ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಹೊಸ ಕಾಯ್ದೆ ರೂಪಿಸಲು ಆಗ್ರಹಿಸಿ ಸೋಮವಾರ ಕನ್ನಡ ರಕ್ಷಣಾ ವೇದಿಕೆಯು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿರುವುದು ಸ್ವಾಗತಾರ್ಹ. ಆಯಾ ರಾಜ್ಯಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುತ್ತಿವೆ. ಅಷ್ಟೇ ಅಲ್ಲದೆ, ಹಲವು ಬಗೆಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರ ಜೀವನಸ್ತರ ಉತ್ತಮವಾಗಿಸಲು ಪ್ರಯತ್ನಿಸುತ್ತಿವೆ. ಆದರೆ, ಕರ್ನಾಟಕದಲ್ಲೇ ಕನ್ನಡಿಗರ ಕಡೆಗಣನೆ ವಿಷಾದನೀಯ. ಇದು ಹೊಸ ಸಮಸ್ಯೆಯೇನಲ್ಲ.
ಕಾಲಕಾಲಕ್ಕೆ ಕನ್ನಡಿಗರು ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳಿಗಾಗಿ ದನಿ ಎತ್ತಿದಾಗ ಒಂದಿಷ್ಟು ಸ್ಪಂದನೆ ಸಿಗುತ್ತದೆ. ಆದರೆ, ಶಾಶ್ವತ ಪರಿಹಾರ ಕ್ರಮಗಳು ಜಾರಿಗೆ ಬರದಿರುವುದು ಮಾತ್ರ ವಿಪರ್ಯಾಸ. ಅದರಲ್ಲೂ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಬೇಡಿಕೆ ಹಲವು ಬಾರಿ ಅನುರಣಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡ 80 ಉದ್ಯೋಗ ಮೀಸಲಿಡಬೇಕು ಎಂದು ಕರವೇ ಆಗ್ರಹಿಸಿದೆ. ಅಲ್ಲದೆ, ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಅಂಶವನ್ನು ಉದ್ದೇಶಿತ ಕಾನೂನಿನಲ್ಲಿ ಸೇರಿಸಬೇಕು.
ರಾಜ್ಯ ಸರ್ಕಾರ ರೂಪಿಸುವ ಕಾನೂನು ಜಾರಿ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಬೇಕು ಎಂದೂ ಕರವೇ ಆಗ್ರಹಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಭೇಟಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ‘ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ಸಮಗ್ರ ಕಾಯ್ದೆ ರೂಪಿಸುವ ಸಂಬಂಧ ಅಡ್ವೋಕೇಟ್ ಜನರಲ್ ಜತೆ ಚರ್ಚೆ ನಡೆಸಲಾಗುವುದು. ಸಾಂವಿಧಾನಿಕ ಚೌಕಟ್ಟಿನಲ್ಲಿ ಬೇಡಿಕೆ ಈಡೇರಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದಿದ್ದಾರೆ.
ಕನ್ನಡ ಭಾಷೆ ಎದುರಿಸುತ್ತಿರುವ ಆತಂಕಗಳು, ಸವಾಲುಗಳು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಸ್ಯೆಗಳು, ಕನ್ನಡಿಗರು ಉದ್ಯೋಗದ ನಿಟ್ಟಿನಲ್ಲಿ ಪಡುತ್ತಿರುವ ಪಾಡು ಇದೆಲ್ಲದರ ತೀವ್ರತೆ ಏನು ಎಂಬುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಗೊತ್ತಿಲ್ಲ ಎಂದೇನಲ್ಲ. ಏಕೆಂದರೆ, ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಅವರಿಗೆ ಇದ್ದು, ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದಾರೆ.
ಪ್ರತಿ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತರಕ್ಷಣೆ ವಿಷಯದಲ್ಲಿ ನಿರ್ಣಯ ಅಂಗೀಕರಿಸಿ, ಸರ್ಕಾರದ ಮೇಲೆ ಒತ್ತಡ ತರುತ್ತವೆ. ಈ ಹಿಂದಿನ ಸರ್ಕಾರಗಳು ಕೂಡ ‘ಕನ್ನಡಿಗರ ಹಿತರಕ್ಷಣೆಗೆ ಬದ್ಧ’ ಎಂಬ ಆಶ್ವಾಸನೆಯೇನೋ ನೀಡಿವೆ. ಆದರೆ, ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಸಾಕಷ್ಟಿದೆ. ಭರವಸೆಗಳು ಕಾಲಕ್ರಮೇಣ ಗೌಣವಾಗಿ ಹೋಗುತ್ತವೆ. ಆದ್ದರಿಂದ, ಕನ್ನಡಿಗರಿಗೆ ಉದ್ಯೋಗಾವಕಾಶ ಒದಗಿಸಲು ಕಾನೂನಿನ ಬಲವೇ ಅಗತ್ಯ. ಇದರ ಸಾಧಕ-ಬಾಧಕಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿ, ದುಡಿಯುವ ಕೈಗಳಿಗೆ ಕೆಲಸ ನೀಡುವಂಥ ವಾತಾವರಣ ಸೃಷ್ಟಿಸಬೇಕು. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಗರಿಗೆ ಅನಾಥಪ್ರಜ್ಞೆ ಕಾಡುವಂತಾಗಬಾರದು.
ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳನ್ನು, ವರ್ತಮಾನದ ತಲ್ಲಣವನ್ನು ನಿವಾರಣೆ ಮಾಡಿ, ಕನ್ನಡವನ್ನು ಅನ್ನದ ಭಾಷೆಯಾಗಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಹಿಂದೆಂದಿಗಿಂತ ಹೆಚ್ಚಬೇಕಿವೆ.
ಹೊಸ ಕ್ರಿಮಿನಲ್ ಅಪರಾಧ ಕಾನೂನಿನಡಿ ದಿನವೇ ರಾಜ್ಯಾದ್ಯಂತ 63 ಎಫ್ಐಆರ್ ದಾಖಲು