ನವದೆಹಲಿ: ವೆಸ್ಟ್ ಇಂಡೀಸ್-ಯುಎಸ್ಎ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಚುಟುಕು ವಿಶ್ವ ಸಮರದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಆಗಿದ್ದು, ರೋಹಿತ್ ಶರ್ಮ ಅಜೇಯ ಓಟಕ್ಕೆ ವಿಶ್ವ ಕ್ರಿಕೆಟ್ ದಂಗಾಗಿದೆ. ಇನ್ನೂ ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಮಾಜಿ ರನ್ನರ್ಅಪ್ ಪಾಕಿಸ್ತಾನವು ಸೂಪರ್ 08 ಹಂತ ಪ್ರವೇಶಿಸದೆ ಟೂರ್ನಿಯಿಂದ ಹರೊಬೀಳುವ ಮೂಲಕ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಪಾಕ್ ತಂಡದ ಹೀನಾಯ ಪ್ರದರ್ಶನಕ್ಕೆ ಸ್ವದೇಶದ ಮಾಜಿ ಆಟಗಾರರೇ ಕಿಡಿಕಾರಿದ್ದರು.
ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ಗೆ ತೆರಳುವ ಮುನ್ನ ನಾಯಕ ಬಾಬರ್ ಅಜಂ ಸೇರಿದಂತೆ ಪ್ರತಿಯೊಬ್ಬ ಆಟಗಾರನು ಈ ಬಾರಿ ಕಪ್ ಗೆದ್ದೇ ಹಿಂತಿರುಗುತ್ತೇವೆ ಎಂದು ತಿಳಿಸಿದ್ದರು. ಕಳೆದ ಎರಡು ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಆಡಿರುವ ಕಾರಣ ಈ ಸಲ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಆಟಗಾರರ ಕೊಟ್ಟ ಹೇಳಿಕೆಗಳಿಗೂ ತಂಡ ಕಳಪೆ ಪ್ರದರ್ಶ ನೀಡಿತ್ತು. ಅಲ್ಲದೇ ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ, ಪಾಕ್ ತಂಡದ ಮೇಲೆ ಟೀಕಾಸ್ತ್ರಗಳ ಪ್ರಯೋಗ ಮುಂದುವರೆದಿದ್ದು, ಪತ್ರಕರ್ತರೊಬ್ಬರ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬಾಲಕ ಬುದ್ಧಿ… ವಿಫಲತೆಯಲ್ಲೂ ವಿಶ್ವದಾಖಲೆ ನಿರ್ಮಿಸಿದ ಮಗು; ಲೋಕಸಭೆಯಲ್ಲಿ ರಾಹುಲ್ಗೆ ಮೋದಿ ಟಾಂಗ್
ಪಾಕಿಸ್ತಾನಿ ಸುದ್ದಿ ಮಾಧ್ಯಮದ ಖ್ಯಾತ ಆ್ಯಂಕರ್ ಶೋಯೆಬ್ ಜಾಟ್, ಪಾಕಿಸ್ತಾನದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿದ್ದು ನಾಯಕ ಬಾಬರ್ ಅಜಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಿಂಗ್ ಕೊಹ್ಲಿಯನ್ನು ಕಾಪಿ ಮಾಡಿದ್ದಕ್ಕೆ ನಿನಗೆ ಇಂದು ಈ ಪರಿಸ್ಥಿತಿ ಬಂದಿದೆ. ಆತನನ್ನು ಮಾದರಿಯನ್ನಾಗಿ ಇಟ್ಟುಕೊಂಡು ಆಟವಾಡು. ಅದು ಬಿಟ್ಟು ನಕಲು ಮಾಡಲು ಹೋಗಬೇಡ. ಕೊಹ್ಲಿಯ ಫಿಟ್ನೆಸ್ಅನ್ನು ನಕಲು ಮಾಡು ಆದರೆ, ಅವರಂತೆ ಆಡಲು ನಿನ್ನಿಂದ ಸಾಧ್ಯವಿಲ್ಲ. ಮೊದಲು ನಕಲು ಮಾಡುವುದನ್ನು ಬಿಡು ಎಂದು ಶೋಯೆಬ್ ಜಾಟ್ ಹೇಳಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ಪ್ರದರ್ಶನಕ್ಕೆ ಟೀಕೆಗಳು ಮುಂದುವರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಕ್ರೀಡಾಭಿಮಾನಿಗಳು ತಮ್ಮ ತಂಡವನ್ನು ಹೀನಾಯವಾಗಿ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ ಏರ್ಪೋರ್ಟ್ಗಳಲ್ಲಿ ಕ್ರಿಕೆಟಿಗರ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.