ವಿಜಯವಾಣಿ ಸುದ್ದಿಜಾಲ ಕಡಬ
ಹೆಸರಿಗೆ ಮಾತ್ರ ಕಡಬ ತಾಲೂಕು ಮಟ್ಟದ ಅಧಿಕಾರಿಗಳ ನೆರೆ ಮುಂಜಾಗ್ರತಾ ಸಭೆ, ಆದರೆ ಶಾಸಕರಿಗೆ ಮಾತ್ರ ಸುಳ್ಳು ಮಾಹಿತಿಗಳ ವರದಿಯನ್ನು ನೀಡುತ್ತಿದ್ದರು. ಶಾಸಕಿ ಇದನ್ನೇ ಸತ್ಯವೆಂದು ನಂಬಿದರೆ, ಇದನ್ನು ಕೇಳಿ ಸುಸ್ತಾದ ಸಭೆಯಲ್ಲಿದ್ದ ಪತ್ರಕರ್ತರು ಶಾಸಕಿಗೆ ನಿಜ ವಿಷಯ ತಿಳಿಸಿದ ಘಟನೆ ಬುಧವಾರ ನಡೆಯಿತು.
ಸಭೆಯು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಮ ಕರಣಿಕರು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಕಡಬ ಉಪ ತಹಸೀಲ್ದಾರ್ ಮನೋಹರ್ ಕೆ.ಟಿ.ಉಪಸ್ಥಿತರಿದ್ದರು.
ಅಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ಶಾಸಕರಿಗೆ ವರದಿಯನ್ನು ಒಪ್ಪಿಸಿದರು. ಇದನ್ನೇ ಸತ್ಯವೆಂದು ನಂಬಿದ ಶಾಸಕಿ ತಲೆ ಅಲ್ಲಾಡಿಸಿದರು. ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಎಲ್ಲ ಚರಂಡಿ ಕೆಲಸ ಆಗಿದೆ, ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿದಾಗ ಮಧ್ಯಪ್ರವೇಶಿಸಿ ಪತ್ರಕರ್ತರೊಬ್ಬರು, ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಕಡೆ ಚರಂಡಿ ರಿಪೇರಿ ಆಗಿದೆ ಎಂದು ಶಾಸಕರಿಗೆ ಯಾಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ? ಒಂದು ಮಳೆ ಬಂದಾಗ ಕಡಬ ಪೇಟೆ, ಕಳಾರ ಭಾಗ, ಕಡಬ ಕಾಲೇಜು ರಸ್ತೆ, ಹಳೇಸ್ಟೇಷನ್ ಭಾಗದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದನ್ನು ಯಾರು ಗಮನಕ್ಕೆ ತಂದಿಲ್ಲವೇ? ತಪ್ಪು ಮಾಹಿತಿ ಯಾಕೆ ನೀಡುತ್ತಿರಿ, ನಿಮಗೆ ಸಭೆ ಮಾಡಿ ಒಮ್ಮೆ ಇಲ್ಲಿಂದ ತೆರಳಿದರೆ ಆಯಿತೆ? ನಿಜವಾದ ಸಮಸ್ಯೆ ಬಗೆಹರಿಸುವವರು ಯಾರು ಎಂದು ಹೇಳಿದರು. ಬಳಿಕ ಶಾಸಕರು ಅವರನ್ನು ಪ್ರಶ್ನಿಸಿದಾಗ ಒಪ್ಪಿಕೊಂಡ ಅಧಿಕಾರಿ ಇದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.
ಭ್ರಷ್ಟ ಅಧಿಕಾರಿಗಳಿಗೆ ಪಾಠ
ಸಭೆಯಲ್ಲಿ ಭಾಗೀರಥಿ ಮುರುಳ್ಯ ಲಂಚ ಪಡೆಯುವ ಅಧಿಕಾರಿಗಳಿಗೆ ಮಾಡಿದ ಪಾಠ ಮನಕಲಕುವಂತಿತ್ತು. ಶಾಸಕಿ ಬುಧವಾರ ಇಡೀ ದಿನ ಕಡಬದಲ್ಲಿದ್ದು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು. ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿ ಲಂಚಕ್ಕಾಗಿ ಸತಾಯಿಸುತ್ತಾರೆ ಎನ್ನುವ ದೂರು ನೀಡಿದರು. ವಿದ್ಯಾರ್ಥಿಗಳ ಆದಾಯ ಜಾತಿ ಪ್ರಮಾಣಪತ್ರ ಪಡೆಯುವಾಗ ಲಂಚದ ಬೇಡಿಕೆ ಇಡುತ್ತಾರೆ ಎಂದು ಅಳಲು ತೋಡಿಕೊಂಡರು. ಇದರಿಂದ ತೀವ್ರ ಮನನೊಂದ ಶಾಸಕರು ನೆರೆ ಮುಂಜಾಗೃತ ಸಭೆಯಲ್ಲಿ ತನ್ನ ಅಸಮಾಧಾನಗೊಂಡಾಗ ಅಧಿಕಾರಿಗಳು ತಲೆ ತಗ್ಗಿಸಿದರು.