ಗುರುಪುರ: ವಾಮಂಜೂರಿನ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮಾನೋತ್ಸವ ಜತೆಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ವತಿಯಿಂದ ಮೇ 11ರಿಂದ 13ರವರೆಗೆ ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಕೃಷಿಮೇಳದಲ್ಲಿ ಪ್ರಾಚೀನ ಕೃಷಿಪರಿಕರಗಳ ಪ್ರದರ್ಶನ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಗಮನ ಸೆಳೆಯಿತು.
ಸಮೀಪದ ಶಾಲಾ ಕೊಠಡಿ ಹಾಗೂ ಹೊರಾಂಗಣದಲ್ಲಿ ಹಳೆಯ ಕಾಲದ ವಸ್ತುಗಳ ಬೃಹತ್ ಪ್ರದರ್ಶನ ಏರ್ಪಡಿಸಲಾಗಿತ್ತು. ಕೃಷಿ, ದೈವ-ದೇವಾರಾಧನೆಗೆ ಸಂಬಂಧಿಸಿದ ಹಳೆಯ ಸೊತ್ತುಗಳ ಜ ತೆಗೆ ಮನೆಗಳಲ್ಲಿ ಬಳಕೆಯಾಗುತ್ತಿದ್ದ ದಿನಬಳಕೆ ಸೊತ್ತುಗಳು, ಹಳೆಯ ನಾಣ್ಯ, ದೇಶ-ವಿದೇಶಗಳ ಕರೆನ್ಸಿ ಇತ್ಯಾದಿಗಳು ಕಣ್ಮನ ಸೆಳೆಯುವಂತಿವೆ.
![ಕೃಷಿಮೇಳದಲ್ಲಿ ಗಮನಸೆಳೆದ ವಸ್ತುಪ್ರದರ್ಶನ](https://cdn.vvimgs.com/wp-content/uploads/2024/05/20013600/vikshane.webp)
ಬುಟ್ಟಿ, ಕತ್ತಿ, ಮಡಕೆ ಮಾರಾಟ
ಕಾರ್ಕಳದ ಎಣ್ಣೆಹೊಳೆಯ ಕೊರಗ ಪಾಣಾರ, ಕಡ್ತಲದ ಪಜಿರ, ಬಾಬು ಎಂಬುವರು ಸ್ಥಳದಲ್ಲೆ ಕೃಷಿ, ಮೀನುಗಾರಿಕೆ ಮತ್ತು ಗೃಹೋಪಯೋಗದ ವಿವಿಧ ಶೈಲಿಯ ಬುಟ್ಟಿ ಹೆಣೆದು ಗಮನ ಸೆಳೆದರೆ, ಗೆರಸೆ, ಕುಡುಪು, ಮುಟ್ಟಾಳೆ ಹಾಗೂ ವಿವಿಧ ರೀತಿಯ ಬುಟ್ಟಿಗಳು ಮಾರಾಟಕ್ಕಿಡಲಾಗಿತ್ತು. ಕಾರ್ಕಳದ ಬಡಗಿಯೊಬ್ಬರು ಸ್ಥಳದಲ್ಲೇ ಕತ್ತಿ ಮತ್ತಿತರ ಸೊತ್ತು ತಯಾರಿಸಿದರೆ, ಕಾರ್ಕಳ ನಕ್ರೆಯ ಸುಂದರಿ ಹಾಗೂ ಮನೆಯವರು ಮಡಕೆ ತಯಾರಿಸುತ್ತಿದ್ದರು.
ಆಹಾರ ಮೇಳ, ಫಲಪುಷ್ಪಗಳ ಪ್ರದರ್ಶನ
ಖಾದ್ಯ ಪ್ರಿಯರನ್ನು ಆಹಾರ ಮೇಳ ಆಹ್ವಾನಿಸಿದರೆ, ತೊಟ್ಟಿಲು, ಆಟಿಕೆಗಳ ಸಂತೆಗಳು ಮಕ್ಕಳ ಆಕರ್ಷಣೆಯ ಕೇಂದ್ರಗಳಾಗಿತ್ತು ವಿವಿಧ ಬಗೆಯ ಫಲಪುಷ್ಪಗಳ ಪ್ರದರ್ಶನ ಮಾರಾಟ, ವಾಹನ ಮೇಳ, ಆಯುರ್ವೇದ ಸೊತ್ತುಗಳ ಮಾರಾಟ ಸ್ಟಾಲುಗಳು, ಗೃಹೋಪಯೋಗಿ ಸೊತ್ತುಗಳ ಮಾರಾಟ, ಗುಡಿ ಕೈಗಾರಿಕೆ, ಸಾಂಸ್ಕೃತಿಕ ಆಟಗಳು, ಪಾರಂಪರಿಕ ಗ್ರಾಮ, ತಾರಾಲಯ ಹೀಗೆ ಕೃಷಿಕರು, ಸಾಮಾನ್ಯರು ಸಹಿತ ಹಿರಿಕಿರಿಯರನ್ನು ಆಕರ್ಷಿಸುತ್ತಿದ್ದವು.
![ಕೃಷಿಮೇಳದಲ್ಲಿ ಗಮನಸೆಳೆದ ವಸ್ತುಪ್ರದರ್ಶನ](https://cdn.vvimgs.com/wp-content/uploads/2024/05/20013559/madake.webp)
ಯಕ್ಷಗಾನ ವೈಭವ
ಬೆಳಗ್ಗೆ 7.15ಕ್ಕೆ ಶ್ರೀ ಅಮೃತೇಶ್ವರ ದೇವರ ಸಾನಿಧ್ಯದಲ್ಲಿ ಗೆಜ್ಜೆಪೂಜೆ, ವೇದಿಕೆಯಲ್ಲಿ ಚೌಕಿಪೂಜೆ ನಡೆಯಿತು. ಬಳಿಕ ಶ್ರೀನಿವಾಸ ಬಳ್ಳಮಂಜ ಅವರ ಶಿಷ್ಯರಿಂದ ‘ಯಕ್ಷ ಗಾನವೈಭವ’ ನಡೆಯಿತು.
![ಕೃಷಿಮೇಳದಲ್ಲಿ ಗಮನಸೆಳೆದ ವಸ್ತುಪ್ರದರ್ಶನ](https://cdn.vvimgs.com/wp-content/uploads/2024/05/20013558/gida-mara.webp)
ಬೆಳಗ್ಗೆ 9ಕ್ಕೆ ಶ್ರೀ ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಸ್ತು ಪ್ರದರ್ಶನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿಉದ್ಘಾಟಿಸಿದರು. ಪೇಜಾವರ ಶ್ರೀ ಗೋಪೂಜೆ ನಡೆಸಿದರು. ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರು ಸ್ವಾಗತಿಸಿದರು. ಎ.ಬಿ. ಶೆಟ್ಟಿ ದಂತ ವಿಜ್ಞಾನ ಸಂಸ್ಥೆಯ ಡಾ. ಶಿಲ್ಪಾ, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಅನಿಲ್, ಆಯುರ್ವೇದ ವೈದ್ಯ ಡಾ. ರವಿ ಗಣೇಶ್, ಜಾಣು ಶೆಟ್ಟಿ ಮೆಮೋರಿಯಲ್ ಎಜ್ಯುಕೇಶನ್ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸೀತಾರಾಮ ಜಾಣು ಶೆಟ್ಟಿ, ವ್ಯವಸ್ಥಾಯ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ, ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುತ್ತು ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಆಳ್ವಾಸ್ವಿದ್ಯಾರ್ಥಿಗಳಿಂದ ‘ಹನುಮ ಒಡ್ಡೋಲಗ’, ಜಿಲ್ಲೆಯ ಯಕ್ಷಗಾನ ಹಾಸ್ಯ ಕಲಾವಿದರಿಂದ ಯಕ್ಷಗಾನ ಹಾಸ್ಯವೈಭವ, ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಕಲಾವಿದರಿಂದ ‘ಮೇದಿನಿ ನಿರ್ಮಾಣ-ಮಹಿಷ ವಧೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.