ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸಿಎಂ ಗೃಹ ಕಚೇರಿ ‘ಕೃಷ್ಣಾ’ಕ್ಕೆ ಬುಧವಾರ ಮುತ್ತಿಗೆ. ಬೆಂಗಳೂರಿನ ಅರಮನೆ ಮೈದಾನ ಆವರಣದ ವೈಟ್ಪೆಟೆಲ್ಸ್ ಸಭಾಂಗಣದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಸಭೆ ಗುರುವಾರ ನಿಗದಿ.
ಲೋಕಸಭೆ ಚುನಾವಣೆ ಕುರಿತು ಸಮಿತಿಗಳ ವರದಿ, ಪರಾಜಿತ ಅಭ್ಯರ್ಥಿಗಳ ಅನಿಸಿಕೆ ಆಧರಿಸಿ ಜು.5 ಮತ್ತು 6ರಂದು ಆತ್ಮಾವಲೋಕನ ಸಭೆ. ಇವು, ರಾಜ್ಯದ ಪ್ರತಿಪಕ್ಷ ಬಿಜೆಪಿ ಚಟುವಟಿಕೆಗಳ ಸರಣಿ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬುಧವಾರ ಹೋರಾಟ ನಡೆಯಲಿದೆ. ಗುರುವಾರದಿಂದ ಶನಿವಾರದ ವರೆಗೆ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಕಾರಿಣಿ ವಿಶೇಷ, ಆತ್ಮಾವಲೋಕನ ಸಭೆಗಳು ನಡೆಯಲಿವೆ.
ಪಟ್ಟು ಬಿಡದೆ ಚಳವಳಿ: ವಾಲ್ಮೀಕಿ ನಿಗಮದ ಜತೆಗೆ ಇತ್ತೀಚೆಗೆ ಹೊರಬಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನಗಳ ಅಕ್ರಮವನ್ನು ಬಿಜೆಪಿ ತನ್ನ ಹೋರಾಟದ ಬತ್ತಳಿಕೆಗೆ ಸೇರಿಸಿದೆ. ಈ ಅವ್ಯವಹಾರಗಳ ತನಿಖೆ ಸಿಬಿಐಗೆ ಒಪ್ಪಿಸಬೇಕು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಮಲಪಡೆ, ಬುಧವಾರ ಮೂರನೇ ಹಂತದ ಚಳವಳಿಗೆ ಧುಮುಕಲಿದೆ. ಕುಮಾರಕೃಪಾ ಅತಿಥಿಗೃಹದಿಂದ ಬೆಳಗ್ಗೆ 10.30ಕ್ಕೆ ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ಹೊರಟು ಸಿಎಂ ಗೃಹ ಕಚೇರಿಗೆ ‘ಕೃಷ್ಣಾ’ಕ್ಕೆ ಮುತ್ತಿಗೆ ಹಾಕಲಿದೆ. ಈ ಹೋರಾಟದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಅಪೇಕ್ಷಿತರು, ಆಹ್ವಾನಿತರು: ಅರಮನೆ ಮೈದಾನ ಆವರಣದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಗುರುವಾರ ಇಡೀ ದಿನ ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶೇಷ ಆಹ್ವಾನಿತರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಉಸ್ತುವಾರಿಯಾಗಿದ್ದ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಭಾಗವಹಿಸಲಿದ್ದಾರೆ.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ ಎಂದರು. ಪಕ್ಷದ ಮಂಡಲದ ಅಧ್ಯಕ್ಷರಿಂದ ಮೇಲ್ಮಟ್ಟದ ಎಲ್ಲ ಪದಾಧಿಕಾರಿಗಳು ಸಭೆಗೆ ಅಪೇಕ್ಷಿತರಾಗಿದ್ದು, ಒಟ್ಟು 1,745 ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕೇಂದ್ರದಲ್ಲಿ ಮೂರನೇ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಆಡಳಿತದ ಚುಕ್ಕಾಣಿ , ಮೂರನೇ ಬಾರಿ ಪ್ರಧಾನಿಯಾದ ನರೇಂದ್ರ ಮೋದಿಯವರಿಗೆ ಅಭಿನಂದನೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಎರಡು ನಿರ್ಣಯಗಳನ್ನು ಸಭೆ ಸ್ವೀಕರಿಸಲಿದೆ. ಪಕ್ಷದ ಮುಂದಿನ ಸಂಘಟನಾ ಕಾರ್ಯಯೋಜನೆ, ಬೂತ್ವುಟ್ಟಕ್ಕೂ ತಿಳಿಸಬೇಕಾದ ಹಲವಾರು ವಿಚಾರಗಳ ಬಗ್ಗೆ ಸಭೆ ವಿಸõತವಾಗಿ ರ್ಚಚಿಸಿ, ಮಾರ್ಗದರ್ಶನ ಮಾಡಲಿದೆ ಎಂದು ನಂದೀಶ್ರೆಡ್ಡಿ ವಿವರಿಸಿದರು.
ಸೋಲಿನ ಪರಾಮರ್ಶೆ: ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಜು.5 ಮತ್ತು 6ರಂದು ಆತ್ಮಾವಲೋಕನ ಸಭೆಗಳನ್ನು ಆಯೋಜಿಸಿದ್ದು, ಎಂಟು ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ಮಾಡಲಿದೆ.ಆಯಾ ಲೋಕಸಭೆ ಕ್ಷೇತ್ರ ಸಮಿತಿ ವರದಿ, ಸೋತ ಉಮೇದುವಾರರ ಅಭಿಪ್ರಾಯ ಆಧರಿಸಿ ಸಭೆ ಅವಲೋಕನ ಮಾಡಲಿದೆ. ಆಯಾ ಕ್ಷೇತ್ರದ ವ್ಯಾಪ್ತಿ ಶಾಸಕರು, ಮಾಜಿ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಚುನಾವಣೆಯಲ್ಲಿ ವಿಫಲವಾಗಿದ್ದೇಕೆ? ಎನ್ನುವುದನ್ನು ಸಭೆ ರ್ಚಚಿಸಲಿದೆ. ಹಿನ್ನಡೆ ಆತ್ಮಾವಲೋಕನ ವಿಳಂಬವಾಗಿಲ್ಲ. ಪೂರ್ವನಿಗದಿತ ಕಾರ್ಯಚಟುವಟಿಕೆಗಳು ಮುಗಿದ ಬೆನ್ನಲ್ಲೇ ಸೋಲಿನ ವಿಮರ್ಶೆಗೆ ಮುಂದಾಗಿದ್ದೇವೆ ಎಂದು ನಂದೀಶ್ ರೆಡ್ಡಿ ಸಮರ್ಥಿಸಿಕೊಂಡರು.