ಬಾರ್ಬಡೋಸ್: ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಭಾರತ ತಂಡವು ಗೆದ್ದು ಬೀಗಿದ್ದು, ಚುಟುಕು ವಿಶ್ವಸಮರದಲ್ಲಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಚೊಚ್ಚಲ ವಿಶ್ವಕಪ್ಅನ್ನು ಗೆದ್ದು ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವಲ್ಲಿ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ವಿಫಲವಾಗಿದ್ದು, ಫೈನಲ್ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಮುಗಿಸಿದೆ.
ಭಾರತ ಎರಡನೇ ಬಾರಿ ಚುಟುಕು ವಿಶ್ವಸಮರ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದು, ಈ ಇಬ್ಬರ ನಿರ್ಧಾರ ಹಲವರಿಗೆ ಅಚ್ಚರಿ ಮೂಡಿಸಿದೆ.
ಈ ಕುರಿತು ಮಾತನಾಡಿದ ರೋಹಿತ್, ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಇದುವೇ ನನ್ನ ಕೊನೆ ಪಂದ್ಯವಾಗಿದ್ದು, ವಿದಾಯ ಹೇಳಲು ಇದು ಸೂಕ್ತ ಸಮಯವಾಗಿದೆ. ನಾನು ತಂಡಕ್ಕೆ ಟ್ರೋಫಿಯನ್ನು ಗೆಲ್ಲಿಸಬೇಕು ಎಂದುಕೊಂಡಿದ್ದೆ ಅದೇ ರೀತಿ ಆಗಿದೆ. ಇದನ್ನು ವರ್ಣಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಬಾರಿ ನಾವು ಗೆದ್ದಿರುವುದು ಖುಷಿ ನೀಡಿದೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಬಳಿಕ ಕೊಹ್ಲಿ-ರೋಹಿತ್ಗೆ ಕೊಕ್, ಪಾಂಡ್ಯಾಗೆ ನಾಯಕನ ಪಟ್ಟ..? ಸೂರ್ಯಕುಮಾರ್ಗೂ ಇದೆ ಅವಕಾಶ!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್ ನೀಡಿದ ಭಾರತದ ಬೌಲರ್ಗಳು ದಿಟ್ಟ ಪ್ರತಿರೋಧದ ನಡುವೆಯೂ ಎದುರಾಳಿ ತಂಡವನ್ನು 20 ಓವರ್ಗಳಲ್ಲಿ 169 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ (3-0-20-3), ಅರ್ಷ್ದೀಪ್ ಸಿಂಗ್ (4-0-20-2), ಜಸ್ಪ್ರೀತ್ ಬುಮ್ರಾ (4-0-18-2), ಅಕ್ಷರ್ ಪಟೇಲ್ (4-0-49-1), ಕುಲ್ದೀಪ್ ಯಾದವ್ (4-0-45-0), ರವೀಂದ್ರ ಜಡೇಜಾ (1-0-12-0) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಗೆ ಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.