ಮಂಗಳೂರು : ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಆಚರಣೆ ಅಂಗವಾಗಿ ಮಹಾನಗರಪಾಲಿಕೆ ವ್ಯಾಪ್ತಿಯ ಬ್ರಹ್ಮಶ್ರೀ ನಾರಾಯಣ ಗುರುಮಂದಿರಗಳಿಗೆ ತಲಾ 15ಸಾವಿರ ರೂ. ಅನುದಾನ ನೀಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.
ಮೇಯರ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಿಕೆಯ ಸುಧಾರಣಾ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ ಅವರ ಸಲಹೆ ಮೇರೆಗೆ ಈ ಯೋಜನೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡಿ, ಈಗ ಅನುಷ್ಠಾನಗಳಿಸಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಬಳಿಕ ಕಾರ್ಯಕ್ರಮದ ಖರ್ಚು ವೆಚ್ಚದ ಮಾಹಿತಿಯನ್ನು ಮಹಾ ನಗರ ಕೆಗೆ ಸಲ್ಲಿಕೆ ಮಾಡಿ ಅನುದಾನ ಪಡೆಯಬಹುದು ಎಂದರು.
ನಗರದ ನಾರಾಯಣಗುರು ವೃತ್ತವನ್ನು ಮುಡಾ ನಿರ್ಮಿಸಿದ್ದು, ಇದನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮಂಡಳಿ ನಿರ್ವಹಣೆಗೆ ನೀಡುವಂತೆ ತಿಳಿಸಿದೆ. ಶೀಘ್ರದಲ್ಲೇ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ವೃತ್ತವನ್ನು ದೇವಸ್ಥಾನದ ಆಡಳಿತ ಮಂಡಳಿಯೇ ನಿರ್ವಹಣೆ ಮಾಡಲಿದೆ ಎಂದರು.
*ಜು.8ರಂದು ಹಸಿರೇ ಉಸಿರು
ಮನಪಾ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಜು. 8ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಹಸಿರೇ ಉಸಿರು’ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ವಾರ್ಡ್ಗೆ ಕನಿಷ್ಠ 100 ಗಿಡದಂತೆ ಒಟ್ಟು 10 ಸಾವಿರ ಗಿಡ ವಿತರಣೆ ಮಾಡಲು
ನಿರ್ಧರಿಸಲಾಗಿದೆ. ಮನಪಾ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ಓವರ್ಹೆಡ್ ಟ್ಯಾಂಕ್ಗಳಿದ್ದು, ಆಯಾ ವಾರ್ಡ್ನ ಓವರ್ಹೆಡ್ ಟ್ಯಾಂಕ್, ಸರ್ಕಾರಿ ಶಾಲೆ, ಸರ್ಕಾರಿ ಜಾಗಗಳನ್ನು ಗುರುತಿಸಿ ಗಿಡ ನೆಡಲು ತೀರ್ಮಾನಿಸಲಾಗಿದೆ ಎಂದರು.
ಖಾಸಗಿ ಸಂಸ್ಥೆಗಳು ಕೆಲವು ರಸ್ತೆಗಳ ನಿರ್ವಹಣೆಗೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದು, ಅವರಿಗೆ ಒಂದೊಂದು ರಸ್ತೆಯನ್ನು ಬಿಟ್ಟುಕೊಡುವ ಚಿಂತನೆ ಮಾಡಲಾಗುತ್ತಿದೆ. ಆ ರಸ್ತೆಗಳ ಸಂಪೂರ್ಣ ನಿರ್ವಹಣೆಯನ್ನು ಆಯಾ ಸಂಸ್ಥೆಗಳು ವಹಿಸಲಿವೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್ ಉಪಸ್ಥಿತರಿದ್ದರು.