ಕಾಸರಗೋಡು: ನೀಲೇಶ್ವರ ಚಿರಪ್ಪುರಂ ಅಲಿಕ್ಕಲ್ ನಿವಾಸಿ ಒ.ವಿ.ರವೀಂದ್ರನ್ ಮನೆಯಿಂದ ಹಾಡಹಗಲೇ ನಗ-ನಗದು ಕಳವು ನಡೆಸಿದ ಆರೋಪಿಯನ್ನು ತಾಸಿನೊಳಗೆ ಬಂಧಿಸುವಲ್ಲಿ ನೀಲೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಟ್ಟಾರಕ್ಕರ ಏಳುಕ್ಕೋಟ್ ಇಡಕ್ಕಿಡಂ ನಿವಾಸಿ ಅಭಿರಾಜ್ ಬಂಧಿತ. ಮನೆಯಿಂದ 20 ಪವನು ಚಿನ್ನಾಭರಣ ಹಾಗೂ 10 ಸಾವಿರ ರೂ. ನಗದು ಕಳವುಗೈದಿರುವ ಬಗ್ಗೆ ಲಭಿಸಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಕೋಯಿಕ್ಕೋಡಿನತ್ತ ಪರಾರಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ನೀಲೇಶ್ವರ ಠಾಣೆ ಪೊಲೀಸರು ಕೋಯಿಕ್ಕೋಡ್ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದು, ಕಳವುಗೈದ ಚಿನ್ನ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
ಕಳವು ನಡೆಸಿದ ಮನೆ ವಠಾರದ ಸಿಸಿ ಕ್ಯಾಮರಾ ದೃಶ್ಯಾವಳಿ ಆರೋಪಿ ಪತ್ತೆಗೆ ಸಹಕಾರಿಯಾಗಿತ್ತು. ಬಂಗಳಂ ಕಕ್ಕಾಟ್ ಶಾಲೆಯಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ರವೀಂದ್ರನ್ ದಂಪತಿ ತೆರಳಿದ್ದಾಗ ಕಳವು ನಡೆದಿತ್ತು.