ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಯಾವುದೇ ಕಾರ್ಯದ ಯಶಸ್ವಿ ಅನುಷ್ಠಾನಕ್ಕೆ ಆಸಕ್ತಿ ಮತ್ತು ಅನುಭವ ಅತ್ಯಗತ್ಯ. ನಾಲ್ಕು ಗೋಡೆಗಳ ಮಧ್ಯೆ ಪಡೆಯುವ ಶಿಕ್ಷಣ ಅಂಕಗಳಿಗೆ ಮಾತ್ರ ಸೀಮಿತವಾಗುತ್ತದೆ. ಜೀವನದ ಜಂಜಾಟಗಳ ಬಗ್ಗೆ ಅರಿವಾಗಬೇಕಾದರೆ ಸಮಾಜದೊಂದಿಗೆ ಬೆರೆಯಬೇಕು ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಹೇಳಿದರು.
ಬೆಟ್ಟಂಪಾಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಅಂತಿಮ ಮೌಲ್ಯಮಾಪನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಗತಿಪರ ಕೃಷಿಕ ಶ್ರೀನಿವಾಸ ಭಟ್ ಚಂದುಕೂಡ್ಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎನ್ನೆಸ್ಸೆಸ್ ಯೋಜನೆಗಳು ಸಾಮಾಜಿಕ ಬಂಧ ಹಾಗೂ ಜೀವನ ಪಾಠಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಲೋಯ್ಡ ವಿಕ್ಕಿ ಡಿಸೋಜ ಮಾತನಾಡಿ, ಯೋಜನೆಯ ನಿರ್ವಹಿಸುವಿಕೆ ಜವಾಬ್ದಾರಿ ಅದ್ಭುತ ಅನುಭವಗಳನ್ನು ಕಲ್ಪಿಸಿಕೊಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಯೋಗೀಶ್ ಎಲ್.ಎನ್.ಮಾತನಾಡಿದರು. ಎನ್ನೆಸ್ಸೆಸ್ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಸಹಕರಿಸಿದ ಶ್ರೀನಿವಾಸ ಭಟ್ ಚಂದುಕೂಡ್ಲು ಅವರನ್ನು ಸನ್ಮಾನಿಸಲಾಯಿತು.
ಎನ್ನೆಸ್ಸೆಸ್ ಘಟಕ ನಾಯಕಿ ಕೃತಿಕಾ ಎನ್ನೆಸ್ಸೆಸ್ನ ವಾರ್ಷಿಕ ವರದಿ ವಾಚಿಸಿದರು. ಘಟಕ ನಾಯಕರಾದ ರಕ್ಷಣ್ ರೈ ಸ್ವಾಗತಿಸಿ, ಪ್ರಜ್ವಲ್ ಆರ್.ಸಿ.ವಂದಿಸಿದರು. ದೀಪ್ತಿ ನಿರೂಪಿಸಿದರು.