More

    ಗ್ರಾಮಾಭಿವೃದ್ಧಿ ಯೋಜನೆ ಅಪಪ್ರಚಾರ ವಿರುದ್ಧ ದೂರು : ಜಿಲ್ಲಾ ಕಾರ್ಯದರ್ಶಿ ಮಹಾಬಲ ಕುಲಾಲ್ ಮಾಹಿತಿ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್‌ಬಿಐ ನಿಯಮದಂತೆ ಪ್ರಮುಖ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿಗೆ ಸಾಂಸ್ಥಿಕ ಬಿ.ಸಿ.ಯಾಗಿ ಸೇವೆ ಸಲ್ಲಿಸುತ್ತಿದೆ. ದೇಶದಲ್ಲೇ ಅತಿದೊಡ್ಡ ಸ್ವಸಹಾಯ ಸಂಘಗಳ ಆರ್ಥಿಕ ಸೇರ್ಪಡೆಯನ್ನು ನಿರ್ವಹಿಸುವ ಸಂಸ್ಥೆಯಾಗಿ ಗ್ರಾಮಾಭಿವೃದ್ಧಿ ಯೋಜನೆ ಗುರುತಿಸಿಕೊಂಡಿದೆ. ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳಿಂದ ನೇರವಾಗಿ ಸಾಲ ಸೌಲಭ್ಯವನ್ನು ನೀಡುತ್ತಿರುವುದರಿಂದ ಶೇ. 13.5 ಬಡ್ಡಿದರದಲ್ಲಿ ಒಂದು ಸಂಘಕ್ಕೆ ಗರಿಷ್ಠ ರೂ. 25 ಲಕ್ಷದವರೆಗೆ ಸಾಲ ದೊರೆಯುತ್ತಿರುವುದು ದೇಶದಲ್ಲೇ ಒಂದು ಮಾದರಿ ಬಿ.ಸಿ. ವ್ಯವಸ್ಥೆಯಾಗಿದೆ ಎಂದು ವಸಂತ ಸಾಲಿಯಾನ್ ಮತ್ತು ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್, ಜಿಲ್ಲಾ ಕಾರ್ಯದರ್ಶಿ ಮಹಾಬಲ ಕುಲಾಲ್ ಹೇಳಿದರು.

    ಬುಧವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳಲ್ಲಿ 46,972 ಸ್ವಸಹಾಯ ಸಂಘಗಳಿದ್ದು ರೂ. 2761 ಕೋಟಿ ಮೊತ್ತದ ಹೊರಬಾಕಿ ಇದೆ. ಕಿರು ಆರ್ಥಿಕ ಸಾಲ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲ ಸಂಸ್ಥೆಗಳು ಲಾಭದಾಯಕ ಉದ್ದೇಶಿತ ಸಂಸ್ಥೆಗಳಾಗಿದ್ದರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತ್ರ ಚಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ನೋಂದಾಯಿತವಾದ ಸಂಸ್ಥೆಯಾಗಿದೆ. ಆದಾಯದಲ್ಲಿ ಮಿಗತೆ ಬಂದರೆ ಅದನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅರ್ಪಿಸುವ ಚಾರಿಟೆಬಲ್ ಟ್ರಸ್ಟ್ ಸಂಸ್ಥೆಯಾಗಿದೆ ಎಂದು ತಿಳಿಸಿದರು.

    ಕೆಲವು ತಿಂಗಳುಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ಸಾಲವನ್ನು ಯಾರೂ ಕಟ್ಟಬೇಡಿ, ಲೈಸೆನ್ಸ್ ಇಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಇತ್ಯಾದಿ ಸುಳ್ಳು ಸುದ್ದಿಗಳನ್ನು ಸಮಾಜಘಾತುಕ ವ್ಯಕ್ತಿಗಳು ಹರಡುತ್ತಿದ್ದಾರೆ. ಅಪಪ್ರಚಾರದ ಬಗ್ಗೆ ಸಂಘದ ಸದಸ್ಯರು, ಸಾರ್ವಜನಿಕರು ಈಗಾಗಾಲೇ ಪೊಲೀಸ್ ಠಾಣೆಗಳಲ್ಲಿ ದೂರನ್ನು ದಾಖಲಿಸಿದ್ದಾರೆ. ಅಪಪ್ರಚಾರ ಮಾಡುತ್ತಿದ್ದ ಒಂದು ವ್ಯವಸ್ಥಿತ ಗುಂಪನ್ನು ಪಡುಬಿದ್ರೆಯ ಎಲ್ಲೂರಿನ ಜನತೆ ಪೊಲೀಸರಿಗೆ ಒಪ್ಪಿಸಿದ್ದು ಇತ್ತೀಚೆಗೆ ವರದಿಯಾಗಿದೆ.

    ಈ ಅಪಪ್ರಚಾರವನ್ನು ಅಷ್ಟಕ್ಕೇ ನಿಲ್ಲಿಸದೆ ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ತರುವ ಪ್ರಯತ್ನ ಕೆಲವು ದಿನಗಳ ಹಿಂದೆ ಪ್ರಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯ ಎಸ್‌ಪಿ ಯೋಜನೆಯ ಸಾಲ ಕಟ್ಟಬೇಡಿ, ಬಡ್ಡಿಕಟ್ಟ ಬೇಡಿ ಎಂದು ಹೇಳಿದ್ದಾರೆಂದು ಸುಳ್ಳು ಪ್ರಚಾರವನ್ನು ಸಮೂಹ ಮಾಧಮಗಳ ಮೂಲಕ ಕೆಲವು ಕಿಡಿಕೇಡಿಗಳು ಮಾಡುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಒಕ್ಕೂಟಗಳ ಪದಾಧಿಕಾರಿಗಳು, ಯೋಜನೆಯ ಅಧಿಕಾರಿಗಳು ಹಾಗೂ ಎಸ್‌ಬಿಐ ಅಧಿಕಾರಿಗಳು ಉಡುಪಿ ಎಸ್‌ಪಿ ಡಾ. ಅರುಣ್ ಅವರಿಗೆ ಸುಳ್ಳು ಪ್ರಚಾರ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ.

    ದೂರು ಸ್ವೀಕರಿಸಿದ ಎಸ್‌ಪಿ ಯೋಜನೆಯ ಸಾಲ ಕಟ್ಟಬೇಡಿ, ಬಡ್ಡಿ ಕಟ್ಟಬೇಡಿ ಎಂದು ನಾವು ಹೇಳಿಲ್ಲ, ಈ ಬಗ್ಗೆ ದೂರನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಘದ ಸದಸ್ಯರಿಗೆ, ಒಕ್ಕೂಟದ ಪದಾಧಿಕಾರಿಗಳಿಗೆ, ಎಸ್‌ಬಿಐ ಅಧಿಕಾರಿಗಳಿಗೆ, ಯೋಜನೆಯ ಅಧಿಕಾರಿಗಳಿಗೆ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

    ನಾರಾವಿ ಘಟನೆಗೂ ಯೋಜನೆಗೂ ಸಂಬಂಧವಿಲ್ಲ

    ಮೊನ್ನೆ ನಾರಾವಿಯಲ್ಲಿ ಕೆಲವು ವ್ಯಕ್ತಿಗಳ ನಡುವೆ ವೈಯಕ್ತಿಕ ವಿಚಾರದಲ್ಲಿ ನಡೆದ ಘಟನೆಯನ್ನು ಯೋಜನೆಯ ಮೇಲೆ ಅಪಪ್ರಚಾರ ಮಾಡಲು ಬಳಸಿಕೊಳ್ಳುವ ಕೃತ್ಯಕ್ಕೆ ಈ ಸಮಾಜಘಾತುಕ ಶಕ್ತಿಗಳು ಕೈ ಹಾಕಿರುವವುದನ್ನು ಕೂಡಾ ಈ ತೀವ್ರವಾಗಿ ಖಂಡಿಸಿದ್ದಾರೆ. ನಾರಾವಿಯಲ್ಲಿ ವೈಯಕ್ತಿಕ ವ್ಯವಹಾರಗಳ ವಿಚಾರದಲ್ಲಿ ಕೆಲವು ವ್ಯಕ್ತಿಗಳ ನಡುವೆ ಕಲಹ ಉಂಟಾಗಿದ್ದು, ಸ್ವಸಹಾಯ ಸಂಘದಲ್ಲಿ ಅವರ ಕಂತುಬಾಕಿ ಇಲ್ಲ. ಸಂಘದಲ್ಲಿ ಕಂತುಬಾಕಿ ಇಲ್ಲದ ಮೇಲೆ ವಸೂಲಾತಿ ಯಾರು ಬೈಕ್ ಸೀಜ್ ಮಾಡುತ್ತಾರೆ? ಯಾರೋ ವೈಯಕ್ತಿಕ ವಿಚಾರಗಳಿಗೆ ಕಲಹಗಳನ್ನು ಮಾಡಿಕೊಂಡರೆ ಅದನ್ನು ಕೆಲವರಿಗೆ ಪ್ರೇರಣೆ ನೀಡಿ ಯೋಜನೆ ಮೇಲೆ ಕೆಟ್ಟಹೆಸರು ತರುವ ಇಂತಹ ಹೀನ ಕೃತ್ಯಗಳನ್ನು ಖಂಡಿಸುತ್ತೇವೆ ಎಂದರು.

    ದ.ಕ ಅ.ಕ.ಜ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಪುತ್ತೂರು, ಅಧ್ಯಕ್ಷ ರೋನಾಲ್ಡಿಸೋಜಾ, ಜನ ಜಾಗೃತಿ ತಾಲೂಕು ಸಮಿತಿ ಅಧ್ಯಕ್ಷೆ ಶಾರದಾ ಆರ್ ರೈ , ಜನ ಜಾಗೃತಿ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಹೆಗ್ಡೆ, ತಿಮ್ಮಪ್ಪ ಗೌಡ, ವೆಂಕಟರಾಯ ಅಡೂರು ಹಾಗೂ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts