ಬೆಂಗಳೂರು: ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂಬ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಸಚಿವ ಕೆ.ಎನ್. ರಾಜಣ್ಣ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿಗೆ ಸಿಎಂ ಸ್ಥಾನ? ಖಡಕ್ ಪ್ರತಿಕ್ರಿಯೆ ಕೊಟ್ಟ ಶಾಮನೂರು ಶಿವಶಂಕರಪ್ಪ
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿಎಂ ಸ್ಥಾನ ಯಾರು ಬಿಟ್ಟು ಕೊಡೋದಕ್ಕೆ ಹೋಗ್ತಾರೆ? ಆ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟು ಕೊಡ್ತಾರಾ..? ಕೇಳಿ ನೋಡಿ… ನಾನೇ ಸ್ವಾಮೀಜಿ ಆಗ್ತೇನೆ ಎಂದು ಸ್ವಾಮೀಜಿಗೆ ತಿರುಗೇಟು ನೀಡಿದ್ದಾರೆ.
ನಾಳೆಯಿಂದ ನಾನು ಕಾವಿ ಬಟ್ಟೆ ಹಾಕಿಕೊಳ್ಳುತ್ತೇನೆ ಅವರು ತಮ್ಮ ಸ್ಥಾನ ಬಿಟ್ಟು ಕೊಡುತ್ತಾರಾ..? ಅವರು ಬಿಟ್ಟುಕೊಡಲ್ಲ, ಇವರೂ ಸಹ ಬಿಟ್ಟು ಕೊಡಲ್ಲ. ಸ್ವಾಮೀಜಿಗಳು ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಅವರು ಸದ್ದುದ್ದೇಶದಿಂದ ಹೇಳಿದ್ದಾರೋ ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಆದರೆ ಮುಂದಿನ ಹತ್ತು ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ಎಂದು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಚಂದ್ರಶೇಖರನಾಥ ಸ್ವಾಮೀಜಿ ಏನ್ ಹೇಳಿದ್ದೇನು ?: ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಶ್ರೀ ವೇದಿಕೆ ಮೇಲೆಯೇ ಸಿದ್ದರಾಮಯ್ಯರನ್ನು ಉದ್ದೇಶಿಸಿ, ನಿಮಗೆ ಅನುಭವ ಇದೆ, ಈಗ ಡಿಕೆ ಶಿವಕುಮಾರ್ಗೆ ಅವಕಾಶ ಮಾಡಿಕೊಡಿ ಎಂದಿದ್ದರು. ಸದ್ದರಾಮಯ್ಯನವರು ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ. ಹಾಗಾಗಿ ಸಿಎಂ ಸ್ಥಾನ ಡಿಕೆ ಶಿವಕುಮಾರ್ಗೆ ಅವರು ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಶ್ರೀಗಳು ಮನವಿ ಮಾಡಿದ್ದರು.