ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬದುಕಿನಲ್ಲಿ ಗೆಲ್ಲಲು ಮೌಲ್ಯಯುತ ಶಿಕ್ಷಣ ಅಗತ್ಯ. ಅದು ಕನ್ನಡ ಮಾಧ್ಯಮಗಳಿಂದಲೇ ಸಾಧ್ಯ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಎಸ್ಬಿವಿಪಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢಶಾಲೆಗಳಲ್ಲಿ 2024-25ನೇ ಸಾಲಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳ ಹೆಸರಿನಲ್ಲಿ ಕನ್ನಡ ಮಾಧ್ಯಮ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿ ಪೃಥ್ವಿರಾಜ ಹೆಗ್ಡೆ ನೀಡಿದ 1 ಲಕ್ಷ ರೂ. ಮೊತ್ತದ ಅಂಚೆ ಕಚೇರಿ ಬಾಂಡ್ಗಳನ್ನು ಮಂಗಳವಾರ ವಿತರಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ ಮಾತನಾಡಿ, ಕನ್ನಡ ಮಾಧ್ಯಮ ಶಾಲೆ ಉಳಿಸಿ ಬೆಳೆಸುವಲ್ಲಿ ಇಲ್ಲಿನ ಹಳೇ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಗುತ್ತಿಗೆ ಶಿಕ್ಷಕರನ್ನು ಒದಗಿಸಬೇಕು ಎಂದು ಕಸಾಪ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ದಾನಿ ಪೃಥ್ವಿರಾಜ್ ಹೆಗ್ಡೆ, ಅದಮಾರು ಮಠ ಶಿಕ್ಷಣ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಅಶೋಕ್, ಶೆರ್ಲಿನ್ ಮನೋಜ್, ಅನಂತ ಪಟ್ಟಾಭಿರಾವ್ ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಕರಂದ ಸ್ವಾಗತಿಸಿ, ರಮಾಕಾಂತ ರಾವ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ರಾಘವೇಂದ್ರ ರಾವ್ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು.
ಸನ್ಮಾನ, ಪುಸ್ತಕ ವಿತರಣೆ
15 ಸಾವಿರ ರೂ.ಗಳ ಆರೋಗ್ಯ ನಿಧಿ, ಸ್ಪೋಕನ್ ಇಂಗೀಷ್ ಕೋರ್ಸ್ನ 3500 ರೂ. ಬೆಲೆಯ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು. 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಗಳಿಸಿದ ವಿದ್ಯಾರ್ಥಿ ಸತ್ಯಸ್ವರೂಪ, ದಾನಿ ಪೃಥ್ವಿರಾಜ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.