ವಿಜಯವಾಣಿ ವರದಿ ಫಲಶೃತಿ | ಕಲ್ಸಂಕಕ್ಕೆ ಭೇಟಿ, ಪರಿಶೀಲನೆ
ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸಲಹೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಕಲ್ಸಂಕದಿಂದ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಯಾರ್ಡ್ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಇರುವ ತೋಡಿಗೆ ತಕ್ಷಣ ಸುರಕ್ಷತಾ ಗೋಡೆ ನಿರ್ಮಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚಿಸಿದರು.
ಕಲ್ಸಂಕದಲ್ಲಿರುವ ತೋಡಿಗೆ ನಗರಸಭೆಯ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸೇತುವೆಯ ಒಂದು ಭಾಗದಲ್ಲಿ ನೀರು ನಿಲ್ಲುತ್ತಿದ್ದು, ಅದನ್ನು ತೆರವು ಮಾಡುವಂತೆ ಹಾಗೂ ಸೇತುವೆಯ ರಂಧ್ರಗಳಲ್ಲಿ ಕಟ್ಟಿರುವ ಕಸ-ಕಡ್ಡಿ ತೆಗೆದು ಮತ್ತೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಸ್ತಾವನೆ ಸಲ್ಲಿಸಿ
ನಿತ್ಯ ಸಾವಿರಾರು ಮಂದಿ ಸಂಚರಿಸುವ ರಸ್ತೆ ಇದಾಗಿದ್ದು, ಇತ್ತೀಚೆಗೆ ಆಟೋ ಪಲ್ಟಿಯಾಗಿ ನಾಲ್ವರು ಗಾಯಗೊಂಡಿದ್ದಾರೆ. ಸುಗಮ ಸಂಚಾರ ಹಾಗೂ ಜನರ ಜೀವ ಸುರಕ್ಷತೆಗಾಗಿ ದಂಡೆಯ ಎರಡೂ ಕಡೆ ಸುರಕ್ಷತಾ ಕ್ರಮಕ್ಕಾಗಿ ತಡೆಗೋಡೆ ನಿರ್ಮಿಸಲು ಹಾಗೂ ಶಿಥಿಲಗೊಂಡಿರುವ ತೋಡಿನ ಬದಿಗಳ ಮರು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಯ ಸದಸ್ಯರಾದ ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ನಗರಸಭೆ ಎಇಇ ದುರ್ಗಾ ಪ್ರಸಾದ್ ಇತರರಿದ್ದರು.
ದಂಡೆಗೆ ತಡೆಬೇಲಿ ಹಾಕೋರ್ಯಾರು?
ನಗರದ ಹೃದಯ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಲ್ಸಂಕ ಸರ್ಕಲ್ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಹಾಗೂ ಯಾತ್ರಿಕರ ವಾಹನ ನಿಲುಗಡೆಗೆ ತೆರಳುವ ಈ ಮಾರ್ಗ ಅಪಾಯಕಾರಿಯಾಗಿದ್ದು, ‘ದಂಡೆಗೆ ತಡೆಬೇಲಿ ಹಾಕೋರ್ಯಾರು?’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಗುರುವಾರ ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು.