ಕೊಳ್ಳೇಗಾಲ: ಪಟ್ಟಣದ ಶಂಕನಪುರ ಬಡಾವಣೆಯ ಹೊರವಲಯದದಲ್ಲಿ ಸೋಮವಾರ ಚಿರತೆ ಪ್ರತ್ಯಕ್ಷವಾಗಿದ್ದು, ಈ ಭಾಗದ ಜನರು ಭಯ ಭೀತರಾಗಿದ್ದಾರೆ.
ಮುಡಿಗುಂಡ ರಾಷ್ಟ್ರೀಯ ಹೆದ್ದಾರಿ (209) ಯಿಂದ ಶಂಕನಪುರ ಬಡಾವಣೆಗೆ ತೆರಳುವ ಮಾರ್ಗದಲ್ಲಿ ಸಿಗುವ ರೇಷ್ಮೆ ಇಲಾಖೆಗೆ ಸೇರಿದ ಸರಸ್ವತಿ ಲೇಬರ್ ಕಾಲನಿ ಸಮೀಪ ಚಿರತೆ ಕಾಣಿಸಿಕೊಂಡಿದೆ.
ಶಂಕನಪುರ ಗ್ರಾಮದ ಟ್ರ್ಯಾಕ್ಟರ್ ಚಾಲಕ ಚಂದ್ರು ಎಂಬುವರು ತನ್ನ ಸ್ನೇಹಿತನೊಡನೆ ಸೋಮವಾರ ರಾತ್ರಿ 7.30ರ ಸುಮಾರಿನಲ್ಲಿ ಮುಡಿಗುಂಡದಿಂದ ಶಂಕನಪುರಕ್ಕೆ ಬೈಕ್ನಲ್ಲಿ ತೆರಳುವಾಗ ರೇಷ್ಮೆ ಇಲಾಖೆಗೆ ಸೇರಿದ ಸರಸ್ವತಿ ಲೇಬರ್ ಕಾಲನಿ ಸಮೀಪದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ನೋಡಿ ದಿಗ್ಭ್ರಮೆಗೊಳಗಾದ ಚಂದ್ರು ವೇಗವಾಗಿ ಬೈಕ್ ಚಲಾಯಿಸಿಕೊಂಡು ಶಂಕನಪುರಕ್ಕೆ ಬಂದಿದ್ದಾರೆ. ನಂತರ, ಚಿರತೆ ಕಾಣಿಸಿದ ವಿಚಾರವನ್ನು ಗ್ರಾಮದ ಜನರಿಗೆ ತಿಳಿಸಿದ್ದರಲ್ಲದೆ, ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ.
ನಂತರ, ಫಾರೆಸ್ಟ್ ಗಾರ್ಡ್ ಹೂಗಾರ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಚಿರತೆ ಹೆಜ್ಜೆ ಗುರತು ಪತ್ತೆಯಾಗಿಲ್ಲ. ಮಳೆ ಬಿದ್ದಿದ್ದ ಕಾರಣ ಗಿಡಗಳು, ಸತ್ತೆಗಳು ಬೆಳೆದಿರುವ ಕಾರಣಕ್ಕೆ ಹೆಜ್ಜೆ ಗುರುತು ಬಿದ್ದಿಲ್ಲ ಎಂದು ಅರಣ್ಯಾಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ. ಈ ಭಾಗದಲ್ಲಿ ಕಬ್ಬಿನ ಗದ್ದೆಗಳಿದ್ದು, ಅಲ್ಲಿ ಚಿರತೆ ವಾಸವಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಶಾಲಾ ಮಕ್ಕಳಿಗೆ ಆತಂಕ: ಚಿರತೆ ಕಾಣಿಣಿಕೊಂಡ ಸುಮಾರು 400 ಮೀಟರ್ ದೂರದಲ್ಲಿಯೇ ಮುಡಿಗುಂಡ ಆದರ್ಶ ಶಾಲೆ ಹಾಗೂ ಸರ್ಕಾರಿ ಐಟಿಐ ಕಾಲೇಜಿದ್ದು. ಶಾಲಾ -ಕಾಲೇಜು ಮಕ್ಕಳಲ್ಲಿ ಚಿರತೆ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅರಣ್ಯಾಧಿಕಾರಿಗಳು ಈ ಭಾಗದಲ್ಲಿ ಗಸ್ತು ತಿರುಗಿ ಚಿರತೆ ಸೆರೆಯಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
==================