ಮುಂಡರಗಿ: ಪಟ್ಟಣದ ತಾಪಂ ಸಭಾಭವನದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧ್ಯಕ್ಷತೆಯಲ್ಲಿ ಸೋಮವಾರ ಜನ ಸ್ಪಂದನ ಸಭೆ ಏರ್ಪಡಿಸಲಾಗಿತ್ತು. ಶಾಸಕ ಡಾ. ಚಂದ್ರು ಅವರು ಸಸಿಗೆ ನೀರುಣಿಸಿ ಉದ್ಘಾಟಿಸಿದರು.
ಬೆಳೆ ವಿಮೆ ತಾರತಮ್ಯ, ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ, ಕಟ್ಟಡ ಕಾರ್ಮಿಕ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ, ಆಶ್ರಯ ಮನೆ ನಿವೇಶನ ಹಂಚಿಕೆ, ನಗರೋತ್ಥಾನ ಕಾಮಗಾರಿ ವಿಳಂಬ, ಹೆದ್ದಾರಿ ವಿಭಜಕ, ಅಕ್ರಮ ಅಕ್ಕಿ ಸಂಗ್ರಹ, ಹೀಗೆ 85ಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೆ ಬಂದು ಸಂಬಂಧಪಟ್ಟವರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
ಕೊರ್ಲಹಳ್ಳಿ ಗ್ರಾಮದಲ್ಲಿ ಸರ್ವೇ ನಂ.319ರ 15 ಎಕರೆ, ಸ.ನಂ. 322ರ 27ಎಕರೆ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಹೆಸರಿನಲ್ಲಿ ಜಮೀನೂ ಖರೀದಿಸಿ ಪಹಣಿ ಪತ್ರ ಮಾಡಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ದೀನ ದಲಿತರ ಧ್ವನಿ ಅಂಬೇಡ್ಕರ್ ಸಂಘದ ಅಧ್ಯಕ್ಷ ನಾಗರಾಜ ಹೊಸಮನಿ ದೂರು ಸಲ್ಲಿಸಿದರು.
ಕಾರ್ಮಿಕ ಅಡಿವೆಪ್ಪ ಚಲವಾದಿ ಅವರು, ಆಶ್ರಯ ಮನೆಗಾಗಿ ಜಮೀನು ಖರೀದಿಸಿದರೂ ಫಲಾನುಭವಿಗಳ ಆಯ್ಕೆ ಮಾಡಿಲ್ಲ ಎಂಬ ಮನವಿಗೆ ಪ್ರತಿಕ್ರಿಯಿಸಿದ ಶಾಸಕ ಡಾ.ಚಂದ್ರು ಅವರು, ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು. ಮುಖ್ಯಾಧಿಕಾರಿ ಶಂಕರ ಮಾಹಿತಿ ನೀಡಿದರು. ಕಾರ್ಮಿಕರ ಮಕ್ಕಳಿಗೆ ಶೀಘ್ರವೇ ಲ್ಯಾಪ್ಟಾಪ್ ವಿತರಿಸುವಂತೆ ಅಡಿವೆಪ್ಪ ಒತ್ತಾಯಿಸಿದರು.
ಅಂಗನವಾಡಿ, ಗರ್ಭಿಣಿಯರಿಗೆ ವಿತರಿಸುವ 70ರಿಂದ 80 ಟನ್ಗಿಂತಲೂ ಹೆಚ್ಚು ಅಕ್ಕಿ ಹಾಳಾಗಿದೆ. ಇಷ್ಟೊಂದು ಪ್ರಮಾಣದ ಅಕ್ಕಿ ಸಂಗ್ರಹವಾಗಿದ್ದರೂ ಕ್ರಮ ಏಕಿಲ್ಲ? ಎಂದು ಮೈಲಾರಪ್ಪ ಕಲಕೇರಿ ಹಾಗೂ ಬಸವರಾಜ ಎಂಬುವವರು ಪ್ರಶ್ನಿಸಿದರು. ಅಕ್ಕಿ ಅಕ್ರಮ ಸಂಗ್ರಹ ಮಾಡಿದವರ ಮೇಲೆ ಎಫ್ಐಆರ್ ದಾಖಲಿಸುವಂತೆ ತಹಸೀಲ್ದಾರರಿಗೆ ಡಿಸಿ ಸೂಚಿಸಿದರು.
ಪಟ್ಟಣದಲ್ಲಿ ಹೆದ್ದಾರಿಯಲ್ಲಿ ರಸ್ತೆ ವಿಭಜಕ ನಿರ್ಮಿಸುವಂತೆ ವಿ.ಎಸ್. ಘಟ್ಟಿ, ಸಿಂಗಟಾಲೂರು ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸಬೇಕೆಂದು ರೈತ ಎಚ್.ಬಿ. ಕುರಿ, ತಾಲೂಕಿನಲ್ಲಿ ಹನಿ ನೀರಾವರಿ ಬದಲಾಗಿ ಕಾಲುವೆ ಮೂಲಕ ನೀರು ಹರಿಸಬೇಕು ಎಂದು ರೈತ ಶಿವಾನಂದ ಇಟಗಿ ಮನವಿ ಮಾಡಿದರು.
ಸ್ಥಳೀಯ ಅಂಬೇಡ್ಕರ್ ನಗರದ ನಿವಾಸಿಗಳಿಗೆ ಮನೆ ಹಕ್ಕುಪತ್ರ ಸೌಲಭ್ಯ ಇಲ್ಲ, ಉತಾರ ವಿತರಿಸಬೇಕು ಎಂದು ಪುರಸಭೆ ಸದಸ್ಯ ಸಂತೋಷ ಹಿರೇಮನಿ ಹೇಳಿದರು. ಪುರಸಭೆ ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ಜ್ಯೋತಿ ಹಾನಗಲ್ಲ ಅವರು ಪಟ್ಟಣದ 23ವಾರ್ಡ್ಗಳಲ್ಲಿ ನಗರೋತ್ಥಾನ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದರು.
ತನಿಖೆಗೆ ಆದೇಶ
ಅಕ್ರಮ ಅಕ್ಕಿ ಸಂಗ್ರಹ ಮತ್ತು ಸಾಗಣೆದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಸ್ವತಃ ನಾವೇ ಹಿಡಿದುಕೊಟ್ಟಾಗ ಮಾತ್ರ ಪ್ರಕರಣ ದಾಖಲಿಸುತ್ತಾರೆ. ಕೆಲ ಅಧಿಕಾರಿಗಳು ಅಕ್ರಮವಾಗಿ ಅಕ್ಕಿ ಸಾಗಣೆದಾರರೊಂದಿಗೆ ಶಾಮೀಲಾಗಿದ್ದಾರೆ. ಅಧಿಕಾರಿಗಳು ವ್ಯವಹಾರ ಮಾಡಿದ ಬಗ್ಗೆ ಅಧಿಕೃತ ಸಾಕ್ಷಿ ಇದೆ ಎಂದು ನಾಗರಾಜ ಹೊಸಮನಿ ದೂರು ಸಲ್ಲಿಸಿದರು. ಈ ಬಗ್ಗೆ ತನಿಖೆ ನಡೆಸುವಂತೆ ಎಸಿ ಡಾ. ವೆಂಕಟೇಶ ಅವರಿಗೆ ಡಿಸಿ ವೈಶಾಲಿ ಆದೇಶಿಸಿದರು.
ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ತಹಸೀಲ್ದಾರ್ ಧನಂಜಯ ಎಂ., ತಾಪಂ ಇಒ ವಿಶ್ವನಾಥ ಹೊಸಮನಿ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.