ಆರ್.ತುಳಸಿಕುಮಾರ್
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟ್ಯಾಕ್ಸಿ ವಾಹನ ನಿಲುಗಡೆ ಸ್ಥಳದಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಚಾಲಕರ ಮನಗೆದ್ದಿದೆ. ದಿನನಿತ್ಯ 3 ಸಾವಿರಕ್ಕೂ ಹೆಚ್ಚು ತಿಂಡಿ, ಊಟ ಖರ್ಚಾಗುತ್ತಿದ್ದು, ಸೇವೆ ಆರಂಭವಾದ ಮೂರೇ ತಿಂಗಳಲ್ಲಿ ಭಾರೀ ಸಕ್ಸಸ್ ಕಂಡಿದೆ.
ಶ್ರಮಿಕರು ಹಾಗೂ ದುಡಿಯುವ ವರ್ಗದ ಹಸಿವು ನೀಗಿಸುವ ಉದ್ದೇಶದಿಂದ ಮಹಾನಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. 2017ರಲ್ಲಿ ಆರಂಭವಾದ ಈ ಯೋಜನೆ ಬಡವರಿಗೆ ಕಡಿಮೆ ದರದಲ್ಲಿ ಆಹಾರ ವಿತರಣೆಗೆ ಅವಕಾಶ ಕಲ್ಪಿಸಿದೆ. ಇದರ ಯಶಸ್ವಿ ಹಿನ್ನೆಲೆಯಲ್ಲಿ ಏರ್ಪೋರ್ಟ್ನಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಸಂಖ್ಯೆಯ ಟ್ಯಾಕ್ಸಿ ಚಾಲಕರಿಗೆ ಅನುಕೂಲ ಆಗಲೆಂದು ಸರ್ಕಾರ ಕಳೆದ ಮಾ.11ರಂದು ಕೆಐಎನ ಪಿ-7ರ ವಾಹನ ನಿಲುಗಡೆ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ಗೆ ಚಾಲನೆ ನೀಡಿತ್ತು. 100 ದಿನ ತುಂಬುವ ಮುನ್ನವೇ ಬಹಳಷ್ಟು ಚಾಲಕರ ಹಸಿವು ನೀಗಿಸುವ ಭೋಜನಾಲಯವಾಗಿ ಪರಿವರ್ತಿತವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತೆ ಕೆಐಎನಲ್ಲೂ ಬೆಳಗ್ಗೆ 7.30ರಿಂದ 10ರ ವರೆಗೆ ತಿಂಡಿ, ಮಧ್ಯಾಹ್ನ 12.30ರಿಂದ 3.30ರ ವರೆಗೆ ಭೋಜನ ಹಾಗೂ ರಾತ್ರಿ 7.30ರಿಂದ 9.30ರ ವರೆಗೆ ಊಟದ ವ್ಯವಸ್ಥೆ ಇದೆ. ಮೂರು ಹೊತ್ತು ಹೆಚ್ಚಿನ ಮಂದಿ ಆಹಾರ ಸೇವೆನಗೆ ಆಗಮಿಸುತ್ತಿದ್ದಾರೆ. ಟ್ಯಾಕ್ಸಿ ಚಾಲಕರಲ್ಲದೆ ಏರ್ಪೋರ್ಟ್ನಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಕಡಿಮೆ ವೆಚ್ಚದಲ್ಲಿ ಹೊಟ್ಟೆ ತುಂಬಿಸುತ್ತಿದೆ.
ವಾರಾಂತ್ಯ ಬೇಡಿಕೆ ಹೆಚ್ಚು:
ಕೆಐಎನಿಂದ ಶನಿವಾರ ಹಾಗೂ ಭಾನುವಾರ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದರಿಂದಾಗಿ ಟ್ಯಾಕ್ಸಿಗಳ ಓಡಾಟ ಹೆಚ್ಚಿರುತ್ತದೆ. ಇಡೀ ದಿನ ಪ್ರಯಾಣಿಕರನ್ನು ಪಿಕ್ಅಪ್, ಡ್ರಾಪ್ ಮಾಡುವ ಭರದಲ್ಲಿ ಊಟ ಮಾಡಲು ಚಾಲಕರಿಗೆ ಸಮಯವೇ ಸಿಗದ ಸ್ಥಿತಿ ಇರುತ್ತದೆ. ಬಿಡುವಿಲ್ಲದ ಕೆಲಸದ ಮಧ್ಯೆ ಹೊಂದಿಷ್ಟು ಸಮಯ ಹೊಂದಿಸಿಕೊಂಡು ಇಂದಿರಾ ಕ್ಯಾಂಟೀನ್ನಲ್ಲೇ ಹಸಿವು ನೀಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಬುತ್ತಿ ತಾರದವರು ಕೂಡ ಕೆಲವೊಮ್ಮೆ ಕ್ಯಾಂಟೀನ್ ಮೊರೆ ಹೋಗುವುದುಂಟು. ಕೆಲವೊಮ್ಮೆ ವಾರಾಂತ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ತಿಂಡಿ, ಊಟ ಸೇವಿಸುತ್ತಾರೆ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ‘ವಿಜಯವಾಣಿ’ಗೆ ತಿಳಿಸಿದರು.
ಪ್ಲೇಟ್, ನೀಗಿನ ಗ್ಲಾಸ್ ಕಾಣೆ:
ಕೆಐಎ ಕ್ಯಾಂಟೀನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚು ಮಂದಿ ಊಟಕ್ಕೆ ಬಂದಲ್ಲಿ ಪಕ್ಕದಲ್ಲೇ ಊಟ ಮಾಡಲು ಪ್ರತ್ಯೇಕ ಡೈನಿಂಗ್ ವ್ಯವಸ್ಥೆ ಇದೆ. ಆದರೆ, ಕ್ಯಾಂಟೀನ್ ಆರಂಭದ ವೇಳೆ ಖರೀದಿಸಿ ತಂದಿದ್ದ 2 ಸಾವಿರ ಊಟದ ಪ್ಲೇಟ್ಗಳಲ್ಲಿ 250ಕ್ಕೂ ಹೆಚ್ಚು ಕಾಣೆಯಾಗಿವೆ. ಹತ್ತಕ್ಕೂ ಅಧಿಕ ನೀರು ಕುಡಿಯುವ ಗ್ಲಾಸ್ಗಳು ಕಾಣೆಯಾಗಿವೆ. ಕೆಲ ಚಾಲಕರು ಕ್ಯಾಂಟೀನ್ ಆಹಾರವನ್ನು ಹೊರಗೆ ಪ್ಲೇಟ್ನಲ್ಲಿ ತೆಗೆದುಕೊಂಡು ಹೋಗಿ ಸೇವಿಸುತ್ತಾರೆ. ಹೆಚ್ಚಿನ ವೇಳೆ ಆ ಪ್ಲೇಟ್ಗಳು ವಾಪಸ್ ಕ್ಯಾಂಟೀನ್ನಲ್ಲಿ ಇಡದ ಕಾರಣ ಒಂದಿಷ್ಟು ಹಣ ಕೈಬಿಟ್ಟಿದೆ ಎಂದು ವ್ಯವಸ್ಥಾಪಕರು ಬೇಸರ ವ್ಯಕ್ತಪಡಿಸಿದರು.
ಮುದ್ದೆ ಊಟಕ್ಕೆ ಚಾಲಕರ ಒತ್ತಾಯ:
ಟ್ಯಾಕ್ಸಿ ಚಾಲಕರಲ್ಲಿ ಬಹುತೇಕರು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ದೈಹಿಕವಾಗಿ ಶ್ರಮ ಹಾಕುವ ಕೆಲಸವಾದ್ದರಿಂದ ಚಾಲಕರಿಗೆ ಉತ್ತಮ ಆಹಾರ ಸೇವನೆ ಅತ್ಯಗತ್ಯ. ಹೀಗಾಗಿ ಇಡ್ಲಿ ಸಾಂಬಾರು, ಬಿಸಿಬೇಳೆ ಬಾತ್, ಪೊಂಗಲ್, ಪಲಾವ್ ಹೊಟ್ಟೆ ತುಂಬಿಸದು. ಬಹಳಷ್ಟು ಚಾಲಕರು ಮಧ್ಯಾಹ್ನದ ವೇಳೆ ಮನೆಯಿಂದ ಬುತ್ತಿ ತರಲು ಸಾಧ್ಯವಾಗದು. ಹೀಗಾಗಿ ಮುದ್ದೆ ಊಟ ಪರಿಚಯಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಟ್ಯಾಕ್ಸಿ ಚಾಲಕರು ಹಕ್ಕೊತ್ತಾಯ ಮಾಡಿದ್ದಾರೆ.
ಏರ್ಪೋರ್ಟ್ನಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾದಾಗಿನಿಂದ ನಮ್ಮ ಚಾಲಕ ವರ್ಗದವರಿಗೆ ಬಹಳಷ್ಟು ಅನುಕೂಲವಾಗಿದೆ. ತಿಂಡಿ, ಊಟದ ಗುಣಮಟ್ಟ ಉತ್ತಮವಾಗಿದೆ. ಮಧ್ಯಾಹ್ನ ಮುದ್ದೆ ಊಟ ಪರಿಚಯಿಸಿದರೆ ಇನ್ನಷ್ಟು ಚಾಲಕ ಇಲ್ಲಿಯೇ ಊಟ ಮಾಡುತ್ತಾರೆ. ನಮ್ಮ ಮನವಿಯನ್ನು ಬಿಬಿಎಂಪಿ ಪರಿಗಣಿಸಲಿ.
– ಜಗದೀಶ್, ಟ್ಯಾಕ್ಸಿ ಚಾಲಕ, ನಾಗರಬಾವಿ
ದಿನವಿಡೀ ದುಡಿಯುವ ಟ್ಯಾಕ್ಸಿ ಚಾಲಕರಿಗೆ ಊಟ ಮಾಡಲು ಸರಿಯಾದ ಸಮಯವೇ ಸಿಗದು. ಇಂತಹ ವೇಳೆ ಏರ್ಪೋಟ್ ವಾಹನ ನಿಲುಗಡೆ ಸ್ಥಳದಲ್ಲಿಯೇ ಇಂದಿರಾ ಕ್ಯಾಂಟೀನ್ ಆರಂಭಿಸಿರುವುದು ಸ್ವಾಗತಾರ್ಹ. ಗುಣಮಟ್ಟವನ್ನು ಇನ್ನಷ್ಟು ಕಾಯ್ದುಕೊಳ್ಳಬೇಕು. ಹೊಸ ಮೆನು ಪರಿಚಯಿಸುವುದು ಅಗತ್ಯವಿದೆ.
– ಶಿವಾರೆಡ್ಡಿ, ಟ್ಯಾಕ್ಸಿ ಚಾಲಕ, ವಿಜಯನಗರ
ಹೆಚ್ಚುವರಿ ಸೌಲಭ್ಯದ ಅಗತ್ಯ:
* ಹಾಲಿ ಕ್ಯಾಂಟೀನ್ ಜತೆ ಹೆಚ್ಚುವರಿ ಕೊಠಡಿ ನಿರ್ಮಿಸಿದರೆ ಮಳೆಗಾಲದಲ್ಲಿ ಆಹಾರ ಸೇವನೆಗೆ ಅನುಕೂಲವಾಗಲಿದೆ.
* ಹೊಸ ಮೆನು ಶೀಘ್ರ ಆರಂಭಿಸಿದರೆ ಗ್ರಾಹಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.
* ಕುಡಿಯುವ ನೀರು ಸೌಲಭ್ಯಕ್ಕಾಗಿ ಹೆಚ್ಚುವರಿ ಕೌಂಟರ್ ಆರಂಭಿಸುವುದು.
* ಭದ್ರತೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕಿದೆ.
* ಆವರಣದ ಸ್ವಚ್ಛತೆ ಇನ್ನಷ್ಟು ಕಾಪಾಡಿಕೊಳ್ಳುವ ಅಗತ್ಯವಿದೆ.