ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯ ರೈತರು ಹಾಗೂ ಕಾರ್ಮಿಕರು ಮತ್ತು ಶೇರುದಾರರ ಹಣ ಮರಳಿ ನೀಡಬೇಕು ಎಂದು ಆಗ್ರಹಿಸಿ ಜುಲೈ 4ರಂದು ಬೆಳಗ್ಗೆ 10ಕ್ಕೆ ಕಾರ್ಖಾನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕರ್ನಾಟಕ ರೈತ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಈ ಕಾರ್ಖಾನೆಯನ್ನು ಎನ್ಸಿಎಲ್ಟಿಯಲ್ಲಿ ಹರಾಜು ಮಾಡಲಾಗಿದೆ. ಆದರೆ, ರೈತರ ಕಬ್ಬಿನ ಬಿಲ್ ಬಾಕಿ ಮತ್ತು 75 ಸಾವಿರ ಶೇರುದಾರರ ಹಣ ನೀಡುವುದನ್ನು ಕಾರ್ಖಾನೆ ಅಧಿಕಾರಿಗಳು ಮರೆತಿದ್ದಾರೆ. ಇದರಿಂದ ಕಬ್ಬು ಬೆಳೆಗಾರರು ಹಾಗೂ ಶೇರುದಾರರಿಗೆ ಬಹುದೊಡ್ಡ ಅನ್ಯಾಯವಾಗಲಿದೆ ಎಂದರು.
ರೈತರಿಗೆ ಹಾಗೂ ಶೇರುದಾರರಿಗೆ ಬ್ಯಾಂಕಿನ ಬಡ್ಡಿ ಸಮೇತ ಹಣ ವಾಪಸ್ ನೀಡಬೇಕು. ಕಾಮಿರ್ಕರ ಬಾಕಿ ಹಣ ನೀಡಬೇಕು, ಶೇರುದಾರರು, ರೈತರ ಹಿತ ಕಾಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಈ ಭಾಗದ ರೈತರು, ಶೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಳಿಯಪ್ಪ ದಬಗಲ್, ಖಜಾಂಚಿ ಮಂಜುನಾಥ ಕಲ್ಲೆನವರ, ಮಹ್ಮದ ಹನೀಫ ಗೋಷ್ಠಿಯಲ್ಲಿದ್ದರು.