪವಿತ್ರ ಸ್ಥಳದಲ್ಲಿ ರಾಹುಲ್ ಸುಳ್ಳು ಹೇಳಿಕೆ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ಅಯೋಧ್ಯೆ ಮಾನಹಾನಿ ಮಾಡಲು ಈ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೇಳೆ ನಿರಾಶ್ರಿತರಾದ ಜನರಿಗೆ 1733 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಅವರು ಹೇಳಿದರು. ರಾಮಪಥ, ಭಕ್ತಿಪಥ, ಜನ್ಮಭೂಮಿ ಪಥ ಅಥವಾ ಅಯೋಧ್ಯೆ ವಿಮಾನ ನಿಲ್ದಾಣ ನಿರ್ಮಾಣದಕ್ಕೆ ಭೂಮಿ, ಮನೆ, ಅಂಗಡಿಯನ್ನು ಸ್ವಾಧೀನಪಡಿಕೊಂಡಿರುವ ಎಲ್ಲರಿಗೂ ಪರಿಹಾರ ನೀಡಲಾಗಿದೆ. ಅಂಗಡಿಗಳನ್ನು ಹೊಂದಿದ್ದವರಿಗೆ ಅಂಗಡಿ ನಿರ್ಮಿಸಿದ್ದೇವೆ. ಇಲ್ಲದವರಿಗೆ ಬಹುಹಂತದ ಸಂಕೀರ್ಣಗಳಲ್ಲಿ ಹೊಸ ಅಂಗಡಿಗಳನ್ನು ಮಂಜೂರು ಮಾಡಿದ್ದೇವೆ ಎಂದು ತಿಳಿಸಿದರು.
ಅಯೋಧ್ಯೆಯನ್ನು ಇಲ್ಲಿಯವರೆಗೆ ಗುರುತು ಹಿಡಿಯದಂತೆ ಇಟ್ಟಿದ್ದವರು ಯಾರು ಎಂಬುದು ಎಲ್ಲರಿಗೂ ಗೊತ್ತು. ರಾಹುಲ್ ಗಾಂಧಿ ಮತ್ತು ಅವರ ಮಿತ್ರರು ಅಯೋಧ್ಯೆಯನ್ನು ವನವಾಸದ್ಲಲಿ ಇರಿಸಿದ್ದಲ್ಲದೆ, ಸರಯೂ ನದಿಯನ್ನು ಕೆಂಪಾಗಿಸಿದರು ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಸೋಮವಾರ (ಜುಲೈ 1) ಮಾತನಾಡಿದ ರಾಹುಲ್ ಗಾಂಧಿ, ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಜನರಿಂದ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ. ಸಣ್ಣಪುಟ್ಟ ಅಂಗಡಿಗಳನ್ನು ಕೆಡವಿ ಜನರನ್ನು ಬೀದಿಗೆ ತರಲಾಗಿದೆ. ಆದರೆ ಇದುವರೆಗೂ ಯಾರಿಗೂ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು. (ಏಜೆನ್ಸೀಸ್)
ಎನ್ಡಿಎ ಸಂಸದೀಯ ಸಭೆಯಲ್ಲಿ ಸಂಸದರಿಗೆ ‘ನಮೋ’ ಕಿವಿಮಾತು; ಪ್ರಧಾನಿ ಹೇಳಿರುವ ಸಲಹೆ ಏನು ಗೊತ್ತಾ?